ಅರಕಲಗೂಡು(ಹಾಸನ): ಐ.ಟಿ.ಸಿ ಕಂಪನಿ ವಿತರಣೆ ಮಾಡಿದ ತಂಬಾಕಿನ ಬಿತ್ತನೆ ಬೀಜ ಕಳಪೆಯಾಗಿದ್ದು, ತಂಬಾಕು ಸಸಿಗಳಲ್ಲಿ ವಿವಿಧ ರೋಗಗಳು ಕಾಣಿಸಿಕೊಂಡಿವೆ ಎಂದು ತಾಲೂಕು ರೈತ ಸಂಘದ ಅಧ್ಯಕ್ಷ ಸೀಬಹಳ್ಳಿ ಯೋಗಣ್ಣ ಆರೋಪಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಯೋಗಣ್ಣ, ಐಟಿಸಿ ಕಂಪನಿ ವತಿಯಿಂದ ಆಂಧ್ರಪ್ರದೇಶದ ರಾಜಮಂಡ್ರಿಯಲ್ಲಿ ಬೀತ್ತನೆ ಬೀಜದ ಸಂಸ್ಕರಣೆ ಮಾಡುವ ಸಂಶೋಧನಾ ಕೇಂದ್ರವನ್ನು ಸ್ಥಾಪಿಸಲಾಗಿದೆ. ಆದರೆ ಈ ಕೇಂದ್ರದಲ್ಲಿ ಸರಿಯಾಗಿ ತಂಬಾಕಿನ ಬೀಜದ ಸಂಸ್ಕರಣೆ ಮಾಡದೆ ಕಳಪೆ ಬೀಜ ನೀಡಿದ್ದಾರೆ. ಇದರಿಂದಾಗಿ ತಂಬಾಕು ಗಿಡಗಳಲ್ಲಿ ರೋಗದ ಬಾಧೆ ಕಾಣಿಸಿಕೊಂಡಿದ್ದು, ಈ ಭಾರಿಯ ಬೆಳೆ ನಷ್ಟವಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ರೈತ ಸಂಘದ ಅಧ್ಯಕ್ಷ ಸೀಬಹಳ್ಳಿ ಯೋಗಣ್ಣ ರಾಜಮಂಡ್ರಿಯ ಸಂಶೋಧನಾ ಕೇಂದ್ರದಿಂದ ತರಲಾದ ಬಿತ್ತನೆ ಬೀಜದ 20 ಗ್ರಾಂನ 1 ಪ್ಯಾಕೆಟ್ ಗೆ 400 ರೂ.ದರ ತೆಗೆದುಕೊಳ್ಳುತ್ತಾರೆ. ಅದರಂತೆ ಪ್ರತಿ ಒಂದು ಕೆ.ಜಿ.ತಂಬಾಕು ಬಿತ್ತನೆ ಬೀಜಕ್ಕೆ 40 ಸಾವಿರ ರೂ ಬೆಲೆಯಾಗುತ್ತಿದೆ. ಇದರಿಂದ ಐಟಿಸಿ ಕಂಪನಿಯವರಿಗೆ ಒಳ್ಳೆಯ ಆದಾಯ ಬಂದರೂ ಸಹ ರೈತರಿಗೆ ಸರಿಯಾದ ರೀತಿಯ ಸಂಸ್ಕರಿಸಿದ ತಂಬಾಕು ಬೀಜ ನೀಡುತ್ತಿಲ್ಲ. ಈ ಕಳಪೆ ಬೀಜಗಳಿಂದಾಗಿ ತಂಬಾಕು ಸಸಿಗಳಲ್ಲಿ ಕಾಯಿಲೆಗಳು ಬರತೊಡಗಿದೆ ಎಂದು ಆರೋಪಿಸಿದ್ದಾರೆ.
ಉತ್ತಮ ಬೆಳೆ ಸಿಗಬಹುದು ಎಂಬ ನಿರೀಕ್ಷೆಯಲ್ಲಿ ಪ್ರಮುಖ ವಾಣಿಜ್ಯ ಬೆಳೆಯಾದ ಹೊಗೆಸೊಪ್ಪನ್ನು ಮುಂಗಾರು ಪೂರ್ವದಲ್ಲಿ ಬಿತ್ತನೆ ಮಾಡಲಾಗುವುದು. ಆದರೆ ಕಳಪೆ ಬೀಜಗಳ ಹಾವಳಿಯಿಂದಾಗಿ ತಂಬಾಕು ಗಿಡಗಳಿಗೆ ಕಾಯಿಲೆ ಬಂದಿರುವುದು ರೈತರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.