ಗಂಗಾವತಿ(ಕೊಪ್ಪಳ): ಕಾಂಗ್ರೆಸ್ ಪಕ್ಷದ ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ ಮತ್ತು ಮಾಜಿ ಶಾಸಕ ಎಚ್ ಆರ್ ಶ್ರೀನಾಥ್ ಅವರು ಕೆಆರ್ಪಿಪಿ ಪಕ್ಷದ ಜಿ ಜನಾರ್ದನರೆಡ್ಡಿಯಿಂದ ಹಣ ಪಡೆದು ಗಂಗಾವತಿಯಲ್ಲಿ ಪಕ್ಷ ದ್ರೋಹ ಮಾಡಿದ್ದಾರೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಾಮೀದ್ ಮನಿಯಾರ ಆರೋಪಿಸಿದ್ದಾರೆ.
ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ರೆಡ್ಡಿ ಜನರಿಗೆ ಹಣದ ಆಮಿಷವೊಡ್ಡಿ ಗಂಗಾವತಿಯಿಂದ ಆಯ್ಕೆಯಾಗಿದ್ದಾರೆ. ಅದೇ ರೀತಿ ನಮ್ಮದೇ ಪಕ್ಷದ ಎಚ್ ಆರ್ ಶ್ರೀನಾಥ್ ಅವರು ರೆಡ್ಡಿಯಿಂದ ಒಂದು ಕೋಟಿ ರೂಪಾಯಿ ಮೊತ್ತದ ಹಣ ಪಡೆದುಕೊಂಡಿದ್ದಾರೆ. ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ ಅವರು 25 ರಿಂದ 30 ಲಕ್ಷ ಮೊತ್ತದ ಹಣ ಪಡೆದುಕೊಂಡು ಗಂಗಾವತಿಯಲ್ಲಿ ಪಕ್ಷದ್ರೋಹ ಮಾಡಿದ್ದಾರೆ. ಈ ಹಿನ್ನೆಲೆ ಇವರಿಬ್ಬರನ್ನು ಪಕ್ಷದಿಂದ ಉಚ್ಛಾಟಿಸುವಂತೆ ಒತ್ತಾಯಿಸಿ ಕೆಪಿಸಿಸಿ ಅಧ್ಯಕ್ಷರಿಗೆ ದಾಖಲೆ ಸಮೇತ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು.
2018ರಲ್ಲಿ ನಡೆದ ಚುನಾವಣೆಯಲ್ಲಿ 59 500 ಮತಗಳನ್ನು ಕಾಂಗ್ರೆಸ್ ಪಡೆದಿತ್ತು, 2023 ಚುನಾವಣೆಯಲ್ಲಿ ಕಾರ್ಯಕರ್ತರ ಪ್ರಯತ್ನದಿಂದಾಗಿ 57000 ಮತ ತೆಗೆದುಕೊಂಡಿದ್ದೇವೆ. ಆದರೆ ಪಕ್ಷದಲ್ಲಿ ಇದ್ದುಕೊಂಡು ಇಬ್ಬರು ನಾಯಕರು ಪಕ್ಷಕ್ಕೆ ದ್ರೋಹ ಮಾಡಿದ್ದಾರೆ. ಎಚ್ ಆರ್ ಶ್ರೀನಾಥ್ ಅವರು ರೆಡ್ಡಿ ಮನೆಗೆ ಭೇಟಿ ನೀಡಿದ್ದರು. ಅವರ ಕುಟುಂಬವೆಲ್ಲ ಸೇರಿಕೊಂಡು ಕೆಆರ್ಪಿ ಪಕ್ಷದ ಪರ ಪ್ರಚಾರ ಮಾಡಿದರು. ಎಚ್ ಆರ್ ಶ್ರೀನಾಥ್ ಕೈಯಲ್ಲಿ ಕಾಂಗ್ರೆಸ್ ಪಕ್ಷ ಇದ್ದಿದ್ದರೆ, ಜನಾರ್ದನ ರೆಡ್ಡಿಗೆ 50 ಕೋಟಿಗೆ ಒತ್ತಿಟ್ಟು ಬಿಡುತ್ತಿದ್ದರು ಎಂದು ಅಪಾದನೆ ಮಾಡಿದರು.
ಆಣೆ ಪ್ರಮಾಣಕ್ಕೆ ಬನ್ನಿ:ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ ಮತ್ತು ಮಾಜಿ ಶಾಸಕ ಎಚ್ ಆರ್ ಶ್ರೀನಾಥ್ ಅವರು ರೆಡ್ಡಿಯಿಂದ ದೊಡ್ಡಮೊತ್ತದ ಕಿಕ್ ಬ್ಯಾಕ್ ಪಡೆದುಕೊಂಡಿದ್ದಾರೆ. ಈ ಬಗ್ಗೆ ನಮ್ಮ ಬಳಿ ದಾಖಲೆ ಇದೆ. ಒಂದೊಮ್ಮೆ ಅವರು ಪಡೆದುಕೊಂಡಿಲ್ಲ ಎಂದು ವಾದಿಸುವುದಾದರೆ ಆಣೆ-ಪ್ರಮಾಣಕ್ಕೆ ಮುಂದಾಗಬೇಕು ಎಂದು ಮನಿಯಾರ ಒತ್ತಾಯಿಸಿದ್ದಾರೆ.