ಮಂಗಳೂರು: ವಿದ್ಯುತ್ ಬಿಲ್ ಕಟ್ಟದಿರುವುದರಿಂದ ಮನೆಯೊಂದರ ಫ್ಯೂಸ್ ತೆಗೆದ ಹಿನ್ನೆಲೆಯಲ್ಲಿ ಮೆಸ್ಕಾಂ ಸಿಬ್ಬಂದಿ ಮೇಲೆ ಹಲ್ಲೆಗೈದಿರುದನ್ನು ಖಂಡಿಸಿ, ಸೂಕ್ತ ಕ್ರಮ ಕೈಗೊಳ್ಳಲು ಮೆಸ್ಕಾಂ ಅಧಿಕಾರಿಗಳು ಹಾಗೂ ನೌಕರರು ಇಂದು ಬೆಳಗ್ಗೆ ಕಂಕನಾಡಿ ಪೊಲೀಸ್ ಇಸ್ಸ್ಸ್ಪೆಕ್ಟರ್ಗೆ ಮನವಿ ಸಲ್ಲಿಸಿದರು.
ಹಲ್ಲೆಗೊಳಗಾದ ಮೆಸ್ಕಾಂ ಸಿಬ್ಬಂದಿ ಬಸವರಾಜ್ ಮಾತನಾಡಿ, ಮಂಗಳೂರು ನಗರದ ನಾಗುರಿಯ ಮನೆಯೊಂದರ ಮೂರು ತಿಂಗಳ ವಿದ್ಯುತ್ ಬಿಲ್ 9,500 ಸಾವಿರ ರೂ. ಬಾಕಿಯಿತ್ತು. ಈ ಹಿನ್ನೆಲೆಯಲ್ಲಿ ಮೇಲಾಧಿಕಾರಿಗಳ ಆದೇಶದಂತೆ ನಾನು ಆ ಮನೆಗೆ ತೆರಳಿ ಫ್ಯೂಸ್ ತೆಗೆದು ತಂದಿದ್ದೆ. ಬಳಿಕ ಮನೆಯವರು ವಿದ್ಯುತ್ ಬಿಲ್ ಪಾವತಿಸಿದ ಹಿನ್ನೆಲೆಯಲ್ಲಿ ಸಂಜೆ ಮತ್ತೆ ಫ್ಯೂಸ್ ಹಾಕಲು ತೆರಳಿದ್ದೆ. ಈ ಸಂದರ್ಭ ಆ ಮನೆಯವರೇ ಆದ ಇಬ್ಬರು ಕಾರ್ನಲ್ಲಿ ಬಂದು, ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆಗೈದಿದ್ದಾರೆ. ಅಲ್ಲದೆ ಆ ಮನೆಯೊಡತಿಯ ಕಾಲು ಹಿಡಿಸಿದ್ದಾರೆ ಎಂದು ಆರೋಪಿಸಿದ್ದಾರೆ.