ಚಿಕ್ಕಮಗಳೂರು:ಕಾಫಿನಾಡು ಚಿಕ್ಕಮಗಳೂರಿನಲ್ಲಿ ಮಳೆ ಅಬ್ಬರ ಜೋರಾಗಿದೆ. ಬಾಳೆಹೊನ್ನೂರು, ಕೊಟ್ಟಿಗೆಹಾರ, ಚಾರ್ಮಾಡಿ ಘಾಟಿ ಸೇರಿದಂತೆ ಮೂಡಿಗೆರೆಯ ಸುತ್ತ ಮುತ್ತಲ ಭಾಗದಲ್ಲಿ ಧಾರಕಾರ ಮಳೆ ಸುರಿಯುತ್ತಿದೆ.
ಮಳೆನಾಡಾಯ್ತು ಮಲೆನಾಡು ಚಿಕ್ಕಮಗಳೂರು.. ವರುಣನ ಅಬ್ಬರಕ್ಕೆ ಜನಜೀವನ ಅಸ್ತವ್ಯಸ್ತ!
ಚಿಕ್ಕಮಗಳೂರಿನ ಸುತ್ತಮುತ್ತ ವರುಣನ ಅಬ್ಬರ ಜೋರಾಗಿದ್ದು, ಮಳೆಯಿಂದಾಗಿ ಕೆಲವೆಡೆ ಮರಗಳು ಧರೆಗೆ ಉರುಳಿ ಟ್ರಾಫಿಕ್ ಜಾಮ್ ಆಗಿದೆ.
ಬೆಳಗ್ಗೆಯಿಂದಲೂ ನಿರಂತರ ಮಳೆ ಸುರಿಯುತ್ತಿರುವ ಹಿನ್ನಲೆಯಲ್ಲಿ ಬಾಳೆಹೂನ್ನೂರು-ಚಿಕ್ಕಮಗಳೂರು ರಸ್ತೆಯಲ್ಲಿ ಬೃಹತ್ ಗಾತ್ರದ ಮರಗಳು ಧರೆಗೆ ಉರುಳಿವೆ. ಬಾಳೆಹೊನ್ನೂರಿನ ಕಣತಿ ಬಳಿ ಮರಗಳು ರಸ್ತೆ ಮೇಲೆ ಉರುಳಿದ್ದರಿಂದಾಗಿ ಗಂಟೆಗೂ ಅಧಿಕ ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ಅದೇ ಮಾರ್ಗದಲ್ಲಿ ಸಂಚರಿಸುತ್ತಿದ್ದ ಸಂಸದ ತೇಜಸ್ವಿ ಸೂರ್ಯ ಅವರು ಕೂಡ ಟ್ರಾಫಿಕ್ ಜಾಮ್ನಲ್ಲಿ ಸಿಲುಕಿ ಕೆಲ ಕಾಲ ಪರದಾಡುವಂತಾಯ್ತು.
ಸ್ಥಳೀಯರು ಹಾಗೂ ಅರಣ್ಯ ಸಿಬ್ಬಂದಿ ಸಹಾಯದಿಂದ ಮರ ತೆರವು ಕಾರ್ಯಚರಣೆ ನಡೆಸಿದರು. ಈಗ ಮತ್ತೆ ನಿಧಾನವಾಗಿ ಟ್ರಾಫಿಕ್ ಜಾಮ್ ತಿಳಿಯಾಗುತ್ತಿದೆ. ಇತ್ತ ಚಾರ್ಮಾಡಿ ಘಾಟಿಯಲ್ಲಿಯೂ ಒಂದು ಮರ ಉರುಳಿದ್ದು ಅಲ್ಲಲ್ಲಿ ವಿದ್ಯುತ್ ಕಂಬಗಳು ಬಿದ್ದಿರುವ ವರದಿಯಾಗಿವೆ.