ಕರ್ನಾಟಕ

karnataka

By

Published : Jun 1, 2022, 8:14 PM IST

ETV Bharat / state

ಮೌಢ್ಯಾಧಾರಿತ ಸಂಸ್ಕಾರಕ್ಕೆ ವಿರೋಧ.. ದೇಹದಾನಕ್ಕೆ ನಿವೃತ್ತ ಜಡ್ಜ್ ವಾಗ್ದಾನ

ಹೈಕೋರ್ಟ್​ನ ವಿಶ್ರಾಂತ ನ್ಯಾಯಮೂರ್ತಿ ಗಂಗಾವತಿಯ ಅರಳಿ ನಾಗರಾಜ್ (71) ಅವರು ತಮ್ಮ ಸಾವಿನ ನಂತರ ದೇಹವನ್ನು ಗದಗದ ಡಿಜಿಎಂ ಆಯುರ್ವೇದಿಕ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗೆ ರವಾನಿಸುವಂತೆ ಮೃತ್ಯುಪತ್ರ ಬರೆದು ಕುಟುಂಬ ಸದಸ್ಯರಲ್ಲಿ ಸಹಿ ಹಾಕಿಸಿದ್ದಾರೆ. ಈ ಮೂಲಕ ದೇಹದಾನ ಮಾಡಿದ್ದಾರೆ.

retired-high-court-judge-going-to-do-the-body-donation-after-his-death
ಮೌಢ್ಯಾಧಾರಿತ ಸಂಸ್ಕಾರಕ್ಕೆ ವಿರೋಧ : ದೇಹದಾನಕ್ಕೆ ನಿವೃತ್ತ ಜಡ್ಜ್ ಒಲವು

ಗಂಗಾವತಿ(ಕೊಪ್ಪಳ): ವ್ಯಕ್ತಿ ಸತ್ತ ನಂತರ ದೇಹವನ್ನು ಮಣ್ಣಿನಿಂದ ಹೂಳುವುದು ಅಥವಾ ದಹನ ಮಾಡುವಂತ ಮೌಢ್ಯಾಧಾರಿತ ಸಂಸ್ಕಾರದಿಂದ ದೂರ ಸರಿದ ಹೈಕೋರ್ಟ್​ ನಿವೃತ್ತ ನ್ಯಾಯಮೂರ್ತಿ ಒಬ್ಬರು ತಮ್ಮ ಮರಣಾ ನಂತರ ದೇಹವನ್ನು ದಾನ ಮಾಡುವ ಬಗ್ಗೆ ವಾಗ್ದಾನ ಪತ್ರ ಬರೆದಿದ್ದಾರೆ. ಹೈಕೋರ್ಟ್​ನ ವಿಶ್ರಾಂತ ನ್ಯಾಯಮೂರ್ತಿ ಗಂಗಾವತಿಯ ಅರಳಿ ನಾಗರಾಜ್ (71) ಅವರು ತಮ್ಮ ಸಾವಿನ ನಂತರ ದೇಹವನ್ನು ಗದಗದ ಡಿಜಿಎಂ ಆಯುರ್ವೇದಿಕ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗೆ ರವಾನಿಸುವಂತೆ ಮೃತ್ಯುಪತ್ರ ಬರೆದು ಕುಟುಂಬ ಸದಸ್ಯರಲ್ಲಿ ಸಹಿ ಹಾಕಿಸಿದ್ದಾರೆ.

ಅಲ್ಲದೇ ವೈಯಕ್ತಿಕವಾಗಿಯೂ ಕುಟುಂಬ ಸದಸ್ಯರಿಗೆ ಪತ್ರ ಬರೆದಿರುವ ಅವರು "ನನ್ನ ಪತ್ನಿ ಪುತ್ರ ಪುತ್ರಿಯರನ್ನೊಳಗೊಂಡಂತೆ ಎಲ್ಲ ಬಂಧುಗಳಲ್ಲಿ, ಸ್ನೇಹಿತರಲ್ಲಿ ನನ್ನ ವಿನಂತಿ. ನನ್ನ ಸಾವು ಎಂದಾದರೂ, ಯಾವ ಕಾರಣದಿಂದಾದರೂ, ಹೇಗಾದರೂ, ಎಲ್ಲಿಯಾದರೂ ಸಂಭವಿಸಲಿ ನನ್ನ ಮೃತದೇಹ ವೈದ್ಯಕೀಯ ಸಂಶೋಧನೆಗೊಳಪಟ್ಟು ಸಾರ್ಥಕ ರೀತಿಯಲ್ಲಿ ಬಳಕೆಯಾಗಬೇಕೆಂಬುದು ನನ್ನ ಅಂತಿಮ ಇಚ್ಛೆ ಎಂದು ಬರೆದುಕೊಂಡಿದ್ದಾರೆ.

ಹೈಕೋರ್ಟ್​ನ ವಿಶ್ರಾಂತ ನ್ಯಾಯಮೂರ್ತಿ ಗಂಗಾವತಿಯ ಅರಳಿ ನಾಗರಾಜ್ ಅವರು ದೇಹದಾನದ ಬಗ್ಗೆ ಬರೆದ ವಾಗ್ದಾನ ಪತ್ರ

ಆದ್ದರಿಂದ ನನ್ನ ದೇಹವನ್ನು ಗದಗಿನ ಡಿ.ಜಿ.ಎಂ.ಆಯುರ್ವೇದಿಕ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗೆ ಸ್ವ ಇಚ್ಛೆಯಿಂದ ದಾನ ಮಾಡಿರುವೆ. ಈ ಸಂಬಂಧವಾಗಿ ಸದರಿ ಕಾಲೇಜಿನ ಪ್ರಾಂಶುಪಾಲರಿಗೆ ನಾನು ದಿ.28/05/2022 ಶನಿವಾರದಂದು ಮನವಿ ಸಲ್ಲಿಸಿದ್ದೇನೆ. ನನ್ನ ಸಾವಿನ ವಿಷಯ ಗೊತ್ತಾದ ತಕ್ಷಣ ಅದನ್ನು ಆ ಕಾಲೇಜಿನ ಪ್ರಾಂಶುಪಾಲರಿಗೆ ತಿಳಿಸಿ ನನ್ನ ಮೃತ ದೇಹ ಸಮಯಕ್ಕೆ ಸರಿಯಾಗಿ ಅವರ ಕಾಲೇಜಿಗೆ ತಲುಪುವಂತೆ ನೋಡಿಕೊಳ್ಳುವ ಮೂಲಕ ನನ್ನ ಈ ಅಂತಿಮ ಇಚ್ಛೆಯನ್ನು ಪೂರೈಸಬೇಕಾಗಿ ತಮ್ಮೆಲ್ಲರಲ್ಲಿ ಈ ಮೂಲಕ ವಿನಂತಿಸಿಕೊಳ್ಳುವೆ. ನನ್ನ ಮರಣಕ್ಕೆ ಸಂಬಂಧಿಸಿದಂತೆ ಮೌಢ್ಯಾಧಾರಿತ ಯಾವುದೇ ವಿಧಿ ವಿಧಾನಗಳನ್ನು ಅಚರಿಸಬಾರದೆಂದು ನನ್ನ ಕುಟುಂಬದ ಎಲ್ಲರನ್ನೂ ಬೇಡುವೆ. ಎಲ್ಲರಿಗೂ ಶರಣು ಶರಣಾರ್ಥಿಗಳು, ನಾಗರಾಜ್ ಅರಳಿ ಎಂದು ಪತ್ರ ಬರೆದಿದ್ದಾರೆ. ಈ ಮೂಲಕ ಸತ್ತ ನಂತರ ದೇಹ ಮಣ್ಣಿನಲ್ಲಿ ಸೇರಿ ಹೋಗದೇ ವೈದ್ಯಕೀಯ ವಿದ್ಯಾರ್ಥಿಗಳ ಅಧ್ಯಯನಕ್ಕೆ ಅನುಕೂಲವಾಗಲಿ ಎಂಬ ಸದುದ್ದೇಶದಿಂದ ನಿವೃತ್ತ ನ್ಯಾಯಮೂರ್ತಿ ಮಾದರಿ ಕಾರ್ಯದ ಮೂಲಕ ಗಮನ ಸೆಳೆದಿದ್ದಾರೆ.

ಓದಿ :ಲಂಚ ಪಡೆಯುವಾಗ ಸಿಕ್ಕಿಬಿದ್ದ ಆರೋಗ್ಯಾಧಿಕಾರಿ: ವಜಾಗೊಳಿಸುವಂತೆ ಎಎಪಿ ಪ್ರತಿಭಟನೆ

ABOUT THE AUTHOR

...view details