ಕರ್ನಾಟಕ

karnataka

By

Published : May 7, 2021, 5:07 PM IST

ETV Bharat / state

ಬಹರೈನ್​ನಿಂದ ರಾಜ್ಯಕ್ಕೆ ಬಂದ ಆಕ್ಸಿಜನ್: ಮಂಗಳೂರಿನ ಇಬ್ಬರು ಶಾಸಕರ ನಡುವೆ ಟ್ವೀಟ್ ವಾರ್

ನಮ್ಮ ರಾಜ್ಯದಲ್ಲಿ  ಉತ್ಪಾದನೆಯಾಗುವ ಆಕ್ಸಿಜನ್ ಬಳಸಲು ನಮಗೆ ಅವಕಾಶವಿಲ್ಲ. ದೂರದ ಬಹರೈನ್​ನಿಂದ ಬಂದ ಆಕ್ಸಿಜನ್ ಹಡಗೇರಿ ಖುಷಿಪಡುವ ಬಿಜೆಪಿ ನಾಯಕರ ಆತ್ಮನಿರ್ಭರತೆಗೆ ಚಪ್ಪಾಳೆ ಹೊಡೆಯಬೇಕೋ, ದೀಪ ಹಚ್ಚಬೇಕೋ ತಿಳಿಯುತ್ತಿಲ್ಲ. ಧಿಕ್ಕಾರವಿದೆ ನಿಮ್ಮ ಅಸಮರ್ಥತೆಗೆ ಎಂದು ಶಾಸಕ ಯು.ಟಿ. ಖಾದರ್​ ಟ್ವೀಟ್​ ಮಾಡಿದ್ದಾರೆ.

tweet-war-between-two-mlas-in-mangalore
ಯು ಟಿ ಖಾದರ್ ಹಾಗೂ ವೇದವ್ಯಾಸ ಕಾಮತ್

ಮಂಗಳೂರು:ಎರಡು ದಿನಗಳ ಹಿಂದೆ ಬಹರೈನ್​ನಿಂದ ನಗರಕ್ಕೆ ಬಂದ 40 ಟನ್ ಆಕ್ಸಿಜನ್​ ಅನ್ನು ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ವೇದವ್ಯಾಸ ಕಾಮತ್ ಮತ್ತು ಜಿಲ್ಲಾಡಳಿತದ ಅಧಿಕಾರಿಗಳು ಸ್ವಾಗತಿಸಿದ್ದರು. ಆಕ್ಸಿಜನ್ ಹೊತ್ತು ತಂದ ಹಡಗನ್ನೇರಿ ಇವರುಗಳು ತೆಗೆಸಿಕೊಂಡ ಪೊಟೋವನ್ನು ಶಾಸಕ ಯು.ಟಿ. ಖಾದರ್ ಟ್ವೀಟ್​ ಮಾಡಿದ್ದರು. ಇದಕ್ಕೆ ಶಾಸಕ ವೇದವ್ಯಾಸ ಕಾಮತ್ ಈಗ ಪ್ರತ್ಯುತ್ತರ ನೀಡಿದ್ದಾರೆ.

ಶಾಸಕ ಯು.ಟಿ. ಖಾದರ್​ ಅವರು ಟ್ವೀಟ್​ ಮಾಡಿದ್ದು, ನಮ್ಮ ರಾಜ್ಯದಲ್ಲಿ ಉತ್ಪಾದನೆಯಾಗುವ ಆಕ್ಸಿಜನ್ ಬಳಸಲು ನಮಗೆ ಅವಕಾಶವಿಲ್ಲ. ದೂರದ ಬಹರೈನ್ ನಿಂದ ಬಂದ ಆಕ್ಸಿಜನ್ ಹಡಗೇರಿ ಖುಷಿಪಡುವ ಬಿಜೆಪಿ ನಾಯಕರ ಆತ್ಮನಿರ್ಭರತೆಗೆ ಚಪ್ಪಾಳೆ ಹೊಡೆಯಬೇಕೋ, ದೀಪ ಹಚ್ಚಬೇಕೋ ತಿಳಿಯುತ್ತಿಲ್ಲ. ಧಿಕ್ಕಾರವಿದೆ ನಿಮ್ಮ ಅಸಮರ್ಥತೆಗೆ ಎಂದು ಕುಟುಕಿದ್ದರು.

ಇದಕ್ಕೆ ಟ್ವೀಟ್​ನಲ್ಲಿಯೇ ಪ್ರತ್ಯುತ್ತರಿಸಿದ ಶಾಸಕ ವೇದವ್ಯಾಸ ಕಾಮತ್, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಕೈಗೊಂಡ ಕಾರ್ಯಗಳ ಬಗ್ಗೆ ಮೊದಲು ತಿಳಿಯಿರಿ. ಈಗಾಗಲೇ ವೆನ್ಲಾಕ್ ಸೇರಿ ತಾಲೂಕು ಆಸ್ಪತ್ರೆಗಳಲ್ಲಿ ಆಕ್ಸಿಜನ್ ಪ್ಲಾಂಟ್ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಬಹರೈನ್ ನಿಂದ ಆಕ್ಸಿಜನ್ ತುಂಬಿರುವ ಹಡಗು ಬಂದಾಗ ಈ ಭಾಗದ ಜನರ ಪ್ರತಿನಿಧಿಗಳಾಗಿ ಅದನ್ನು ಸ್ವಾಗತಿಸಿದ್ದೇವೆ. ಅದಕ್ಕಾಗಿ ತಾವು ದೀಪ ಹಚ್ಚುವುದು ಅಥವಾ ಚಪ್ಪಾಳೆ ತಟ್ಟುವ ಅವಶ್ಯಕತೆಯಿಲ್ಲ. ನಮ್ಮ ದೇಶದಿಂದ ಬೇರೆ ದೇಶಗಳಿಗೆ (ಬಹರೈನ್ ಸೇರಿದಂತೆ) ವ್ಯಾಕ್ಸಿನ್ ಕಳುಹಿಸಿದಾಗ ಜರೆದವರು ನೀವುಗಳೆಲ್ಲವೆ? ಈಗ ಬಹರೈನ್ ಪರವಾಗಿ ಚಪ್ಪಾಳೆ ತಟ್ಟುತ್ತಿದ್ದೀರಿ. ಮೆಚ್ಚಬೇಕು ನಿಮ್ಮ ಆತ್ಮ ನಿರ್ಭರತೆಯನ್ನು ಎಂದು ತಿರುಗೇಟು ನೀಡಿದ್ದಾರೆ.

ಮತ್ತೆ ಇದಕ್ಕೆ ಟ್ವೀಟ್ ಜೋಡಿಸಿರುವ ಖಾದರ್ ಅವರು, ಸತ್ಯ ಹೇಳಿದರೆ ಬಾಲ ಸುಟ್ಟ ಬೆಕ್ಕಿನಂತೆ ಆಡುವುದು ಏಕೆ ವೇದವ್ಯಾಸ ಕಾಮತ್ ಅವರು. ನಮ್ಮ ರಾಜ್ಯ ಸೇರಿದಂತೆ ಬೇರೆ ರಾಜ್ಯಕ್ಕೂ ಸರಬರಾಜು ಮಾಡುವಷ್ಟು ಆಕ್ಸಿಜನ್ ನಮ್ಮ ರಾಜ್ಯದಲ್ಲಿ ಇದ್ದರೂ ಕೂಡ ಅದರ ಬಳಕೆ ಮಾಡಲು ನೀವು ಅಸಮರ್ಥರಾಗಿದ್ದೀರಿ. ಇದರ ಪರಿಣಾಮ ನೂರಾರು ಮಂದಿ ಉಸಿರುಗಟ್ಟಿ ಸತ್ತರೂ ನೀವು ತುಟಿಬಿಚ್ಚಲಿಲ್ಲ. ಈಗ ಬಹರೈನ್ ಆಕ್ಸಿಜನ್ ಸ್ವೀಕರಿಸಿ ಅವರ ಪರ ಚಪ್ಪಾಳೆತಟ್ಟಿ ಭಾರತದ ಮಾನ ಹರಾಜು ಹಾಕಿದ್ದು ನೀವು. ಮಂಗಳೂರಿನಷ್ಟೇ ದೊಡ್ಡದಿರುವ ದೇಶದ ಬಳಿ ಆಕ್ಸಿಜನ್ ಗೆ ಅಂಗಲಾಚುವ ಪರಿಸ್ಥಿತಿ ನಿರ್ಮಿಸಿದ್ದು ಏಕೆ? ಎಂದು ಜನತೆಗೆ ಉತ್ತರ ಕೊಡಿ ಎಂದು ಪ್ರಶ್ನಿಸಿದ್ದಾರೆ.

ಓದಿ:ಬೆಡ್ ಬ್ಲಾಕಿಂಗ್.. ವಿಚಾರಣೆ ತೀವ್ರವಾಗ್ತಿದ್ದಂತೆಯೇ ಶಾಸಕ ಸತೀಶ್ ರೆಡ್ಡಿ ಆಪ್ತನಿಗೆ ಹೆಚ್ಚಾಯ್ತು ಬಿಪಿ, ಆಸ್ಪತ್ರೆಗೆ ದಾಖಲು!

ABOUT THE AUTHOR

...view details