ಬೆಳ್ತಂಗಡಿ:3ನೇ ದಿನದ ಕರ್ಫ್ಯೂಗೆ ತಾಲೂಕಿನ ಪ್ರಮುಖ ಪೇಟೆಗಳು ಸೇರಿದಂತೆ ಗ್ರಾಮಾಂತರ ಪ್ರದೇಶದಲ್ಲೂ ಉತ್ತಮ ಸ್ಪಂದನೆ ದೊರಕಿದೆ.
ಬೆಳಗ್ಗೆ 6ರಿಂದ 10 ಗಂಟೆವರೆಗೆ ಅಗತ್ಯ ವಸ್ತುಗಳ ಖರೀದಿಗೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಬಳಿಕ ಅಂಗಡಿ ಮುಂಗಟ್ಟುಗಳು ಮುಚ್ಚಲ್ಪಟ್ಟರೂ ವಾಹನಗಳ ಓಡಾಟ ಸಾಮಾನ್ಯವಾಗಿತ್ತು.
ಸರ್ಕಾರಿ ಕಚೇರಿ, ಬ್ಯಾಂಕ್, ಅಂಚೆ ಕಚೇರಿ ಮತ್ತಿತರ ಇಲಾಖೆ ಕಚೇರಿಗಳು ತೆರೆದಿದ್ದರೂ ಜನರ ಓಡಾಟ ವಿರಳವಾಗಿತ್ತು. ತಮ್ಮ ವಾಹನಗಳಿಗೆ ಪಾಸ್ ಮಾಡಿಸಿಕೊಂಡ ಅಗತ್ಯ ವಸ್ತುಗಳ ವಾಹನಗಳ ಓಡಾಟ ಎಂದಿನಂತೆ ಇದ್ದು, ಹಾಲು, ತರಕಾರಿ, ಮೀನು, ಮಾಂಸದಂಗಡಿ, ಅಗತ್ಯ ವಸ್ತುಗಳ ಅಂಗಡಿಗಳಲ್ಲಿ ಜನರು ಬೆಳಗ್ಗೆ ಹಾಜರಿದ್ದರು.
ಬೆಳ್ತಂಗಡಿ, ಉಜಿರೆ, ಗುರುವಾಯನಕೆರೆ, ಮಡಂತ್ಯಾರು, ಕಲ್ಲೇರಿ, ಧರ್ಮಸ್ಥಳ, ಚಾರ್ಮಾಡಿ ಮೊದಲಾದ ಕಡೆಗಳಲ್ಲಿ ಬ್ಯಾರಿಕೇಡ್ ಹಾಕಿ ಬೆಳಗ್ಗೆ 10 ಗಂಟೆಗಳ ಬಳಿಕ ಅನಗತ್ಯವಾಗಿ ಓಡಾಡುತ್ತಿರುವವರಿಗೆ ಪೊಲೀಸರು ಕಡಿವಾಣ ಹಾಕಿದ್ದಾರೆ.
ಬೆಳ್ತಂಗಡಿ ವೃತ್ತ ನಿರೀಕ್ಷಕ ಸಂದೇಶ್ ಪಿ.ಜಿ. ಮಾರ್ಗದರ್ಶನದಲ್ಲಿ ಆಯಾಯ ಠಾಣೆಯ ಎಸ್ಐಗಳಾದ ನಂದ ಕುಮಾರ್, ಸೌಮ್ಯ, ಲೋಲಾಕ್ಷ, ಪವನ್ ಕುಮಾರ್ ಹಾಗೂ ಒಡಿಯಪ್ಪ ನೇತೃತ್ವದಲ್ಲಿ ಪೊಲೀಸರ ತಂಡ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಕೈಗೊಂಡಿದೆ. ಅಲ್ಲದೇ ಮಾಸ್ಕ್ ಧರಿಸದೆ ಓಡಾಡುವವರಿಗೆ ದಂಡ ವಿಧಿಸುತ್ತಿದ್ದಾರೆ.