ಕರ್ನಾಟಕ

karnataka

By

Published : May 8, 2022, 10:41 AM IST

ETV Bharat / state

ಭಾರತದ ಸಂವಿಧಾನ ಇನ್ನೂ ಪರಿಪೂರ್ಣವಾಗಿ ಜಾರಿಯಾಗಿಲ್ಲ: ಸಚಿವ ನಾರಾಯಣಸ್ವಾಮಿ

ಭಾರತದ ಸಂವಿಧಾನ ಇನ್ನೂ ಕೂಡ ಸಂಪೂರ್ಣವಾಗಿ ಜಾರಿಯಾಗಿಲ್ಲ. ಶೋಷಿತರು ಹಾಗೂ ಕಳೆದ 75 ವರ್ಷಗಳಿಂದ ಮೀಸಲಾತಿಯನ್ನು ಪಡೆದುಕೊಳ್ಳಲು ಸಾಧ್ಯವಾಗದಿರುವ ಸಣ್ಣ ಸಣ್ಣ ಸಮುದಾಯಗಳಿಗೆ ಮೀಸಲಾತಿಯನ್ನು ಕಲ್ಪಿಸುವ ನಿಟ್ಟಿನಲ್ಲಿ ವಿಧಾನಸಭೆ ಮತ್ತು ಲೋಕಸಭೆಯಲ್ಲಿ ಗಂಭೀರವಾಗಿ ಚರ್ಚೆಯಾಗಬೇಕಾಗಿದೆ ಎಂದು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದರು.

ಸಚಿವ ನಾರಾಯಣಸ್ವಾಮಿ
ಸಚಿವ ನಾರಾಯಣಸ್ವಾಮಿ

ಚಾಮರಾಜನಗರ: ಮಂತ್ರಿಯಾಗಿ ಹೇಳುತ್ತಿದ್ದೇನೆ, ಭಾರತದ ಸಂವಿಧಾನ ಇನ್ನೂ ಪರಿಪೂರ್ಣವಾಗಿ ಜಾರಿಯಾಗಿಲ್ಲ. ಹಲವು ರಾಜ್ಯಗಳಲ್ಲಿ ಪರಿಶಿಷ್ಟ ಜಾತಿ ಅಭಿವೃದ್ಧಿ ನಿಗಮಗಳಿಲ್ಲ. ಎಸ್​ಸಿ ಮತ್ತು ಎಸ್​ಟಿ ಸಮುದಾಯಗಳಿಗೆ ಎಷ್ಟು ಹಣ ನೀಡಲಾಗುತ್ತಿದೆ?, ಎಷ್ಟು ಅಭಿವೃದ್ಧಿಯಾಗಿದೆ? ಎಂಬುದರ ಬಗ್ಗೆ ವರದಿಯಿಲ್ಲ, ಚರ್ಚೆಯಿಲ್ಲ ಎಂದು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಹೇಳಿದರು‌.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಮಾದಿಗ ಒಕ್ಕೂಟ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಹಾಗೂ ಡಾ.ಬಾಬು ಜಗಜೀವನ ರಾಮ್​ ಜಯಂತಿಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಭಾರತದ ಸಂವಿಧಾನ ಇನ್ನೂ ಕೂಡ ಸಂಪೂರ್ಣವಾಗಿ ಜಾರಿಯಾಗಿಲ್ಲ. ಶೋಷಿತರು ಹಾಗೂ ಕಳೆದ 75 ವರ್ಷಗಳಿಂದ ಮೀಸಲಾತಿ ಪಡೆದುಕೊಳ್ಳಲು ಸಾಧ್ಯವಾಗದಿರುವ ಸಣ್ಣ ಸಣ್ಣ ಸಮುದಾಯಗಳಿಗೆ ಮೀಸಲಾತಿಯನ್ನು ಕಲ್ಪಿಸುವ ನಿಟ್ಟಿನಲ್ಲಿ ವಿಧಾನಸಭೆ ಮತ್ತು ಲೋಕಸಭೆಯಲ್ಲಿ ಗಂಭೀರವಾಗಿ ಚರ್ಚೆಯಾಗಬೇಕಾಗಿದೆ ಎಂದರು.

ಅಂಬೇಡ್ಕರ್ ಅವರು ದೇಶದ ಅಭಿವೃದ್ಧಿಗೆ ಪೂರಕವಾದ ಎಲ್ಲಾ ಸಮಾಜದವರಿಗೂ ಸಾಮಾಜಿಕ ನ್ಯಾಯವನ್ನು ಕಲ್ಪಿಸುವ ಉದ್ದೇಶದಿಂದ ಉತ್ಕೃಷ್ಟವಾದ ಸಂವಿಧಾನ ಕೊಟ್ಟಿದ್ದಾರೆ. ಅವರ ಆಶಯದಂತೆ ಕಳೆದ 75 ವರ್ಷಗಳಿಂದ ಸಂವಿಧಾನ ಸಮರ್ಪಕವಾಗಿ ಅನುಷ್ಟಾನವಾಗಿದ್ದರೆ, ಇಂದು ನಾವು ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಜಾರಿಗಾಗಿ ಹಾಗೂ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಕೊಡಿ ಎಂದು ಹೋರಾಟ ಮಾಡುವ ಅನಿವಾರ್ಯತೆ ಬರುತ್ತಿರಲಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ಪೂನಾ ಒಪ್ಪಂದ ಆಗದಿದ್ದರೆ ರಾಷ್ಟ್ರದಲ್ಲಿ ರಕ್ತಕ್ರಾಂತಿಯೂ ಆಗಬಹುದಿತ್ತು, ಪಾಕಿಸ್ತಾನದಂತೆ ದೇಶ ಇಬ್ಭಾಗವಾಗುತ್ತಿತ್ತು. ಆದರೆ, ರಾಷ್ಟ್ರ ಮತ್ತು ಸಮುದಾಯ ಎರಡು ಕಣ್ಣುಗಳಂತೆ ಅಂಬೇಡ್ಕರ್ ಕಂಡಿದ್ದರಿಂದ ಪೂನಾ ಒಪ್ಪಂದ ಆಯಿತು. ಸಂವಿಧಾನ ಬದ್ಧವಾಗಿ ನೀಡಿದ್ದ ಸವಲತ್ತುಗಳನ್ನು ಸಹ ಇನ್ನು ಅನೇಕ ರಾಜ್ಯಗಳು ಅನುಷ್ಠಾನ ತರಲು ಮುಂದಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ದೇಶದಲ್ಲಿ ದಲಿತ ಸಂಘಟನೆಗಳ ಕೆಲಸ ಕೇವಲ ಅಂಬೇಡ್ಕರ್ ಮತ್ತು ಬಾಬು ಜಗಜೀವನ ರಾಮ್​ ಅವರ ಫೋಟೋಗಳಿಗೆ ಹಾರ ಹಾಕಿ ಜಯಂತಿ ಮಾಡಿ ಬ್ಯಾಂಡ್ ಸೆಟ್ ಹಾಗೂ ಡಿಜೆ ಸೌಂಡ್ ಬಾರಿಸುವುದಕ್ಕಷ್ಟೇ ಸಿಮೀತವಾಗಿದೆ. ದಲಿತ ಸಂಘರ್ಷ ಸಮಿತಿ ಈಗ ತನ್ನ ವರ್ಚಸ್ಸು ಕಳೆದುಕೊಂಡಿದೆ. ಶೋಷಿತರಿಗೆ ಸವಲತ್ತು ಕಲ್ಪಿಸುವ ಹೋರಾಟ ಮಾಡುವ ಅಂದಿನ ಶಕ್ತಿ ಈಗ ಇಲ್ಲ. ಕೇಂದ್ರ ಸರ್ಕಾರ ದೇಶದ 30 ರಾಜ್ಯಗಳಿಗೆ ಮೀಸಲಾತಿ ವರ್ಗೀಕರಣ ಮಾಡುವುದು ಅಗತ್ಯವೋ ಎಂಬ ವರದಿಯನ್ನು ನೀಡಿ ಎಂದರೆ ಕೇವಲ 6 ರಾಜ್ಯಗಳು ಮಾತ್ರ ವರದಿಯನ್ನು ನೀಡಿದ್ದವು. ಯೋಜನೆಗಳ ಅನುಷ್ಠಾನ ಹಾಗೂ ವರ್ಗಗಳ ಅಭಿವೃದ್ಧಿಗೆ ಎಷ್ಟು ಒತ್ತು ನೀಡಲಾಗಿದೆ ಎಂಬ ಬಗ್ಗೆ ಯಾವ ರಾಜ್ಯದಲ್ಲಿಯೂ ಮಾಹಿತಿ ಇಲ್ಲ ಎಂದರು.

ಒಳ ಮೀಸಲಾತಿ ಜಾರಿ ಮಾಡೇ ಮಾಡುತ್ತೇವೆ: ನಮ್ಮದು ನುಡಿದಂತೆ ನಡೆಯವ ಸರ್ಕಾರ, ಕಳೆದ ಅವಧಿಯಲ್ಲಿ ಸದಾಶಿವ ಆಯೋಗ ವರದಿಯನ್ನು ಜಾರಿ ಮಾಡಲು ಸಿದ್ದರಾಮಯ್ಯ ಸರ್ಕಾರ ಹಿಂದೇಟು ಹಾಕಿತ್ತು. ಆದರೆ, ರಾಜ್ಯ ಹಾಗೂ ದೇಶದಲ್ಲಿರುವ ಬಿಜೆಪಿ ಸರ್ಕಾರ ಒಳ ಮೀಸಲಾತಿಯನ್ನು ಜಾರಿ ಮಾಡುತ್ತದೆ. ಪ್ರಣಾಳಿಕೆಯಲ್ಲಿ ಅಳವಡಿಸಿದಂತೆ ರಾಜ್ಯದಲ್ಲಿ ಜಾರಿ ಮಾಡಿ, ಅನುಷ್ಠಾನಕ್ಕಾಗಿ ಕೇಂದ್ರಕ್ಕೆ ಕಳುಹಿಸಿಕೊಡುತ್ತೇವೆ. ಇದು ಶತಸಿದ್ಧ ಎಂದು ಭರವಸೆ ನೀಡಿದರು‌. ಈ ವೇಳೆ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ, ಶಾಸಕರಾದ ಮಹೇಶ್, ಪುಟ್ಟರಂಗಶೆಟ್ಟಿ, ನರೇಂದ್ರ ಇದ್ದರು.

ಇದನ್ನೂ ಓದಿ:ಹೀಗೆ ಕುಳಿತಿರುವುದು ನಾಲ್ವರ ಶವಗಳು! ಇದು ಮೃತದೇಹಗಳನ್ನು ನೂರಾರು ವರ್ಷ ಕೆಡದಂತಿಡುವ ಸಂಶೋಧನೆ!

ABOUT THE AUTHOR

...view details