ಕರ್ನಾಟಕ

karnataka

ಆರ್ಥಿಕ ಸ್ವಾವಲಂಬನೆ: ಮಂಗಳೂರಿನಲ್ಲಿ ಬೀದಿ ಬದಿ ವ್ಯಾಪಾರಿಗಳಿಂದ ಸೊಸೈಟಿ ಸ್ಥಾಪನೆ

By ETV Bharat Karnataka Team

Published : Jan 11, 2024, 7:07 AM IST

ಆರ್ಥಿಕ ಸ್ವಾವಲಂಬನೆಗಾಗಿ ಬೀದಿ ಬದಿ ವ್ಯಾಪಾರಿಗಳು ಸೇರಿಕೊಂಡು 'ದಕ್ಷಿಣ ಕನ್ನಡ ಬೀದಿ ಬದಿ ವ್ಯಾಪಾರಸ್ಥರ ಸಹಕಾರ ಸಂಘ' ಸ್ಥಾಪಿಸಿದ್ದಾರೆ. ಸಂಘದಲ್ಲಿ 1,300 ಸದಸ್ಯರಿದ್ದಾರೆ.

dakshina-kannada-beedi-badi-vyaparasthara-co-operative-society-at-mangaluru
ಬೀದಿ ಬದಿ ವ್ಯಾಪಾರಿಗಳಿಂದ ರಾಜ್ಯದಲ್ಲಿಯೇ ಮೊದಲ ಪ್ರಯತ್ನ: ಆರ್ಥಿಕ ಸ್ವಾವಲಂಬನೆಗಾಗಿ ಸೊಸೈಟಿ ಸ್ಥಾಪನೆ

ಆರ್ಥಿಕ ಸ್ವಾವಲಂಬನೆಗಾಗಿ ಬೀದಿ ಬದಿ ವ್ಯಾಪಾರಿಗಳಿಂದ ಸೊಸೈಟಿ ಸ್ಥಾಪನೆ

ಮಂಗಳೂರು:ನಗರದ ಬೀದಿಬದಿ ವ್ಯಾಪಾರಿಗಳು ತಮ್ಮ ಆರ್ಥಿಕ ಸ್ವಾವಲಂಬನೆಗಾಗಿ 'ದಕ್ಷಿಣ ಕನ್ನಡ ಬೀದಿಬದಿ ವ್ಯಾಪಾರಸ್ಥರ ಸಹಕಾರ ಸಂಘ'ವನ್ನು ಆರಂಭಿಸಿದ್ದಾರೆ. ತಮ್ಮ ವ್ಯವಹಾರ ನಡೆಸಲು ಇತರರ ಮೇಲಿನ ಅವಲಂಬನೆ ತಪ್ಪಿಸುವುದೇ ಸಂಘ ಸ್ಥಾಪನೆಯ ಹಿಂದಿನ ಉದ್ದೇಶ.

ನಗರದ ಬೀದಿಗಳಲ್ಲಿ ನೂರಾರು ವ್ಯಾಪಾರಿಗಳು ತಮ್ಮ ವ್ಯಾಪಾರ ನಡೆಸುತ್ತಿದ್ದಾರೆ. ಈ ವ್ಯಾಪಾರಿಗಳು ಆರ್ಥಿಕವಾಗಿ ಸಬಲರಲ್ಲ. ತಮ್ಮ ದಿನನಿತ್ಯದ ವ್ಯಾಪಾರಕ್ಕಾಗಿ ಇರುವ ಇತರರಿಂದ ಹಣ ಪಡೆಯುತ್ತಾರೆ. ಕೆಲವೊಮ್ಮೆ ಮೀಟರ್ ಬಡ್ಡಿದಾರರ ಮೊರೆ ಹೋಗುತ್ತಾರೆ. ಈ ಮೀಟರ್ ಬಡ್ಡಿದಾರರಿಂದ ಪಡೆದ ಸಾಲ ತೀರಿಸಲು ವ್ಯಾಪಾರದಿಂದ ಗಳಿಸಿದ ಲಾಭಗಳನ್ನು ವ್ಯಯಿಸುವಂತಾಗಿದೆ. ಇದನ್ನು ತಪ್ಪಿಸಲು ದಕ್ಷಿಣ ಕನ್ನಡ ಜಿಲ್ಲಾ ಬೀದಿ ಬದಿ ವ್ಯಾಪಾರಸ್ಥರ ಸಂಘವು ದಕ್ಷಿಣ ಕನ್ನಡ ಬೀದಿ ಬದಿ ವ್ಯಾಪಾರಸ್ಥರ ಸಹಕಾರ ಸಂಘ (ನಿ) ಆರಂಭಿಸಿದೆ.

ಈ ಬಗ್ಗೆ ಮಾತನಾಡಿದ ದಕ್ಷಿಣ ಕನ್ನಡ ಬೀದಿಬದಿ ವ್ಯಾಪಾರಸ್ಥರ ಸಹಕಾರ ಸಂಘ (ನಿ) ಅಧ್ಯಕ್ಷ ಬಿ.ಕೆ.ಇಮ್ತಿಯಾಝ್, "ಬೀದಿ ಬದಿ ವ್ಯಾಪಾರಿಗಳು ವ್ಯಾಪಾರಕ್ಕಾಗಿ ಮೀಟರ್ ಬಡ್ಡಿ ವ್ಯಾಪಾರಿಗಳ ಮೊರೆ ಹೋಗಿ ಸಂಕಷ್ಟಕ್ಕೀಡಾಗುತ್ತಾರೆ. ಮತ್ತೊಂದೆಡೆ, ನಕಲಿ ಕಂಪನಿಗಳು ಅಧಿಕ ಲಾಭದ ಆಸೆ ತೋರಿಸಿ ಬೀದಿ ಬದಿ ವ್ಯಾಪಾರಿಗಳ ಹಣ ದೋಚುತ್ತಿದ್ದಾರೆ. ಇದನ್ನು ತಡೆಯಲು ಮತ್ತು ಬೀದಿ ಬದಿ ವ್ಯಾಪಾರಿಗಳಿಗೆ ಹಣಕಾಸು ನೆರವು ನೀಡಲು, ಅವರ ಹಣವನ್ನು ಹೂಡಿಕೆ ಮಾಡಲು‌ ಸಹಕಾರ ಸಂಘವನ್ನು ಸ್ಥಾಪಿಸಲಾಗಿದೆ" ಎಂದು ತಿಳಿಸಿದರು.

ಬೀದಿ ಬದಿ ವ್ಯಾಪಾರಿ ಅಬ್ದುಲ್ ರಹಿಮಾನ್ ಮಾತನಾಡಿ, "ನಾವು ಮೀಟರ್ ಬಡ್ಡಿದಾರರಿಂದ ಸಾಲ ಪಡೆದ ಪರಿಣಾಮ ದುಡಿದ ಎಲ್ಲಾ ಹಣವನ್ನು ಅವರಿಗೆ ನೀಡಬೇಕಾದ ಪರಿಸ್ಥಿತಿ ಇತ್ತು. ಅಲ್ಲದೆ ನಕಲಿ ಕಂಪನಿಗಳು ಹಣ ಪಡೆದು ವಂಚನೆ ಮಾಡುತ್ತಿದ್ದಾರೆ. ಕಳೆದ ಒಂದು ತಿಂಗಳ ಹಿಂದೆ ಬೀದಿ ಬದಿ ವ್ಯಾಪಾರಿಗಳಿಗೆ ನಕಲಿ ಕಂಪನಿ ಹೆಸರಲ್ಲಿ ಸುಮಾರು 60 ಲಕ್ಷ ರೂ.ವರೆಗೆ ವಂಚನೆಯಾಗಿದೆ. ಇದನ್ನೆಲ್ಲ ಮನಗಂಡು ನಾವು ಈ ಸೊಸೈಟಿ ಪ್ರಾರಂಭಿಸಿದ್ದೇವೆ" ಎಂದರು.

ರಾಜ್ಯದಲ್ಲೇ ಮೊದಲ ಪ್ರಯತ್ನ: ಬೀದಿ ಬದಿ ವ್ಯಾಪಾರಸ್ಥರ ಸಂಘದಲ್ಲಿ ಜಿಲ್ಲೆಯ ನಾಲ್ಕು ತಾಲೂಕುಗಳಾದ ಮಂಗಳೂರು, ಉಳ್ಳಾಲ, ಬಂಟ್ವಾಳ, ಮೂಡಬಿದ್ರೆಯ 500 ಮಂದಿ ಸದಸ್ಯರಿದ್ದಾರೆ. ಈ ಸಂಘ ಸ್ಥಾಪನೆಯಾಗಬೇಕಾದರೆ 1,000 ಸದಸ್ಯರ ಅವಶ್ಯಕತೆ ಇತ್ತು. ಆಗ ಬೀದಿ ಬದಿ ವ್ಯಾಪಾರಸ್ಥರ ಕುಟುಂಬದವರನ್ನೇ ಸದಸ್ಯರನ್ನಾಗಿ ಮಾಡಲಾಗಿದೆ. ಈಗ 1,300 ಸದಸ್ಯರಿದ್ದು 10 ಲಕ್ಷ ರೂ ಬಂಡವಾಳ ಹೂಡಿಕೆಯಾಗಿದೆ. ಈ ಸಹಕಾರ ಸಂಘಕ್ಕೆ ಬೀದಿ ಬದಿ ವ್ಯಾಪಾರಿಗಳನ್ನು ಹೊರತುಪಡಿಸಿ ಇತರ ಹಣ ಹೂಡಿಕೆ ಮಾಡದಿರಲು ನಿರ್ಧರಿಸಲಾಗಿದೆ. ಬೀದಿ ಬದಿ ವ್ಯಾಪಾರಿಗಳು ಆರ್ಥಿಕ ಸ್ವಾವಲಂಬನೆಗಾಗಿ ಸಹಕಾರ ಸಂಘ ಮಾಡಿರುವುದು ರಾಜ್ಯದಲ್ಲೇ ಮೊದಲ ಪ್ರಯತ್ನ ಎಂದು ಹೇಳಲಾಗಿದೆ.

ಇದನ್ನೂ ಓದಿ:ಮಂಗಳೂರು ಬಂದರಿಗೆ ನಾಲ್ಕನೇ ಪ್ರವಾಸಿ ಹಡಗು ಎಂ.ಎಸ್ ರಿವೇರಿಯಾ ಆಗಮನ

ABOUT THE AUTHOR

...view details