ಕರ್ನಾಟಕ

karnataka

ದಾವಣಗೆರೆ: ಚಿಕನ್ ಊಟ ಸೇವಿಸಿ ಶಾಲಾ ಮಕ್ಕಳು ಅಸ್ವಸ್ಥ.. 14 ಮಂದಿ ಜಿಲ್ಲಾಸ್ಪತ್ರೆಗೆ ಶಿಫ್ಟ್​

By ETV Bharat Karnataka Team

Published : Sep 6, 2023, 2:51 PM IST

Updated : Sep 6, 2023, 7:13 PM IST

ದಾವಣಗೆರೆ ತಾಲೂಕಿನ ‌ಮಾಯಕೊಂಡದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯ 20ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥಗೊಂಂಡಿದ್ದಾರೆ.

children are sick
ಚಿಕನ್ ಊಟ ಸೇವಿಸಿ 20ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ, ಆಸ್ವತ್ರೆಗೆ ದಾಖಲು

ದಾವಣಗೆರೆ:ತಾಲೂಕಿನ ‌ಮಾಯಕೊಂಡದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಚಿಕನ್ ಸಾರು ಹಾಗೂ ಪಲಾವ್ ಸೇವಿಸಿದ ಬಳಿಕ ಆಸ್ಪತ್ರೆಗೆ ದಾಖಲಾಗಿದ್ದ ಮಕ್ಕಳಲ್ಲಿ 14 ಮಂದಿಯನ್ನು ಚಿಗಟೇರಿ ಜಿಲ್ಲಾಸ್ಪತ್ರೆಗೆ ಶಿಫ್ಟ್​ ಮಾಡಲಾಗಿದೆ. ಮಕ್ಕಳಿಗೆ ಮಾಯಕೊಂಡ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.

ನಿನ್ನೆ (ಮಂಗಳವಾರ) ರಾತ್ರಿ ಚಿಕನ್ ಸಾರು, ಅನ್ನ ಸೇವಿಸಿದ್ದ ಮಕ್ಕಳಿಗೆ ಇಂದು ಬೆಳಗ್ಗೆಯಿಂದಲೇ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಮಕ್ಕಳನ್ನು ಕೂಡಲೇ ಮಾಯಕೊಂಡ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗಾಗಿ ರವಾನೆ ಮಾಡಲಾಗಿತ್ತು.‌ ವಸತಿ ಶಾಲೆಯಲ್ಲಿ ಗುಣಮಟ್ಟದ ಊಟ ನೀಡುತ್ತಿಲ್ಲ‌ ಎಂದು ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆರೋಪ ಮಾಡಿದ್ದಾರೆ. ಇದರಿಂದ ಮೊರಾರ್ಜಿ ದೇಸಾಯಿ ವಸತಿ ಶಾಲಾ ಸಿಬ್ಬಂದಿ ವಿರುದ್ಧ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಳಪೆ ಗುಣ ಮಟ್ಟದ ಆಹಾರ ಘಟನೆಗೆ ಕಾರಣ:20ಕ್ಕೂ ಹೆಚ್ಚು ಮಕ್ಕಳು ಕಳಪೆ ಗುಣ ಮಟ್ಟದ ಆಹಾರ ಸೇವಿಸಿರುವುದು ಘಟನೆ ಕಾರಣ ಎಂದು ಮಾಯಕೊಂಡ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ತಿಳಿಸಿದ್ದಾರೆ. ಓರ್ವ ಬಾಲಕಿ ಸ್ಥಿತಿ ಗಂಭೀರವಾಗಿದ್ದರಿಂದ ತಕ್ಷಣ ಹೆಚ್ಚಿನ‌ ಚಿಕಿತ್ಸೆಗಾಗಿ ಮಾಯಕೊಂಡ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ದಾವಣಗೆರೆ ಚಿಗಟೇರಿ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿತ್ತು. ಮಾಯಕೊಂಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ವಿದ್ಯಾರ್ಥಿಗಳ ಆರೋಪವೇನು?:"ನಿನ್ನೆ(ಮಂಗಳವಾರ) ಮಧ್ಯಾಹ್ನ ಮಾಡಿದ ಚಿಕನ್ ಸಾಂಬಾರ್​ನ್ನು ರಾತ್ರಿ ಊಟಕ್ಕೂ ಬಡಿಸಲಾಗಿತ್ತು. ಅದರಲ್ಲಿ ಹೆಚ್ಚು ಎಣ್ಣೆ ಇತ್ತು. ಹಾಗಾಗಿ ನಾವು ಸರಿಯಾಗಿ ತಿನ್ನಲಿಲ್ಲ. ಇಲ್ಲಿ ಸರಿಯಾಗಿ ಅಡುಗೆ ಮಾಡಲ್ಲ. ಇಂದು ಬೆಳಗ್ಗೆ ಪಲಾವ್ ಮಾಡಿದ್ದರು. ಅದು ಕೂಡ ಚೆನ್ನಾಗಿರಲಿಲ್ಲ. ಆದರೂ ಅದನ್ನೇ ಸೇವಿಸಿದ್ದೇವೆ. ಯಾವಾಗಲೂ ಇದೇ ರೀತಿ ಅಡುಗೆ ಮಾಡುತ್ತಾರೆ. ಸ್ವಲ್ಪ ಜಾಸ್ತಿ ಅನ್ನ ಕೇಳಿದರೆ, ಅಡುಗೆ ಸರಿ ಇಲ್ಲ ಎಂದು ಹೇಳಿದರೆ ಟೀಚರ್ ಹೊಡೆಯುತ್ತಿದ್ದರು" ಎಂದು ಅಸ್ವಸ್ಥಳಾದ ವಿದ್ಯಾರ್ಥಿನಿಯೊಬ್ಬಳು ಆರೋಪಿಸಿದ್ದಾಳೆ.

ಇದನ್ನೂ ಓದಿ:ಚಾಮರಾಜನಗರ: ಚಿಕನ್ ಊಟ ತಿಂದು 30 ಮಕ್ಕಳು ಅಸ್ವಸ್ಥ, ಆಸ್ಪತ್ರೆಗೆ ದಾಖಲು

ಶಾಸಕ ಬಸವಂತಪ್ಪ, ಜಿಲ್ಲಾಧಿಕಾರಿ ವೆಂಕಟೇಶ್ ಭೇಟಿ: ಮಾಹಿತಿ ತಿಳಿದು ಮಾಯಕೊಂಡ ಕಾಂಗ್ರೆಸ್ ಶಾಸಕ ಬಸವಂತಪ್ಪ ಹಾಗೂ ಜಿಲ್ಲಾಧಿಕಾರಿ ವೆಂಕಟೇಶ್ ಎಂ.ವಿ ಅವರು ಶಾಲೆಗೆ ಭೇಟಿ ನೀಡಿ, ಆಹಾರದ ಗುಣಮ ಪರಿಶೀಲನೆ ನಡೆಸಿದರು. ಅಡುಗೆಗೆ ಬಳಕೆ ಮಾಡುವ ತರಕಾರಿಗಳನ್ನು ಕಂಡು ವಾರ್ಡನ್​ಗೆ ತರಾಟೆ ತೆಗೆದುಕೊಂಡರು. ಬಳಿಕ ಶಾಲೆಯಲ್ಲಿ ವಿತರಿಸುವ ಆಹಾರದ ಬಗ್ಗೆ ಮಕ್ಕಳಿಂದ ಮಾಹಿತಿ ಪಡೆದರು. ಬಳಿಕ ಜಿಲ್ಲಾಸ್ಪತ್ರೆಗೆ ತೆರಳಿ ಮಕ್ಕಳನ್ನು ಭೇಟಿಯಾದ ಜಿಲ್ಲಾಧಿಕಾರಿ ವೆಂಕಟೇಶ್ ಎಂವಿ, ಮಕ್ಕಳು ಹಾಗು ಪೋಷಕರನ್ನು ಭೇಟಿಯಾಗಿ ಧೈರ್ಯ ತುಂಬಿದರು. ಬಳಿಕ ಹಾಸ್ಟೆಲ್ ಹಾಗೂ ಶಾಲೆಯಲ್ಲಿನ ಸದ್ಯದ ಪರಿಸ್ಥಿತಿ ಬಗ್ಗೆ ಅಸ್ವಸ್ಥ ಮಕ್ಕಳಿಂದಲೇ ಮಾಹಿತಿ ಪಡೆದು, ಸಿಬ್ಬಂದಿ ವಿರುದ್ಧ ಅಗತ್ಯ ಕ್ರಮ ಜರುಗಿಸುವುದಾಗಿ ಡಿಸಿ ತಿಳಿಸಿದರು.

ಪೋಷಕರ ಆಕ್ರೋಶ: ''ಮೊದಲಿಂದಲು ಈ ಶಾಲೆಯಲ್ಲಿ ಸಮಸ್ಯೆ ಇದೆ ಎಂದು ಶಾಸಕರಿಗೆ ಮನವಿ ಸಲ್ಲಿಸಿದ್ದೆವು. ಆದರೆ, ಯಾವುದೇ ಪ್ರಯೋಜನ ಆಗಿರಲಿಲ್ಲ, ಉತ್ತಮ ಗುಣಮಟ್ಟದ ಆಹಾರ ನೀಡುವಂತೆ ಒತ್ತಾಯ ಮಾಡಿದ್ದೆವು, ಮಕ್ಕಳು ಹೇಳಿದರೆ ಬೆದರಿಸಲಾಗುತ್ತಿದೆ. ನಮ್ಮ ಮಗು ಅಸ್ವಸ್ಥ ಆಗಿರುವುದು ನಮ್ಮ ಗಮನಕ್ಕೆ ಬಂದಿಲ್ಲ, ಈ ಬಗ್ಗೆ ಸುದ್ದಿ ನೋಡಿ ನಾನು ಆಸ್ಪತ್ರೆಗೆ ಬಂದಿದ್ದೇನೆ. ಸದ್ಯ ಯಾವುದೇ ಪ್ರಾಣಾಪಾಯ ಆಗಿಲ್ಲ. ನಮಗೆ ಶಾಲೆಯ ಒಳಗೆ ಬಿಡುವುದಿಲ್ಲ, ಈ ಬಗ್ಗೆ ಅಡುಗೆ ಮಾಡುವವರ ವಿರುದ್ಧ ಕ್ರಮ ಜರುಗಿಸಬೇಕು'' ಎಂದು ಪೋಷಕ ಬಸವರಾಜ್ ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ:ರಾಯಚೂರು: ಶಾಲಾ ಬಿಸಿಯೂಟದ ಉಪ್ಪಿಟ್ಟಿನಲ್ಲಿ ಹಲ್ಲಿ.. ಆಹಾರ ಸೇವಿಸಿದ 70 ಮಕ್ಕಳು ಅಸ್ವಸ್ಥ

Last Updated : Sep 6, 2023, 7:13 PM IST

ABOUT THE AUTHOR

...view details