ಬಳ್ಳಾರಿ:ರಾಜ್ಯವ್ಯಾಪಿ ಕರೆ ನೀಡಿದ್ದ ಸಾರಿಗೆ ನೌಕರರ ಮುಷ್ಕರದ ಹಿನ್ನೆಲೆಯಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದ ಸಾರಿಗೆ ನೌಕರನ ಸೇವೆೆಗೆ ಅಡ್ಡಿಪಡಿಸಿದ ಆರೋಪದ ಮೇಲೆ ಇಬ್ಬರು ಸಾರಿಗೆ ನೌಕರರನ್ನು ಪೊಲೀಸರು ಬಂಧಿಸಿದ್ದಾರೆ.
ಜಿಲ್ಲೆಯ ಸಂಡೂರಿನ ಕೆಎಸ್ಆರ್ಟಿಸಿ ಘಟಕದ ಬಸ್ ಚಾಲಕ ದೇವೇಂದ್ರ ಮಡಿವಾಳ ಕರ್ತವ್ಯಕ್ಕೆ ಹಾಜರಾಗಿದ್ದ ವೇಳೆ ಸಾರಿಗೆ ನೌಕರರಾದ ಶಿವಕುಮಾರ ಕಲ್ಲಹಳ್ಳಿ ಹಾಗೂ ನಾಗರಾಜ ಎಂಬುವವರು ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ. ಜೊತೆಗೆ ಬಸ್ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ:ಸರ್ಕಾರಿ ನೌಕರರಿಗೂ ಸಾರಿಗೆ ನೌಕರರಿಗೂ ಸಿಗುವ ವೇತನ, ಭತ್ಯೆ, ಸೌಲಭ್ಯಗಳ ವ್ಯತ್ಯಾಸವೇನು?ಸಂಪೂರ್ಣ ವಿವರ
ಸಂಡೂರು ಕೆಎಸ್ಆರ್ಟಿಸಿ ಘಟಕದಿಂದ ಬೆಳಿಗ್ಗೆ 11 ಗಂಟೆಗೆ ಚಾಲಕ ದೇವೇಂದ್ರ ಮಡಿವಾಳ ಕರ್ತವ್ಯಕ್ಕೆ ಹಾಜರಾಗಿ, ಸಂಡೂರಿನಿಂದ ದೋಣಿಮಲೈ ಮಾರ್ಗವಾಗಿ ತೆರಳುತ್ತಿದ್ದರು. ಬಾಬಯ್ಯ ಕ್ರಾಸ್ ಹತ್ತಿರ ಶಿವಕುಮಾರ ಕಲ್ಲಹಳ್ಳಿ, ನಾಗರಾಜ ಎಂಬವರು ಮುಷ್ಕರ ಬೆಂಬಲಿಸಬೇಕೆಂದು ಕರ್ತವ್ಯದಲ್ಲಿದ್ದ ಚಾಲಕನಿಗೆ ಅಡ್ಡಿಪಡಿಸಿದ್ದಾರೆ. ಅಲ್ಲದೇ ಬಸ್ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ. ಈ ಕುರಿತು ಸಂಡೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಇಬ್ಬರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.
ಇದೇ ವೇಳೆ ಮುಷ್ಕರದ ಹೆಸರಿನಲ್ಲಿ ಯಾವುದೇ ವ್ಯಕ್ತಿಗಳು ಕಾನೂನನ್ನು ಕೈಗೆತ್ತಿಕೊಂಡು, ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಲ್ಲಿ ಅಥವಾ ಸರ್ಕಾರದ ಆಸ್ತಿಪಾಸ್ತಿಗೆ ನಷ್ಟವನ್ನುಂಟು ಮಾಡಿದಲ್ಲಿ ಅಂಥವರ ವಿರುದ್ಧ ಇಲಾಖೆ ಕಠಿಣ ಕ್ರಮ ಕೈಗೊಳ್ಳುತ್ತದೆ ಎಂದು ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಆಡಾವತ್ ಅವರು ಎಚ್ಚರಿಕೆ ನೀಡಿದ್ದಾರೆ.