ಕೊಪ್ಪಳ:ಐಟಿಐ ಕೋರ್ಸಿನ ಆನ್ಲೈನ್ ಪರೀಕ್ಷಾ ಪದ್ಧತಿ ರದ್ದುಗೊಳಿಸುವಂತೆ ಆಗ್ರಹಿಸಿ ಎಬಿವಿಪಿ ಕಾರ್ಯಕರ್ತರು ಇಂದು ನಗರದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಶ್ರೀ ಗವಿಸಿದ್ದೇಶ್ವರ ಮಠದ ಆವರಣದಿಂದ ಪ್ರತಿಭಟನಾ ಮೆರವಣಿಗೆ ಹೊರಟು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಜಿಲ್ಲಾಡಳಿತ ಭವನದವರೆಗೆ ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾನಿರತ ವಿದ್ಯಾರ್ಥಿಗಳು ಯಾವುದೇ ಕೋರ್ಸಿಗೆ ಸಹ ಆನ್ಲೈನ್ ಪರೀಕ್ಷೆ ಇಲ್ಲ. ಆದರೆ, ಐಟಿಐಗೆ ಮಾತ್ರ ಯಾಕೆ ಆನ್ಲೈನ್ ಪರೀಕ್ಷಾ ವ್ಯವಸ್ಥೆ ಜಾರಿಗೆ ತರಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಆನ್ಲೈನ್ ಪರೀಕ್ಷೆ ನಡೆಸಬೇಕಿದ್ದರೆ ಸಾಕಷ್ಟು ಕಂಪ್ಯೂಟರ್ ಜ್ಞಾನದ ಅವಶ್ಯಕತೆ ಇದೆ. ಈ ಸೌಲಭ್ಯ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ಇಲ್ಲ. ಇದೊಂದು ಅವೈಜ್ಞಾನಿಕ ಪರೀಕ್ಷಾ ಪದ್ಧತಿ. ಆದ್ದರಿಂದ ಈ ಕೂಡಲೇ ಇದನ್ನು ರದ್ದುಪಡಿಸುವಂತೆ ಆಗ್ರಹಿಸಿದರು.
ಉದ್ಯೋಗ ಹಾಗೂ ತರಬೇತಿ ಇಲಾಖೆಯ ವತಿಯಿಂದ ಈಗಾಗಲೇ ಎಸ್ಸಿ/ಎಸ್ಟಿ ತರಬೇತುದಾರರಿಗೆ ಉಚಿತ ಲ್ಯಾಪ್ಟಾಪ್ ಹಾಗೂ ಇತರೆ ವಸ್ತುಗಳನ್ನು ವಿತರಿಸಲಾಗುತ್ತಿದೆ. ಅದೇ ರೀತಿಯಾಗಿ ಉಳಿದ ಸಮುದಾಯದ ಎಲ್ಲಾ ತರಬೇತುದಾರರಿಗೆ ಲ್ಯಾಪ್ಟಾಪ್ ಹಾಗೂ ಇತರೆ ವಸ್ತುಗಳನ್ನು ಸರ್ಕಾರ ವಿತರಿಸಲು ಮುಂದಾಗಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.