ಕರ್ನಾಟಕ

karnataka

By ETV Bharat Karnataka Team

Published : Jan 6, 2024, 6:40 PM IST

ETV Bharat / state

ನಕಲಿ ಅಂಕಪಟ್ಟಿ ಕೊಟ್ಟು ಗ್ರಾಮ ಲೆಕ್ಕಿಗ ಉದ್ಯೋಗ ಪಡೆದ 8 ಮಂದಿಗೆ 2 ವರ್ಷ ಜೈಲು ಶಿಕ್ಷೆ

ನಕಲಿ ಅಂಕಪಟ್ಟಿ ನೀಡಿ ಗ್ರಾಮ ಲೆಕ್ಕಿಗ ಹುದ್ದೆ ಗಿಟ್ಟಿಸಿಕೊಂಡ ಆರೋಪ ಸಾಬೀತಾದ ಹಿನ್ನೆಲೆ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 8 ಮಂದಿಗೆ 2 ವರ್ಷ ಜೈಲು ಶಿಕ್ಷೆ ವಿಧಿಸಿದೆ.

eight-employees-jailed-for-fake-mark-sheets-in-chamarajanagar
ನಕಲಿ ಅಂಕಪಟ್ಟಿ ಕೊಟ್ಟು ಗ್ರಾಮ ಲೆಕ್ಕಿಗ ಉದ್ಯೋಗ ಪಡೆದ 8 ಮಂದಿಗೆ 2 ವರ್ಷ ಜೈಲು ಶಿಕ್ಷೆ

ಚಾಮರಾಜನಗರ: ನಕಲಿ ಅಂಕಪಟ್ಟಿ ಸಲ್ಲಿಸಿ ಗ್ರಾಮ ಲೆಕ್ಕಿಗರ ಉದ್ಯೋಗ ಗಿಟ್ಟಿಸಿಕೊಂಡ ಆರೋಪ ಸಾಬೀತಾದ ಹಿನ್ನೆಲೆ 8 ಮಂದಿಗೆ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 2 ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದೆ. ಹಿರಿಯ ಸಿವಿಲ್ ನ್ಯಾ. ಹೊನ್ನುಸ್ವಾಮಿ ಅವರು ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ.

ಕೋಲಾರ ತಾಲೂಕಿನ ಸುನೀಲ್ ಕುಮಾರ್ (25), ಅರಸಿಕೆರೆ ತಾಲೂಕಿನ ಸಂತೋಷ್ ಕುಮಾರ್ (29), ಹಾಸನ ತಾಲೂಕಿನ ಎ ಬಿ ಶಂಕರ್ (39), ಮುಳಬಾಗಿಲು ತಾಲೂಕಿನ ಎಂ. ಷಣ್ಮುಗ (25), ನಾರಾಯಣಸ್ವಾಮಿ (25), ದೇವನಹಳ್ಳಿ ತಾಲೂಕಿನ ಶ್ರೀರಾಂ (27), ದೊಡ್ಡಬಳ್ಳಾಪುರ ತಾಲೂಕಿನ ಮುನಿರಾಜು (25), ಹೊಸಕೋಟೆ ತಾಲೂಕಿನ ಎಸ್ ಬಿ‌‌ ಸಿದ್ದಲಿಂಗಯ್ಯ (24) ಶಿಕ್ಷೆಗೊಳಗಾದವರು.

ಪ್ರಕರಣ ಹಿನ್ನೆಲೆ : 2012ರಲ್ಲಿ ಚಾಮರಾಜನಗರ ಜಿಲ್ಲೆಯಲ್ಲಿ ಖಾಲಿ ಇದ್ದ 46 ಗ್ರಾಮ ಲೆಕ್ಕಿಗ ಹುದ್ದೆಯನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಲಾಗಿತ್ತು. ಆ ಸಂದರ್ಭದಲ್ಲಿ ಈ 8 ಮಂದಿ ಅಪರಾಧಿಗಳು ದೆಹಲಿ ಪಿಯು ಬೋರ್ಡ್ ಹಾಗೂ ಕರ್ನಾಟಕ ಶಿಕ್ಷಣ ಇಲಾಖೆಯ ನಕಲಿ ಅಂಕಪಟ್ಟಿಗಳನ್ನು ಸಲ್ಲಿಸಿ ಉದ್ಯೋಗ ಪಡೆದುಕೊಂಡಿದ್ದರು.

ಬಳಿಕ 2013ರಲ್ಲಿ ಅಂಕಪಟ್ಟಿಗಳ ನೈಜತೆ ಪರಿಶೀಲನೆ ವೇಳೆ ನಕಲಿ ಎಂದು ತಿಳಿದುಬಂದಿತ್ತು. ಈ ಸಂಬಂಧ ಚಾಮರಾಜನಗರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದರ ಬೆನ್ನಲ್ಲೇ 8 ಮಂದಿಯನ್ನು ಸೇವೆಯಿಂದ ವಜಾ ಮಾಡಲಾಗಿತ್ತು. ಈ ಪ್ರಕರಣದ ವಿಚಾರಣೆಯು ಸಿಜೆಎಂ ನ್ಯಾಯಾಲಯದಲ್ಲಿ ನಡೆದಿತ್ತು. ಇದೀಗ ವಿಚಾರಣೆ ಪೂರ್ಣಗೊಂಡಿದ್ದು, ನಕಲಿ ಅಂಕಪಟ್ಟಿ ಕೊಟ್ಟು ವಂಚಿಸಿರುವುದು ಸಾಬೀತಾದ ಹಿನ್ನೆಲೆ 8 ಮಂದಿಗೆ ಶಿಕ್ಷೆ ವಿಧಿಸಿ ಕೋರ್ಟ್​ ಆದೇಶಿಸಿದೆ. ಸರ್ಕಾರದ ಪರವಾಗಿ ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕ ಎ ಸಿ‌ ಮಹೇಶ್ ವಾದ ಮಂಡಿಸಿದ್ದರು.

ಇದನ್ನೂ ಓದಿ :ಮಲ್ಲೇಶ್ವರದ ಬ್ರಿಗೇಡ್ ಶಾಲೆಗೆ ₹ 1 ಲಕ್ಷ ದಂಡ ವಿಧಿಸಿದ ಹೈಕೋರ್ಟ್

ABOUT THE AUTHOR

...view details