ಚಾಮರಾಜನಗರ :ಸಿನಿಪ್ರಿಯರಿಂದ ಉತ್ತಮ ಪ್ರತಿಕ್ರಿಯೆ ಪಡೆದಿರುವ 'ಗರುಡ ಗಮನ-ವೃಷಭ ವಾಹನ' ಚಿತ್ರವೀಗ ವಿವಾದದ ಸುಳಿಯಲ್ಲಿ ಸಿಲುಕಿದೆ. ಕೊಲೆ ದೃಶ್ಯವೊಂದಕ್ಕೆ 'ಸೋಜುಗದ ಸೂಜಿ ಮಲ್ಲಿಗೆ' ಎಂಬ ಮಹದೇಶ್ವರನ ಹಾಡನ್ನು ಬಳಸಿಕೊಂಡಿರುವುದು ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ.
ಭಕ್ತಿ, ಭಾವ ಸೂಚಿಸಲು ಬಳಸುವ ಒಂದು ದೈವಿಕ ಜನಪದ ಗೀತೆಯನ್ನ ಹೀಗೆ ಕೊಲೆ ದೃಶ್ಯಕ್ಕೆ ಬಳಸಿಕೊಳ್ಳುವುದು ಸರಿಯೇ? ಜಾನಪದ ಎಂದ ಮಾತ್ರಕ್ಕೆ ಯಾವುದಕ್ಕೆ ಬೇಕಾದರೂ ಬಳಸಿಕೊಳ್ಳಬಹುದೇ? ಯಾರೂ ಕೇಳುವಂತಿಲ್ಲವೇ? ಯಾವ ಹಾಡನ್ನು ಯಾವ ಸನ್ನಿವೇಶಕ್ಕೆ ಬಳಸಿಕೊಳ್ಳಬೇಕೆಂಬ ಸಣ್ಣ ಪ್ರಜ್ಞೆಯೂ ಇರಲಿಲ್ಲವೇ? ಎಂದು ಮಾದಪ್ಪನ ಭಕ್ತರು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಿತ್ರ ತಂಡ ಈ ಬಗ್ಗೆ ಗಮನಿಸಬೇಕು. ಈ ಕೂಡಲೇ ಈ ದೃಶ್ಯ ತೆಗೆದು ಹಾಕಬೇಕು ಹಾಗೂ ನಿರ್ದೇಶಕರು ಕ್ಷಮೆಯಾಚಿಸಬೇಕು ಎಂದು ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಹಾಗೂ ಜಾನಪದ ಗಾಯಕ ಸಿ.ಎಂ ನರಸಿಂಹಮೂರ್ತಿ ಒತ್ತಾಯಿಸಿದ್ದಾರೆ.