ಹಾಸನ: ಮಲೆನಾಡು ಭಾಗಗಳಲ್ಲಿ ಕಾಡಾನೆ ಸಮಸ್ಯೆಯಿದೆ. ಕಾಡಾನೆ ಸಮಸ್ಯೆಯಾಗಲಿ, ಕಾಡಿನ ಗಂಧಗಾಳಿಯಾಗಲಿ ಗೊತ್ತಿಲ್ಲದ ಆನಂದ್ ಸಿಂಗ್ ಎಂಬುವವರಿಗೆ ಅರಣ್ಯ ಖಾತೆ ನೀಡಿದ್ದು, ಮುಂದಿನ ದಿನಗಳಲ್ಲಿ ಶಾಶ್ವತ ಪರಿಹಾರ ಕಲ್ಪಿಸದಿದ್ದರೆ ವಿವಿಧ ಸಂಘಟನೆಗಳ ಸಹಕಾರದಿಂದ ಮತ್ತೊಮ್ಮೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಕರ್ನಾಟಕ ಪ್ರದೇಶ ರೈತ ಸಂಘದ ಅಧ್ಯಕ್ಷ ಗೋಪಿನಾಥ್ ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡು ದಶಕಗಳಿಂದ ಸಕಲೇಶಪುರ, ಆಲೂರು, ಬೇಲೂರು ಭಾಗದಲ್ಲಿ ಕಾಡಾನೆ ಸಮಸ್ಯೆ ನಿರಂತರವಾಗಿ ಕಾಡುತ್ತಿದೆ. ಕಾಡಾನೆ ದಾಳಿಯಿಂದ ಈವರೆಗೆ 41 ಜನರು ಪ್ರಾಣ ಕಳೆದುಕೊಂಡಿದ್ದು, ಕೋಟ್ಯಂತರ ಮೌಲ್ಯದ ಬೆಳೆ ನಷ್ಟ ಸಂಭವಿಸಿದೆ. ಆದರೆ, ಅರಣ್ಯ ಇಲಾಖೆ ನೀಡುವ ಅಲ್ಪ ಪ್ರಮಾಣದ ಪರಿಹಾರವೂ ಸಮಯಕ್ಕೆ ಸರಿಯಾಗಿ ಸಿಗದೇ, ಕಚೇರಿಗಳನ್ನು ಅಲೆಯುವ ಸ್ಥಿತಿ ಇದೆ ಎಂದು ಅಸಮಾಧಾನ ಹೊರಹಾಕಿದ್ರು.
ಮಲೆನಾಡು ಭಾಗದಲ್ಲಿ ಅಂದಾಜು 70 ಕಾಡಾನೆಗಳಿವೆ. ಪ್ರಸ್ತುತ ಒಂದು ಪುಂಡಾನೆ ಸೆರೆಗೆ ಮತ್ತು ನಾಲ್ಕು ಆನೆಗಳಿಗೆ ರೇಡಿಯೊ ಕಾಲರ್ ಅಳವಡಿಸಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಒಂದು ಆನೆ ಸ್ಥಳಾಂತರಕ್ಕೆ ಸುಮಾರು 20 ಲಕ್ಷ ಖರ್ಚು ಆಗಲಿದೆ. ಆದ್ರೆ ಆನೆ ಸ್ಥಳಾಂತರ ಮಾಡಿದ ಮಾತ್ರಕ್ಕೆ ಸಮಸ್ಯೆ ಬಗೆಹರಿಯುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ರು.