ಕೊಪ್ಪಳ:ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ ಈಗಾಗಲೇ ಪಾದಯಾತ್ರೆ ಪ್ರಾರಂಭವಾಗಿದೆ. ಪಾದಯಾತ್ರೆ ಕಲ್ಯಾಣ ಕರ್ನಾಟಕ ಗಡಿ ದಾಟುವುದರೊಳಗಾಗಿ ಸಿಎಂ ಯಡಿಯೂರಪ್ಪ ನಿರ್ಧಾರ ಕೈಗೊಳ್ಳಬೇಕು ಎಂದು ಕೂಡಲಸಂಗಮದ ಪಂಚಮಸಾಲಿ ಪೀಠಾಧ್ಯಕ್ಷ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಆಗ್ರಹಿಸಿದ್ದಾರೆ.
ನಗರದಲ್ಲಿ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಅವರು, ನಾವು 2ಎ ಮೀಸಲಾತಿ ಕೇಳುತ್ತಿರುವುದು ಶೈಕ್ಷಣಿಕ ಮತ್ತು ಉದ್ಯೋಗಕ್ಕಾಗಿ. ರಾಜ್ಯದ ದೊಡ್ಡ ಸಮಾಜಗಳಲ್ಲಿ ಪಂಚಮಸಾಲಿ ಸಮಾಜವೂ ಒಂದು. ಸಿಎಂ ಯಡಿಯೂರಪ್ಪ ಅವರು ಇದನ್ನು ಅರ್ಥ ಮಾಡಿಕೊಳ್ಳಬೇಕು. ಬಿಎಸ್ವೈ ಸರ್ಕಾರ ರಚನೆಯಾಗಲು ನಮ್ಮ ಸಮಾಜದ ಕೊಡುಗೆಯೂ ಇದೆ. ಈಗ ಪಾದಯಾತ್ರೆ ಮುಂದುವರೆದಿದೆ. ನಮ್ಮ ಕಲ್ಯಾಣ ಕರ್ನಾಟಕ ಗಡಿಯನ್ನು ದಾಟುವುದರೊಳಗಾಗಿ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡಲು ಯಡಿಯೂರಪ್ಪ ಅವರು ಘೋಷಣೆ ಮಾಡಬೇಕು. ಇಲ್ಲವಾದಲ್ಲಿ ನಮ್ಮ ಪಾದಯಾತ್ರೆಯ ಘೋಷವಾಕ್ಯ ಬದಲಾಗಲಿದೆ. ಬದಲಾಗುವ ಘೋಷವಾಕ್ಯವನ್ನು ನಾವು ಮಧ್ಯಕರ್ನಾಟಕದ ದಾವಣಗೆರೆಯಲ್ಲಿ ಹೇಳುತ್ತೇವೆ ಎಂದರು.