ಕರ್ನಾಟಕ

karnataka

By ETV Bharat Karnataka Team

Published : Dec 16, 2023, 7:20 PM IST

Updated : Dec 16, 2023, 7:43 PM IST

ETV Bharat / state

ಜಾತಿಗಣತಿ ವರದಿ ಜಾರಿ ಮಾಡದಂತೆ 60 ಶಾಸಕರು ಸಹಿ ಮಾಡಿ ಸಿಎಂಗೆ ಮನವಿ ಕೊಟ್ಟಿದ್ದೇವೆ: ಶಾಮನೂರು

ಸಿಎಂ ಸಿದ್ದರಾಮಯ್ಯ ಅವರಿಗೆ ಜಾತಿಗಣತಿ ವರದಿ ಬಿಡುಗಡೆ ಮಾಡದಂತೆ 73 ಲಿಂಗಾಯಿತ ಶಾಸಕರಲ್ಲಿ 60 ಶಾಸಕರು ಸಹಿ ಮಾಡಿ ಮನವಿ ಕೊಟ್ಟಿದ್ದೇವೆ ಎಂದು ಶಾಸಕ ಶಾಮನೂರು ಶಿವಶಂಕರಪ್ಪ ತಿಳಿಸಿದ್ದಾರೆ.

Etv Bharatmla-shamanur-shivshankarappa-reaction-on-caste-census-report
ಜಾತಿಗಣತಿ ವರದಿ ಜಾರಿ ಮಾಡದಂತೆ 60 ಶಾಸಕರು ಸಹಿ ಮಾಡಿ ಕೊಟ್ಟಿದ್ದೇವೆ: ಶಾಮನೂರು ಶಿವಶಂಕರಪ್ಪ

ಜಾತಿಗಣತಿ ವರದಿ ಕುರಿತು ಪ್ರತಿಕ್ರಿಯೆ

ದಾವಣಗೆರೆ: "ಈ ಹಿಂದೆ ನಡೆಸಲಾಗಿರುವ ಜಾತಿಗಣತಿ ವರದಿ ವೈಜ್ಞಾನಿಕವಾಗಿಲ್ಲ. ಆದ್ದರಿಂದ ಜಾತಿಗಣತಿ ವರದಿ ಬಿಡುಗಡೆ ಮಾಡದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ 73 ಜನ ಲಿಂಗಾಯಿತ ಶಾಸಕರಲ್ಲಿ 60 ಶಾಸಕರು ಸಹಿ ಮಾಡಿ ಮನವಿ ಕೊಟ್ಟಿದ್ದೇವೆ. ನಾನೇ ಇನ್ನು ಸರಿಯಾಗಿ ವರದಿ ನೋಡಿಲ್ಲ ಅಂತ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ" ಎಂದು ಶಾಸಕ ಹಾಗೂ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಹೇಳಿದರು.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಜಾತಿಗಣತಿ ಜಾರಿಗೆ ಆಗ್ರಹಿಸಿ ಚಿತ್ರದುರ್ಗದಲ್ಲಿ ಅಹಿಂದಾ ಸಮಾವೇಶ ನಡೆಸಲು ಸಿಎಂ ಸಿದ್ದರಾಮಯ್ಯ ತಯಾರಿ ನಡೆಸುತ್ತಿದ್ದಾರೆ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, ಅದು ನಡೆಯಲಿ, ನಾವು ಕೂಡ ಇದೇ ತಿಂಗಳ 23, 24ನೇ ತಾರೀಖು ದಾವಣಗೆರೆಯಲ್ಲಿ ನಡೆಯುವ ವೀರಶೈವ ಸಮಾವೇಶದಲ್ಲಿ ಶಕ್ತಿ ಪ್ರದರ್ಶನ ಮಾಡುತ್ತೇವೆ" ಎಂದರು.

ಜಾತಿಗಣತಿ ವರದಿಯನ್ನು ಸರ್ಕಾರ ಕೈಬಿಡಬೇಕು - ಚೆನ್ನಸಿದ್ದರಾಮ ಶಿವಾಚಾರ್ಯ ಸ್ವಾಮೀಜಿ : ಮತ್ತೊಂದೆಡೆ, ಶ್ರೀಶೈಲ ಪೀಠದ ಡಾ. ಚೆನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, "ಹಿಂದಿನ ಜಾತಿಗಣತಿ ವರದಿ ವೈಜ್ಞಾನಿಕವಲ್ಲ ಎಂಬ ಮಾತುಗಳು ಎಲ್ಲೆಡೆಯಿಂದ ಕೇಳಿ ಬರುತ್ತಿದೆ. ಕುಲಶಾಸ್ತ್ರೀಯ ಅಧ್ಯಯನ ಮಾಡಿ ಜಾತಿಗಣತಿ ಮಾಡುವುದು ಪದ್ಧತಿ. ಹಿಂದಿನ ಜಾತಿಗಣತಿ ವರದಿಯನ್ನು ನಾಲ್ಕು ಗೊಡೆಗಳ ಮಧ್ಯೆ ಕುಳಿತು ಮಾಡಿದ್ದಾರೆ ಎಂಬ ಮಾತುಗಳನ್ನು ನಾವು ಕೇಳಿದ್ದೇವೆ. ಹೀಗಾಗಿ ಜಾತಿಗಣತಿ ವರದಿ ಸ್ವೀಕರಿಸುವುದು ಸೂಕ್ತ ಅಲ್ಲ ಎನ್ನುವುದು ನನ್ನ ಅಭಿಪ್ರಾಯ. 60 ಜನ ಶಾಸಕರು ಸಹಿ ಮಾಡಿ ಜಾತಿಗಣತಿ ವರದಿ ಬಿಡುಗಡೆ ಮಾಡದಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ನೀಡಿರುವುದನ್ನು ನಾನು ಬೆಂಬಲಿಸುತ್ತೇನೆ. ಇದನ್ನು ಮುಖ್ಯಮಂತ್ರಿಗಳು ಪರಿಗಣಿಸಬೇಕು ಎಂದು ನಾವು ಹಕ್ಕೊತ್ತಾಯ ಮಾಡುತ್ತೇವೆ" ಎಂದು ಹೇಳಿದರು.

ಈ ಜಾತಿಗಣತಿ ವರದಿ ಬಿಡುಗಡೆ ಮಾಡಬೇಕು ಎಂದು ಹಿಂದುಳಿದ ಸಮುದಾಯಗಳು ಒತ್ತಾಯಿಸುತ್ತಿರುವುದರ ಬಗ್ಗೆ ಪ್ರತಿಕ್ರಿಯಿಸಿ, "ಇದರಲ್ಲಿ ಹಲವಾರು ಕಾರಣಗಳಿವೆ, ಸಂಘರ್ಷ ಬೇಡ. 10 ವರ್ಷಕ್ಕೊಮ್ಮೆ ಕುಲಶಾಸ್ತ್ರೀಯ ಅಧ್ಯಯನ ಮಾಡಿ ಜಾತಿಗಣತಿ ಮಾಡುವುದು ಪದ್ಧತಿ. ಇವೆರಡನ್ನು ಅನುಸರಿಸದೇ ಇಷ್ಟು ಅವಸರದಲ್ಲಿ ಮಾಡುವ ಅವಶ್ಯಕತೆ ಇರಲಿಲ್ಲ. ಈಗ ಸಿದ್ಧವಾಗಿರುವ ಜಾತಿಗಣತಿ ವರದಿಯಲ್ಲಿ ಇವೆಲ್ಲವನ್ನು ಅನುಸರಿಸದೇ ಇರುವುದರಿಂದ ಇದನ್ನು ಸರ್ಕಾರ ಕೈಬಿಡಬೇಕು" ಎಂದು ಒತ್ತಾಯಿಸಿದರು.

ಇದನ್ನೂ ಓದಿ:ಜನರಿಗೆ ಸುಳ್ಳು ಭರವಸೆ ನೀಡಿ ಸಿದ್ದರಾಮಯ್ಯ ಸರ್ಕಾರ ಮೋಸದಾಟವಾಡುತ್ತಿದೆ: ಕಾರಜೋಳ ಆರೋಪ

ಜಾತಿಗಣತಿ ವರದಿ ಬಗ್ಗೆ ಸಚಿವ ಪರಮೇಶ್ವರ್​ ಹೇಳಿದ್ದೇನು?:ಇತ್ತೀಚಿಗೆ, ಬೆಳಗಾವಿ ಸುವರ್ಣಸೌಧದಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮಾತನಾಡಿ, "ಜಾತಿಗಣತಿ ವರದಿ ಆಚೆ ಬಂದ ಮೇಲೆ ಸರಿಯಾಗಿಲ್ಲ ಅಂತ ಹೇಳಲಿ. ಸಮೀಕ್ಷೆಯನ್ನೇ ನೋಡದೇ ಅದರ ಟೀಕೆ ಮಾಡುವುದು ಸರಿಯಲ್ಲ. ಯಾವ ಸಮುದಾಯ ಹೆಚ್ಚಿದೆ, ಯಾವ ಸಮುದಾಯ ಕಡಿಮೆ ಇದೆ, ಯಾವ ಸಮುದಾಯ ಹಿಂದುಳಿದಿದೆ ಎಂದು ತಿಳಿದುಕೊಳ್ಳಲು 168 ಕೋಟಿ ನೀಡಿ ಖರ್ಚು ಮಾಡಿ ಜಾತಿಗಣತಿ ವರದಿ ಸಿದ್ಧ ಪಡಿಸಲಾಗಿದೆ. ವರದಿಯನ್ನು ಸರ್ಕಾರಕ್ಕೆ ಕೊಡಬೇಕು. ವರದಿ ಸಲ್ಲಿಕೆಯಾದ ಬಳಿಕ ಅದರಲ್ಲಿ ಏನಿದೆ ಎಂಬುದು ಗೊತ್ತಾಗುತ್ತೆ. ವರದಿ ಆಧರಿಸಿ ನಾವು ಕಾರ್ಯಕ್ರಮ ರೂಪಿಸಬೇಕಾಗುತ್ತದೆ" ಎಂದಿದ್ದರು.

Last Updated : Dec 16, 2023, 7:43 PM IST

ABOUT THE AUTHOR

...view details