ಮಂಡ್ಯ : ಮಂಡ್ಯದ ಗಂಡು ಅಂಬರೀಶ್ ಅಂದ್ರೆ ಅಭಿಮಾನಿಗಳಿಗೆ ಆರಾಧ್ಯ ದೈವ. ಕಲಿಯುಗದ ಕರ್ಣನಿಗೆ ಅಭಿಮಾನಿಗಳು ಪ್ರೀತಿಯಿಂದ ಗುಡಿ ಗಟ್ಟಿದ್ದು, ಇಂದು ಅಂಬಿಯ ಕಂಚಿನ ಪ್ರತಿಮೆ ಲೋಕಾರ್ಪಣೆಯಾಯಿತು.
ಎಲ್ಲರಿಗೂ ತಿಳಿದ ಹಾಗೆ ಅಂಬರೀಶ್ ಎಂದರೆ ಮಂಡ್ಯದ ಗಂಡು, ಅಂಬರೀಶ್ ಅವರ ಹುಟ್ಟೂರು ಮಂಡ್ಯ. ಅಂಬರೀಶ್ 2018, ನವೆಂಬರ್ 24ರಂದು ಇಹಲೋಕ ತ್ಯಜಿಸಿದರು. ಆದರೆ, ಅಭಿಮಾನಿಗಳಿಗೆ ಅವರ ಮೇಲಿನ ಪ್ರೀತಿಯು ಒಂಚೂರು ಕಮ್ಮಿಯಾಗಿಲ್ಲ. ರೆಬೆಲ್ಸ್ಟಾರ್ ಸ್ಮರಣೆಗಾಗಿ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಹೊಟ್ಟೆ ಗೌಡನದೊಡ್ಡಿ ಗ್ರಾಮದಲ್ಲಿ ಅಂಬಿಯ ಗುಡಿ ನಿರ್ಮಾಣ ಮಾಡಲಾಗಿದೆ. ಇಂದು ಈ ಗುಡಿಯನ್ನು ನಟ ದರ್ಶನ್ ಹಾಗೂ ಸುಮಲತಾ ಕೇಕ್ ಕತ್ತರಿಸುವ ಮೂಲಕ ಉದ್ಘಾಟನೆ ಮಾಡಿದರು.
ರೆಬೆಲ್ ತವರೂರಲ್ಲೇ ನಿರ್ಮಾಣವಾಯ್ತು ಅಂಬಿಯ ಅಭಿಮಾನದ ಪ್ರತಿಮೆ.. ಗ್ರಾಮದ ವಿಶೇಷತೆ : ಅಂಬಿ ಗುಡಿ ನಿರ್ಮಾಣವಾಗಿರುವುದು ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಹೊಟ್ಟೆ ಗೌಡನದೊಡ್ಡಿ ಗ್ರಾಮದಲ್ಲಿ, ಹೊಟ್ಟೆಗೌಡನ ದೊಡ್ಡಿ ಗ್ರಾಮದ ವಿಶೇಷತೆ ಏನೆಂದರೆ ಇಲ್ಲಿನ ಜನರಿಗೆ ಅಂಬರೀಶ್ ಒಬ್ಬ ನಾಯಕ ನಟ ಅಲ್ಲ. ಬದಲಾಗಿ ಆರಾಧ್ಯ ದೈವ. ಹಾಗಾಗಿ, ಈ ಜನರು ಅಂಬಿಯನ್ನು ದೇವರೆಂದು ಭಾವಿಸಿದ್ದಾರೆ. ಸುಮಾರು 100 ಮನೆಗಳಿರುವ ಈ ಗ್ರಾಮದಲ್ಲಿ ಪ್ರತಿ ಮನೆಯಲ್ಲಿ ಒಂದಿಬ್ಬರು ಅಂಬಿ ಅಭಿಮಾನಿಗಳಿದ್ದಾರೆ.
ಪ್ರತಿ ವರ್ಷ ಅಂಬರೀಶ್ ಹುಟ್ಟಿದ ದಿನ ಮೇ 29ರಂದು ಈ ಊರಲ್ಲಿ ಸಂಭ್ರಮ ಮನೆ ಮಾಡುತ್ತದೆ. ಮನೆಮನೆಗಳಲ್ಲೂ ಹಸಿರು ತೋರಣ ಕಟ್ಟಿ ಅಂಬಿ ಹುಟ್ಟುಹಬ್ಬವನ್ನು ಊರ ಹಬ್ಬದ ರೀತಿಯಲ್ಲಿ ಆಚರಿಸುತ್ತಾರೆ. ತಮ್ಮೂರಿನ ಮೇಲಿದ್ದ ಅಂಬಿಯ ಅವಿನಾಭಾವ ಸಂಬಂಧಕ್ಕೆ ಈಗ ಅಂಬಿಗಾಗಿ ಗುಡಿಯನ್ನೇ ಕಟ್ಟಿ ಪೂಜಿಸಲು ಮುಂದಾಗಿದ್ದಾರೆ.
ಇನ್ನು, ಅಂಬರೀಶ್ ಅವರು ಮರಣಹೊಂದಿದಾಗ ಅವರ ಚಿತಾಭಸ್ಮ ತಂದು ಸತತ ಒಂದು ವರ್ಷಕಾಲ ಗುಡಿ ನಿರ್ಮಾಣ ಮಾಡುವರೆಗೂ ಕಚೇರಿಯಲ್ಲಿಟ್ಟು ಪೂಜಿಸುತ್ತಿದ್ದರು. ಊರಿನ ಅಭಿಮಾನಿಗಳಿಂದಲೇ ಸುಮಾರು ₹8 ಲಕ್ಷಕ್ಕೂ ಹೆಚ್ಚು ಹಣ ಸಂಗ್ರಹಿಸಿ ಗುಡಿ ಕಟ್ಟಿದ್ದಾರೆ.
ಹೀಗಿದೆ ಅಂಬಿಯ ಗುಡಿ..: ಈ ಗುಡಿಯ ಒಳಭಾಗದಲ್ಲಿ ಅಂಬರೀಶ್ ಅವರ ಕಂಚಿನ ಪುತ್ಥಳಿ ಇಡಲಾಗಿದೆ. ಈ ಗುಡಿಗಾಗಿ ₹7 ರಿಂದ ₹8 ಲಕ್ಷ ಖರ್ಚು ಮಾಡಿರುವ ಗ್ರಾಮಸ್ಥರು, ಅಂಬಿಯ ನೆನಪು ಎಂದಿಗೂ ಅಮರ. ಅವರು ಬದುಕಿದ್ದ ರೀತಿ, ಅವರ ವ್ಯಕ್ತಿತ್ವ ನಮ್ಮ ಮುಂದಿನ ಪೀಳಿಗೆಗೂ ತಿಳಿಯಲಿ ಎಂದು ಈ ಪುತ್ಥಳಿ ನಿರ್ಮಿಸಿದ್ದೇವೆ ಅಂತಾರೆ ಈ ಊರಿನ ಅಂಬಿ ಅಭಿಮಾನಿಗಳು.
ಅಭಿಮಾನಿಗಳ ಆಸೆಯಂತೆಯೇ ಅಂಬರೀಶ್ ಅವರ ಗುಡಿ ನಿರ್ಮಾಣವಾಗಿದ್ದು, ಇಂದು ನವೆಂಬರ್ 24ರಂದು ಅಂಬರೀಶ್ ಅವರ 2 ವರ್ಷದ ಪುಣ್ಯಸ್ಮರಣೆ ದಿನವಾಗಿದ್ದು, ನಟ ದರ್ಶನ್, ನಿರ್ಮಾಪಕ ರಾಕ್ಲೈನ್ ವೆಂಕಟೇಶ್, ಸುಮಲತಾ ಅಂಬರೀಶ್, ಅವರ ಮಗ ಅಭಿಷೇಕ್ ಹಾಗೂ ಹಾಸ್ಯ ನಟ ದೊಡ್ಡಣ್ಣ ಅಂಬಿ ಗುಡಿಯ ಕಂಚಿನ ಪ್ರತಿಮೆಯನ್ನು ಲೋಕಾರ್ಪಣೆಗೊಳಿಸಿದರು.