ದಾವಣಗೆರೆ: ಅವರು ನಿರಾಶ್ರಿತರು. ಒಪ್ಪೊತ್ತಿನ ಊಟಕ್ಕೂ ಪರಿತಪಿಸುತ್ತಿದ್ದವರು. ಇನ್ನೂ ಕೆಲವರು ತುತ್ತಿನ ಚೀಲ ತುಂಬಿಸಿಕೊಳ್ಳಲು ಮತ್ತೊಬ್ಬರ ಬಳಿ ಕೈಚಾಚುತ್ತಿದ್ದವರು. ಆದ್ರೀಗ ಅವರೆಲ್ಲರೂ ನಿರಾಶ್ರಿತರ ಕೇಂದ್ರದ ಅತಿಥಿಗಳಾಗಿದ್ದಾರೆ. ರೈತರಂತೆ ವ್ಯವಸಾಯದಲ್ಲಿ ತೊಡಗಿ ನಾನಾ ಬೆಳೆ ಬೆಳೆಯುವ ಮೂಲಕ ಸ್ವಾವಲಂಬಿಗಳಾಗಿ ಬದುಕು ಕಟ್ಟಿಕೊಳ್ಳುತ್ತಿದ್ದಾರೆ.
ಬೆಣ್ಣೆನಗರಿ ದಾವಣಗೆರೆಯ ಕೂಗಳತೆಯ ತುರ್ಚಘಟ್ಟ ಗ್ರಾಮದಲ್ಲಿರುವ ನಿರಾಶ್ರಿತರ ಪರಿಹಾರ ಕೇಂದ್ರ ಇದೀಗ ಅದೆಷ್ಟೋ ಭಿಕ್ಷುಕರು, ನಿರಾಶ್ರಿತರ ತಾಣವಾಗಿದೆ. ಇಲ್ಲಿರುವ 198 ನಿರಾಶ್ರಿತರು ವಿವಿಧ ತರಕಾರಿ ಹಾಗೂ ಬೆಳೆ ಬೆಳೆಯುವ ಮೂಲಕ ರೈತರಿಗೆ ಮಾದರಿಯಾಗಿದ್ದಾರೆ.
ನಿರಾಶ್ರಿತರ ಕೇಂದ್ರಕ್ಕೆ ಬಂದು ಭೂತಾಯಿ ಮಕ್ಕಳಾದ ಅನಾಥರು ತುರ್ಚಗಟ್ಟ ಹಾಗು ಬುಳ್ಳಾಪುರ ಗ್ರಾಮಗಳ ಮಧ್ಯೆ ಸುಮಾರು 10 ಎಕರೆಯಲ್ಲಿರುವ ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ ಎರಡು ವರ್ಷಗಳಿಂದ ಕೃಷಿ, ಹೈನುಗಾರಿಕೆ ಆರಂಭಿಸಲಾಗಿದೆ. ಇಲ್ಲಿ ಟೊಮ್ಯಾಟೋ, ರಾಗಿ, ಮೂಲಂಗಿ, ಹುರುಳಿ, ಸೌತೆ ಕಾಯಿ, ಬೆಂಡೆಕಾಯಿ, ಜವಳಿ ಕಾಯಿ, ಗುಲಾಬಿ, ಅಡಿಕೆ, ಬಾಳೆ, ಹಲಸು, ಮಾವು, ಸೀತಾಫಲ, ಮೆಣಸಿನ ಕಾಯಿ ಬೆಳೆ ಬೆಳೆಯುತ್ತಿದ್ದಾರೆ.
ಇಲ್ಲಿ ಕರ್ನಾಟಕದ ನಿರಾಶ್ರಿತರಲ್ಲದೇ ತಮಿಳುನಾಡು, ಆಂಧ್ರಪ್ರದೇಶ, ಕೇರಳ, ಉತ್ತರಪ್ರದೇಶ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಪಂಜಾಬ್ ಸೇರಿ ವಿವಿಧ ರಾಜ್ಯದ ನಿರಾಶ್ರಿತರಿಗೆ ಆಶ್ರಯ ಕಲ್ಪಿಸಲಾಗಿದೆ. ಕೆಲವರಿಗೆ ಕೃಷಿ ಮಾಡಿದ ಅನುಭವವೂ ಇದೆ. ಜಮೀನು, ಕೊಳವೆ ಬಾವಿ, ಬೆಳೆಯನ್ನು ಕಂಡು ಸಂತಸದಿಂದ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ.