ದಾವಣಗೆರೆ:ಮಧ್ಯಂತರ ಜಾಮೀನು ದೊರೆತ ಬೆನಲ್ಲೇ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ತಮ್ಮ ಸ್ವಕ್ಷೇತ್ರ ಚನ್ನಗಿರಿಯಲ್ಲಿ ಕಾಣಿಸಿಕೊಂಡಿದ್ದಾರೆ. ಚನ್ನಗಿರಿಯಲ್ಲಿ ಬೆಂಬಲಿಗರು ಮಾಡಾಳ್ ಅವರನ್ನು ಅದ್ದೂರಿಯಾಗಿ ಬರಮಾಡಿಕೊಂಡರು. ಚನ್ನಗಿರಿ ತಾಲೂಕಿನ ಚನ್ನೇಶಪುರ ಗ್ರಾಮದಲ್ಲಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪನವರು ಚನ್ನಕೇಶವ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು. ಬಳಿಕ ಕಾರ್ಯಕರ್ತರು ಅದ್ಧೂರಿಯಾಗಿ ಸ್ವಾಗತಿಸಿದರು.
ಗುರುವಾರ ನಡೆದ ಲೋಕಾಯುಕ್ತ ದಾಳಿ ಬಳಿಕ ಕಳೆದ ಆರು ದಿನಗಳಿಂದ ಶಾಸಕ ಮಾಡಾಳ್ ಸಾರ್ವಜನಿಕವಾಗಿ ಕಾಣಿಸಿಕೊಂಡಿರಲಿಲ್ಲ. ಇವರ ಪುತ್ರ ಪ್ರಶಾಂತ್ ಮಾಡಾಳ್ 40 ಲಕ್ಷ ರೂ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತರು ದಾಳಿ ನಡೆಸಿ, ಬಂಧಿಸಿದ್ದರು. ಬಳಿಕ ಕೋರ್ಟ್, ಅವರಿಗೆ ನ್ಯಾಯಾಂಗ ಬಂಧನ ವಿಧಿಸಿತ್ತು. ಶಾಸಕ ಮಾಡಾಳ್ ಪ್ರಕರಣ ಎ1 ಆರೋಪಿಯಾಗಿದ್ದರಿಂದ, ತಮ್ಮ ಬಂಧನ ಸಾಧ್ಯತೆ ಹಿನ್ನೆಲೆ ನಿರೀಕ್ಷಣಾ ಜಾಮೀನಿನ ಮೊರೆ ಹೋಗಿದ್ದರು. ಇಂದು ಹೈಕೋರ್ಟ್ ವಿಚಾರಣೆ ನಡೆಸಿ, ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಈ ಮೂಲಕ ಶಾಸಕರಿಗೆ ರಿಲೀಫ್ ಸಿಕ್ಕಿದೆ. ಈ ಬೆನ್ನಲ್ಲೇ ಸ್ವಕ್ಷೇತ್ರದಲ್ಲಿ ಕಂಡುಬಂದರು.
ಕಣ್ಣೀರು ಹಾಕಿದ ಶಾಸಕ:ಬೆಂಗಳೂರಲ್ಲಿ ಸಿಕ್ಕಿರುವ ಹಣಕ್ಕೂ ನನಗೆ ಸಂಬಂಧವಿಲ್ಲ, ನಾನು ಇದರಿಂದ ದೋಷಮುಕ್ತವಾಗಿ ಬರುತ್ತೇನೆಂದು ಎಂದು ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರು ಕಣ್ಣೀರು ಹಾಕಿದರು. ಚನ್ನಗಿರಿ ತಾಲೂಕಿನ ಚನ್ನೇಶಪುರ ಗ್ರಾಮದಲ್ಲಿ ಮಾತನಾಡಿದ ಅವರು, ನನ್ನ ಮೇಲೆ ಆರೋಪ ಬಂದಿದೆ, ಅದರಿಂದ ನಾನು ನೂರಕ್ಕೆ ನೂರು ದೋಷಮುಕ್ತವಾಗುತ್ತೇನೆ. ನಾನು ಯಾವುದೇ ಭ್ರಷ್ಟಾಚಾರದಲ್ಲಿ ಭಾಗಿಯಾಗಿಲ್ಲ, ಬೆಂಗಳೂರಲ್ಲಿ ಸಿಕ್ಕಿರುವ ಹಣಕ್ಕೂ ನನಗೆ ಸಂಬಂಧವಿಲ್ಲ, ನಾನು ಇದರಿಂದ ದೋಷಮುಕ್ತವಾಗಿ ಬರುತ್ತೇನೆ, ನಮ್ಮದು 125 ಎಕರೆ ಅಡಿಕೆ ತೋಟವಿದ್ದು, ಅದರ ಆದಾಯವಿದೆ. ಲೋಕಾಯುಕ್ತ ದಾಳಿ ಹಿಂದೆ ಯಾರ ಕೈವಾಡವಿದೆ ಎಂದು ನಾನು ಹೇಳಲಾರೆ. ಕೋರ್ಟ್ ಆದೇಶದಂತೆ 48 ಗಂಟೆಯೊಳಗೆ ನಾನು ಲೋಕಾಯುಕ್ತಕ್ಕೆ ಹಾಜರಾಗುತ್ತೇನೆ. ನನಗೆ ಇಲ್ಲಿವರೆಗೂ ಲೋಕಾಯುಕ್ತದಿಂದ ಯಾವುದೇ ನೋಟಿಸ್ ಬಂದಿಲ್ಲ. ನನ್ನ ಮೇಲೆ ಯಾವುದೇ ಆರೋಪ ಇಲ್ಲ. ಕೆಎಸ್ಡಿಎಲ್ ಸಂಸ್ಥೆ ಅಧ್ಯಕ್ಷ ಅನ್ನೋ ಕಾರಣಕ್ಕೆ ನನ್ನ ಹೆಸರು ಸೇರಿಸಿದ್ದಾರೆ, ನಾನು ಕೆಎಸ್ಡಿಎಲ್ಗೆ ಬಂದ ನಂತರ 1350 ಕೋಟಿ ವಹಿವಾಟು ಮಾಡಿದ್ದೇನೆ. ಸಂಸ್ಥೆಗೆ 250 ಕೋಟಿ ಲಾಭ ಮಾಡಿದ್ದೇನೆ. ನಿಗಮದಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ ಎಂದು ತಿಳಿಸಿದರು.
ಬಿಜೆಪಿ ಪ್ರಾಥಮಿಕ ಸದಸ್ಯತ್ವದಿಂದ ವಜಾ ಮಾಡಿದ ವಿಚಾರವಾಗಿ ಮಾತನಾಡಿದ ಅವರು ಹೈಕಮಾಂಡ್ ತೀರ್ಮಾನ ಸಮರ್ಥಿಸಿಕೊಂಡರು. ನಮ್ಮ ಪಕ್ಷದ ಹೈಕಮಾಂಡ್ ನಿರ್ಧಾರ ಸರಿ ಇದೆ, ನನ್ನ ಮೇಲೆ ಆರೋಪ ಕೇಳಿ ಬಂದಾಗ ಅವರು ತೆಗೆದುಕೊಂಡ ತೀರ್ಮಾನ ಸರಿ ಇದೆ. ನಾನು ದೋಷಮುಕ್ತನಾಗಿ ಪಕ್ಷಕ್ಕೆ ಮತ್ತೇ ಸೇರ್ಪಡೆಯಾಗುತ್ತೇನೆ ಎಂದರು.