ಹಾಸನ:ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಚಾಕೇನಹಳ್ಳಿಯಲ್ಲಿ ಜಿಲೆಟಿನ್ ಸ್ಫೋಟ ಘಟನೆ ಹಿನ್ನೆಲೆಯಲ್ಲಿ ಸ್ಥಳಕ್ಕೆ ದಕ್ಷಿಣ ವಲಯದ ಐಜಿಪಿ ಪ್ರವೀಣ್ ಮಧುಕರ್ ಪವರ್, ಎಸ್ಪಿ ಶ್ರೀನಿವಾಸಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು.
ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸಗೌಡ, ಪ್ರಾಥಮಿಕ ಮಾಹಿತಿ ಪ್ರಕಾರ ಲೋಡಿಂಗ್ ಅನ್ಲೋಡಿಂಗ್ ವೇಳೆ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ. ಚಾಕೇನಹಳ್ಳಿ ಕಟ್ಟೆ ಗ್ರಾಮದ ನಾಗೇಶ್ ಎಂಬ ಮಾಲೀಕತ್ವದ ದುರ್ಗಾಂಬ ಎಂಟರ್ಪ್ರೈಸಸ್ ಎಂಬ ಜಿಲೆಟಿನ್ ಸ್ಪೋಟಕ ವಸ್ತುಗಳ ದಾಸ್ತಾನು ಮಳಿಗೆಯಲ್ಲಿ ಸ್ಫೋಟ ನಡೆದಿದ್ದು ಸ್ಥಳದಲ್ಲಿಯೇ ಸಂಪತ್ ಎಂಬ ಯುವಕ ಸುಟ್ಟು ಕರಕಲಾದರೇ ಜೊತೆಯಲ್ಲಿದ್ದ ನಟರಾಜ ಹಾಗೂ ರವಿಕುಮಾರ್ ಸ್ಥಿತಿ ಚಿಂತಾಜನಕವಾಗಿದೆ.
ಸ್ಫೋಟದ ತೀವ್ರತೆಗೆ ಎರಡು ದ್ವಿಚಕ್ರ ವಾಹನಗಳು ಕೂಡ ಸುಟ್ಟು ಕರಕಲಾಗಿವೆ. ರವಿ ಹಾಗೂ ನಟರಾಜ್ ಹಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕ್ವಾರಿಯಲ್ಲಿ ಕೆಲಸ ಮಾಡ್ತಿದ್ದ ಸಂಪತ್ ಘಟನಾ ಸ್ಥಳಕ್ಕೆ ಯಾವ ಕಾರಣಕ್ಕೆ ಬಂದಿದ್ದರು ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ. ಆದರೆ ಘಟನೆ ಹೇಗಾಯಿತು ಎಂಬುದನ್ನು ಈಗ ಹೆಚ್ಚಿನ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳು ಗುಣಮುಖರಾದ ಬಳಿಕ ಗೊತ್ತಾಗಬೇಕಿದೆ ಎಂದು ತಿಳಿಸಿದ್ರು.