ಚಾಮರಾಜನಗರ:ಇಲ್ಲಿಗೆ ಬಂದ್ರೆ ಸಿಎಂ ಸ್ಥಾನ ಕಳೆದುಕೊಳ್ತಾರೆ ಎಂಬ ಮೂಢನಂಬಿಕೆಯನ್ನು ಈ ಬಾರಿಯಾದರೂ ಯಡಿಯೂರಪ್ಪ ಮುರಿಯುತ್ತಾರಾ ಎಂಬ ಪ್ರಶ್ನೆ ಎಲ್ಲರಲ್ಲಿ ಮನೆ ಮಾಡಿದೆ.
ಹೌದು, ಸಮ್ಮಿಶ್ರ ಸರ್ಕಾರದ ಅಂತ್ಯದ ನಂತರ ಬಿಜೆಪಿ ಸರ್ಕಾರ ರಚನೆ ಮಾಡಲಿದ್ದು, ಯಡಿಯೂರಪ್ಪ ಅವರೇ ಮತ್ತೊಂದು ಅವಧಿಗೆ ಸಿಎಂ ಆಗ್ತಾರೆ ಎಂದು ಹೇಳಲಾಗ್ತಿದೆ. ಈ ಮಧ್ಯೆ ಯಡಿಯೂರಪ್ಪ ಸಿಎಂ ಆದರೂ ಚಾಮರಾಜನಗರಕ್ಕೆ ಬಂದು, ನಗರಕ್ಕೆ ಅಂಟಿರುವ ಕಳಂಕವನ್ನು ಮತ್ತೊಮ್ಮೆ ದೂರ ಮಾಡ್ತಾರಾ ಎಂಬ ಚರ್ಚೆಯೂ ಜೋರಾಗಿ ನಡೆಯುತ್ತಿದೆ.
ಈ ಹಿಂದೆ ಯಡಿಯೂರಪ್ಪ ಸಿಎಂ ಆಗಿದ್ದಾಗ ಜಿಲ್ಲಾ ಕೇಂದ್ರಕ್ಕೆ ಒಮ್ಮೆಯೂ ಭೇಟಿ ನೀಡಿರಲಿಲ್ಲ. ಚಾಮರಾಜನಗರದ ಸಂತೇಮರಹಳ್ಳಿ, ಕೊಳ್ಳೇಗಾಲ, ಗುಂಡ್ಲುಪೇಟೆಗೆ ಸಾಕಷ್ಟು ಬಾರಿ ಬಂದಿದ್ದ ಅವರು, ನಗರದ ಕಡೆ ಬರುವ ಮನಸ್ಸು ಮಾಡಿರಲಿಲ್ಲ. ಇದಕ್ಕೆ ಕಾರಣ ಅಧಿಕಾರ ಕಳೆದುಕೊಳ್ಳುವ ಭಯ ಎಂಬುದು ಜನರ ಮಾತು.
ಇನ್ನು ಚಾಮರಾಜನಗರಕ್ಕೆ ಅಂಟಿರುವ ಕಳಂಕವನ್ನು ದೂರ ಮಾಡಿದ್ದು ಮಾಜಿ ಸಿಎಂ ಸಿದ್ದರಾಮಯ್ಯ. ಸಿಎಂ ಆಗಿದ್ದ ವೇಳೆ 7 ಬಾರಿ ಜಿಲ್ಲಾ ಕೇಂದ್ರಕ್ಕೆ ಭೇಟಿ ನೀಡಿ, ಚಾಮರಾಜನಗರದ ಬಗ್ಗೆ ಇದ್ದ ಮೂಢನಂಬಿಕೆಯನ್ನು ಮುರಿದಿದ್ದರು. ಅಲ್ಲದೆ, ತಾನು ಚಾಮರಾಜನಗರಕ್ಕೆ ಭೇಟಿ ನೀಡಿದ ಬಳಿಕವೇ ಸಿಎಂ ಆದೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿಕೆ ನೀಡಿದ್ದರು. ಈ ನಿದರ್ಶನಗಳಿದ್ದರೂ ಸಿಎಂ ಆಗಲಿರುವ ಯಡಿಯೂರಪ್ಪ ಜಿಲ್ಲೆಗೆ ಬರ್ತಾರಾ? ಎಂಬ ಮಾತುಗಳು ಹರಿದಾಡುತ್ತಿವೆ.