ಕರ್ನಾಟಕ

karnataka

ETV Bharat / state

ಮಹಾನಗರ ಪಾಲಿಕೆಯಲ್ಲಿಯೇ ಬಾಡೂಟ: ಬಿರಿಯಾನಿ, ಚಿಕನ್ ಕಬಾಬ್ ಸವಿದ ಜನರು: ಪರ, ವಿರೋಧ ಚರ್ಚೆ

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆವರಣದಲ್ಲಿ ಇಂದು ಭರ್ಜರಿ ಬಾಡೂಟ ಹಮ್ಮಿಕೊಳ್ಳಲಾಗಿತ್ತು. ಕಾಂಗ್ರೆಸ್ ನಾಯಕರ ಈ ಬಾಡೂಟದ ನಡೆ ಸದ್ಯ ಬಿಜೆಪಿ ಸೇರಿದಂತೆ ಸಾರ್ವಜನಿಕ ವಲಯದಲ್ಲೂ ಚರ್ಚೆಗೆ ಗ್ರಾಸವಾಗಿದೆ.

By

Published : Nov 29, 2022, 8:14 PM IST

ಮಹಾನಗರ ಪಾಲಿಕೆಯಲ್ಲಿಯೇ ಬಾಡೂಟ
ಮಹಾನಗರ ಪಾಲಿಕೆಯಲ್ಲಿಯೇ ಬಾಡೂಟ

ಹುಬ್ಬಳ್ಳಿ:ಅದು ಸಾರ್ವಜನಿಕರ, ನಾಗರಿಕ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಬೇಕಾದ ಸ್ಥಳ. ಆದ್ರೆ ಇವತ್ತು ಅಲ್ಲಿ ನಡೆದ ಚರ್ಚೆಯೇ ಬೇರೆ. ಚರ್ಚೆಯ ಜತೆ ಜತೆಗೆ ಇಡೀ ಪಾಲಿಕೆ ಆವರಣದ ತುಂಬಾ ಬಾಡೂಟದ ಘಮಲು ಆವರಿಸಿತ್ತು. ಒಂದು ಕಚೇರಿ ಉದ್ಘಾಟನೆಗೆ ಅಲ್ಲಿ ಟನ್​ಗಟ್ಟಲೆ ಬಾಡೂಟ ಮಾಡಿಸಲಾಗಿತ್ತು. ಇದೇ ಮೊದಲ ಬಾರಿಗೆ ಪಾಲಿಕೆ ಆವರಣದಲ್ಲಿ ಬಾಡೂಟಕ್ಕಾಗಿ ಒಲೆ ಹಚ್ಚಲಾಗಿತ್ತು. ಪಾಲಿಕೆ ಆವರಣದಲ್ಲಿಯೇ ಭರ್ಜರಿ ಬಾಡೂಟ ಆಯೋಜಿಸಿದ್ದು, ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.

ಮಹಾನಗರ ಪಾಲಿಕೆಯಲ್ಲಿಯೇ ಬಾಡೂಟ

ಹೀಗೆ ಒಂದು ಕಡೆ ಭರ್ಜರಿಯಾಗಿ ರೆಡಿಯಾಗಿರೋ ಮಟನ್ ಬಿರಿಯಾನಿ. ಮತ್ತೊಂದು ಕಡೆ ಮಟನ್ ಧಮ್ ಕಟ್ಟಲು ಬೆಂಕಿ ಹಾಕಿರುವ ದೃಶ್ಯ. ಮತ್ತೊಂದು ಕಡೆ ಚಿಕನ್ ಕಬಾಬ್. ಈ ಎಲ್ಲ ದೃಶ್ಯಗಳು ಕಂಡು ಬಂದದ್ದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆವರಣದಲ್ಲಿ. ಹೌದು, ಪಾಲಿಕೆಯ ವಿಪಕ್ಷ ನಾಯಕರ ಕಚೇರಿ ಉದ್ಘಾಟನಾ ಕಾರ್ಯಕ್ರಮ ಇವತ್ತು ನಡೀತು.

ಇದೇ ಕಾರ್ಯಕ್ರಮ ಸದ್ಯ ವಿವಾದದ ಕಿಡಿ ಹೊತ್ತಿಸಿದ್ದು, ಪಾಲಿಕೆ ಆವರಣದಲ್ಲೇ 2.5 ಕ್ವಿಂಟಾಲ್ ಮಟನ್ ಹಾಗೂ 50 ಕೆಜಿ ಚಿಕನ್ ಬಿರಿಯಾನಿ ಮಾಡಿಸಿ ಭರ್ಜರಿ ಬಾಡೂಟ ಹಾಕಿಸಲಾಯ್ತು. ಕಾಂಗ್ರೆಸ್ ನಾಯಕರ ಈ ಬಾಡೂಟದ ನಡೆ ಸದ್ಯ ಬಿಜೆಪಿ ಸೇರಿದಂತೆ ಸಾರ್ವಜನಿಕ ವಲಯದಲ್ಲೂ ಚರ್ಚೆಗೆ ಗ್ರಾಸವಾಗಿದೆ.

ಈ ಬಗ್ಗೆ ಪಾಲಿಕೆ ವಿಪಕ್ಷ ನಾಯಕ ದೊರೆರಾಜ ಮಣಿಕುಂಟ್ಲ ಸ್ಪಷ್ಟನೆ ನೀಡಿದ್ದು, ಈ ಹಿಂದೆಯೂ ಪಾಲಿಕೆ ಆವರಣದಲ್ಲಿ ಬಾಡೂಟ ಮಾಡಲಾಗಿದೆ. ನಮ್ಮ ಸ್ವಂತ ಹಣದ ಖರ್ಚಿನಲ್ಲಿ ಬಾಡು ತಯಾರಿಸಿದ್ದೇವೆ. ನಾವು ಜೈ ಭೀಮ್ ಮಂದಿ ಎಂದು ಬಾಡೂಟ ಹಾಕಿಸ್ತಿರೋದನ್ನ ಸಮರ್ಥನೆ ಮಾಡಿಕೊಂಡರು.

ಪಾಲಿಕೆ ಆವರಣದಲ್ಲಿಯೇ ಬಾಡೂಟ:ವಿರೋಧ ಪಕ್ಷದ ನಾಯಕರ ಕಚೇರಿ ಉದ್ಘಾಟನೆ ಹಿನ್ನೆಲೆಯಲ್ಲಿ ಬಂದ ಜನರು, ಪಾಲಿಕೆ ಸಿಬ್ಬಂದಿಗೆ ಬಾಡೂಟ ಆಯೋಜನೆ ಮಾಡಲಾಗಿತ್ತು. ಇಲ್ಲಿ ಬಾಡೂಟ ಆಯೋಜನೆ ಮಾಡಿರೋದಕ್ಕಿಂತ ಪಾಲಿಕೆ ಆವರಣದಲ್ಲಿಯೇ ಬಾಡೂಟ ಮಾಡಿದ್ದು ಚರ್ಚೆಗೆ ಗ್ರಾಸವಾಗ್ತಿದೆ. ವಿರೋಧ ಪಕ್ಷದ ನಾಯಕರು ತಮ್ಮ ಹಣದಿಂದಲೇ ಬಾಡೂಟ ಮಾಡಿಸಿದ್ದೀನಿ ಅಂತೀದಾರೆ. ಇದರ ಜೊತೆಗೆ ವಿರೋಧ ಪಕ್ಷದ ನಾಯಕ ದೊರೆರಾಜ್ ಮಣಿಕುಂಟ್ಲ ಕಚೇರಿ ಉದ್ಘಾಟನೆ ಮತ್ತೊಂದು ವಿವಾದಕ್ಕೆ ಕಾರಣವಾಗಿದೆ.

ಬಿಜೆಪಿ ಕಾರ್ಯಕರ್ತರಿಂದ ಆಕ್ರೋಶ: ಕ್ರೈಸ್ ಪಾಸ್ಟರ್ ಒಬ್ಬರು ಧರ್ಮ ಬೋಧನೆ ಮಾಡಿದ್ದಾರೆ. ಸರ್ಕಾರಿ ಕಚೇರಿಯಲ್ಲಿ ಧರ್ಮ ಬೋಧನೆ ಮಾಡಿರೋದು ಹಲವರ ಕೆಂಗಣ್ಣಿಗೆ ಗುರಿಯಾಗಿದೆ. ಇನ್ನು ಕೈ ನಾಯಕರ ಈ ನಡೆಗೆ ಸಾಕಷ್ಟು ವಿರೋಧ ವ್ಯಕ್ತವಾಗ್ತಿದೆ. ನಗರದ ಜನ ಸೇರಿದಂತೆ ಬಿಜೆಪಿ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ.

ಇದು ಕಾಂಗ್ರೆಸ್ ಸಂಸ್ಕೃತಿ: ಪಾಲಿಕೆ ಆವರಣದಲ್ಲಿ ಬಾಡೂಟ ಹಾಕಿದ ಇತಿಹಾಸವೇ ಇಲ್ಲ ಅಂತಿರೊ ಬಿಜೆಪಿಗರು, ಬಾಡೂಟ ಹಾಕಿಸೋದಾದ್ರೆ ಸರ್ಕಾರಿ ಕಚೇರಿ ಆವರಣ ಬಿಟ್ಟು ಬೇರೆಡೆ ಹೋಗಲಿ. ಈ ಹಿಂದೆ ಕೈ ಮುಖಂಡ ಅನಿಲ್​ ಕುಮಾರ ಪಾಟೀಲ್ ಅವರ ಅವಧಿಯಲ್ಲೂ ಪಾಲಿಕೆ ಆವರಣದಲ್ಲಿ ಬಾಡೂಟ ಹಾಕಿಸಲಾಗಿತ್ತು ಎಂದು ನೆನೆದ ಕಮಲ ಪಾಳಯ, ಇದು ಕಾಂಗ್ರೆಸ್ ಸಂಸ್ಕೃತಿಯನ್ನ ತೋರಿಸ್ತಿದ್ದು, ಇದಕ್ಕೆ ಕಡಿವಾಣ ಹಾಕದಿದ್ರೆ ಮುಂದೆ ಎಲ್ಲರೂ ಇಲ್ಲೇ ಅಡುಗೆ ತಯಾರಿಸ್ತಾರೆ ಅಂತ ವ್ಯಂಗ್ಯವಾಡಿದ್ರು.

ಒಟ್ಟಿನಲ್ಲಿ ಸಾರ್ವಜನಿಕರ ಸಮಸ್ಯೆಗಳ ಇಟ್ಟುಕೊಂಡ ಚರ್ಚೆ ಮಾಡಬೇಕಿದ್ದ ಸ್ಥಳ, ಜನಪ್ರತಿನಿಧಿಗಳೇ ಚರ್ಚೆಯ ವಿಷಯವಾಗಿದ್ರು. ಇಲ್ಲಿ ಮಾಂಸಾಹಾರ, ಸಸ್ಯಾಹಾರ ಅನ್ನೊ ಚರ್ಚೆಗಿಂತ ಪಾಲಿಕೆ ಆವರಣದಲ್ಲಿ ಒಲೆ ಹೂಡಿ ಅಡುಗೆ ಮಾಡಿದ್ದೂ ಪರ ವಿರೋಧ ಚರ್ಚೆಯನ್ನು ಹುಟ್ಟುಹಾಕಿದೆ.

ಓದಿ:ಹು-ಧಾ ಪಾಲಿಕೆ ಆವರಣದಲ್ಲಿಯೇ ಭರ್ಜರಿ ಬಾಡೂಟ: ಕಾರ್ಪೊರೇಷನ್​ನಲ್ಲಿ ಸಿದ್ಧವಾಯ್ತು ಬಿರಿಯಾನಿ, ಕಬಾಬ್

ABOUT THE AUTHOR

...view details