ಕರ್ನಾಟಕ

karnataka

ಮಹಿಳಾ ಉದ್ಯಮಿಯಿಂದ ನೂರಾರು ಬಡ ಕುಟುಂಬಗಳಿಗೆ ಬೆಳಕು: ಲಾಭಕ್ಕಲ್ಲ, ಉದ್ಯೋಗಕ್ಕಾಗಿ ಉದ್ಯಮ

By

Published : Aug 10, 2022, 4:55 PM IST

ಧಾರವಾಡ ಜಿಲ್ಲೆಯ ಅಣ್ಣಿಗೇರಿಯ ರಾಜೇಶ್ವರಿ ದೇಶಮುಖ ಅವರು ಶಾವಿಗೆ ಮತ್ತು ರೊಟ್ಟಿ ತಯಾರಿಕಾ ಘಟಕ ಸ್ಥಾಪಿಸಿ ಗ್ರಾಮೀಣ ಭಾಗದ ಮಹಿಳೆಯರು ಸ್ವಾವಲಂಬನೆಯ ಬದುಕು ಕಟ್ಟಿಕೊಳ್ಳಲು ನೆರವಾಗಿದ್ದಾರೆ.

annigeri-woman-has-helping-rural-areas-women-by-home-food-products-unit
ಮಹಿಳಾ ಉದ್ಯಮಿಯಿಂದ ನೂರಾರು ಬಡ ಕುಟುಂಬಗಳಿಗೆ ಬೆಳಕು: ಲಾಭಕ್ಕಾಗಿ ಅಲ್ಲ, ಉದ್ಯೋಗಕ್ಕಾಗಿ ಉದ್ಯಮ

ಹುಬ್ಬಳ್ಳಿ:ಅದು ಬರಗಾಲದಲ್ಲಿ ತುತ್ತು ಅನ್ನಕ್ಕಾಗಿಯೇ ಆರಂಭವಾದ ಮಹಿಳಾ ಉದ್ಯಮ. ಇಂದು ನೂರಾರು ಬಡ ಜನರಿಗೆ ಆಶ್ರಯ ತಾಣವಾಗಿದೆ. ಇಲ್ಲೊಬ್ಬ ಸಾಧಕಿ ಶಾವಿಗೆ ತಯಾರಕ ಘಟಕ ಸ್ಥಾಪಿಸಿ ನೂರಾರು ಮಹಿಳೆಯರಿಗೆ ಬದುಕು ಕಟ್ಟಿ ಕೊಟ್ಟಿದ್ದಾರೆ. ಕೇವಲ ಶಾವಿಗೆ ಅಷ್ಟೇ ಅಲ್ಲ, ರೊಟ್ಟಿ ಸಿದ್ಧಪಡಿಸುವ ಮೂಲಕವೂ ಮಹಿಳೆಯರಿಗೆ ಆಸರೆಯಾಗಿದ್ದಾರೆ.

2010 ಮತ್ತು 2011ರಲ್ಲಿ ತೀವ್ರ ಬರಗಾಲವಿತ್ತು. ಹೊಟ್ಟೆಗೆ ಹಿಟ್ಟು ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಕೈಯಲ್ಲಿ ಕೆಲಸವಿಲ್ಲ, ತಿನ್ನಲು ಅನ್ನವಿಲ್ಲದ ಸ್ಥಿತಿ ಅದು. ಇದೇ ಸಮಯದಲ್ಲಿ ಮಹಿಳೆಯರಿಗೆ ಉದ್ಯೋಗ ನೀಡಬೇಕೆಂದು ಯೋಚಿಸಿದ್ದ ಅಣ್ಣಿಗೇರಿಯ ರಾಜೇಶ್ವರಿ ದೇಶಮುಖ ಅವರು ಹೆಣ್ಣು ಮಕ್ಕಳಿಗೆ ಉದ್ಯೋಗ ಕೊಡಬೇಕು, ಊಟಕ್ಕೆ ಅನುಕೂಲ ಮಾಡಿಕೊಂಡಬೇಕೆಂಬ ನಿರ್ಧಾರ ಮಾಡಿದರು.

ಅದೇ ಸಮಯದಲ್ಲಿ ಸಿದ್ದವಾಗಿದ್ದೇ ಸಿದ್ಧಿ ಹೋಂ ಫುಡ್​​ ಪ್ರಾಡಕ್ಟ್ಸ್​ ಘಟಕ. ಈ ಘಟಕದಲ್ಲಿ ಪ್ರಾರಂಭದಲ್ಲಿ 100ರಿಂದ 200 ಕೆಜಿ ಶಾವಿಗೆ ತಯಾರಿಕೆ ಮಾಡಲಾಗುತ್ತಿತ್ತು. ಈಗ ಪ್ರತಿ ವರ್ಷ 1,000ರಿಂದ 1,200 ಕ್ವಿಂಟಲ್ ಶಾವಿಗೆ ಸಿದ್ದಪಡಿಸಿ ಮಾರಾಟ ಮಾಡುತ್ತಿದ್ದಾರೆ. ಧಾರವಾಡ, ಗದಗ, ಬಾಗಲಕೋಟೆ, ಕೊಪ್ಪಳ ಜಿಲ್ಲೆಗಳು ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಶಾವಿಗೆ ಮಾರಾಟ ಮಾಡಲಾಗುತ್ತಿದೆ.

ಮಹಿಳಾ ಉದ್ಯಮಿಯಿಂದ ನೂರಾರು ಬಡ ಕುಟುಂಬಗಳಿಗೆ ಬೆಳಕು: ಲಾಭಕ್ಕಾಗಿ ಅಲ್ಲ, ಉದ್ಯೋಗಕ್ಕಾಗಿ ಉದ್ಯಮ

ಒಂದೊಂದು ಗ್ರಾಮದಿಂದ ಒಂದು ಬಡ ಕುಟುಂಬ:ಶಾವಿಗೆ ಮಾರಾಟ ಮಾಡಲಿಕ್ಕೂ ಸಹ ಒಂದು ನಿಯಮವನ್ನು ಅಳವಡಿಸಿಕೊಳ್ಳಲಾಗಿದೆ. ಒಂದೊಂದು ಗ್ರಾಮಗಳಲ್ಲಿ ಒಂದು ಬಡ ಕುಟುಂಬವನ್ನು ಆಯ್ಕೆ ಮಾಡಿಕೊಂಡು ಅವರ ಮುಖಾಂತರ ಶಾವಿಗೆ ಮಾರಾಟ ನಡೆಯುತ್ತಿದೆ.

ಒಂದು ಗ್ರಾಮದಲ್ಲಿ ಒಬ್ಬರಿಗೆ ಮಾತ್ರ ಶಾವಿಗೆ ವಿತರಣೆ, ಅವರಿಂದ‌ ಗ್ರಾಹಕರಿಗೆ ತಲುಪಿಸುವ ಕೆಲಸ ಮಾಡಬೇಕಿದೆ. ಇವರ ಶಾವಿಗೆಗೆ ಗ್ರಾಮೀಣ ಭಾಗದಲ್ಲಿ ಸಾಕಷ್ಟು ಡಿಮ್ಯಾಂಡ್ ಬಂದಿದೆ. ಅಲ್ಲದೇ, ರೊಟ್ಟಿಗೂ ಸಾಕಷ್ಟು ಬೇಡಿಕೆ ಇದೆ. ಈ‌ ಹಿಂದೆ‌ ನಡೆದ ಎರಡು ಸಾಹಿತ್ಯ ಸಮ್ಮೇಳನಗಳಿಗೂ ರೊಟ್ಟಿ ಸಿದ್ದಪಡಿಸಿಕೊಟ್ಟಿದ್ದಾರೆ.

ಒಂದೊಂದು ಸಾಹಿತ್ಯ ಸಮ್ಮೇಳನಕ್ಕೆ 5 ಲಕ್ಷ ರೊಟ್ಟಿ ಸಿದ್ದಪಡಿಸಿ ಕೊಟ್ಟ ಹೆಗ್ಗಳಿಕೆಗೂ ಇವರು ಪಾತ್ರವಾಗಿದ್ದು, ಇವರು ಸಿದ್ದಪಡಿಸಿದ ರೊಟ್ಟಿ ಕರ್ನಾಟಕದ ಮೂಲೆ ಮೂಲೆಗೂ ರಪ್ತು ಆಗುತ್ತಿದೆ. ಹೀಗೆ ಸಿದ್ಧಪಡಿಸುವ ರೊಟ್ಟಿ ಮತ್ತು ಶಾವಿಗೆ ಲಾಭಕ್ಕಾಗಿ ಅಲ್ಲ. ಮಹಿಳೆಯರಿಗೆ ಉದ್ಯೋಗ, ಜನರಿಗೆ ಶುದ್ಧ ಆಹಾರ‌ ನೀಡಬೇಕೆಂಬುದೇ ಉದ್ದೇಶ ಎನ್ನುತ್ತಾರೆ ರಾಜೇಶ್ವರಿ.

ವಿದ್ಯಾಭ್ಯಾಸಕ್ಕೂ ನೆರವು:ನೂರಾರು ಎಕರೆ ಜಮೀನು ‌ಹೊಂದಿರುವ ರಾಜೇಶ್ವರಿಯವರು ತಾವೇ ಮುಂದೆ ನಿಂತು ಜಮೀನನ್ನು ಉಳುಮೆ ಮಾಡಿಸುವ ಮೂಲಕ ಸಾಧಕ ಕೃಷಿಕರೂ ಆಗಿದ್ದಾರೆ. ಅಷ್ಟೇ ಅಲ್ಲದೇ, ನೂರಾರು ಬಡ ಕುಟುಂಬಗಳಿಗೆ ‌ಮನೆ‌ ಕಟ್ಟಿಕೊಳ್ಳಲು ಜಾಗ ಹಾಗೂ ಅನೇಕ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ನೆರವು ನೀಡುವ ಮೂಲಕ ಇತರರಿಗೂ ಮಾದರಿಯಾಗಿದ್ದಾರೆ.

ಇದನ್ನೂ ಓದಿ:ಧ್ವಜ ಸಂಹಿತೆಗೆ ತಿದ್ದುಪಡಿ ತಂದರೂ ದಾಖಲೆ ನಿರ್ಮಿಸಿದೆ ಹುಬ್ಬಳ್ಳಿ ಖಾದಿ ಗ್ರಾಮೋದ್ಯೋಗ ಸಂಸ್ಥೆ

ABOUT THE AUTHOR

...view details