ಕರ್ನಾಟಕ

karnataka

By

Published : Jan 8, 2020, 10:02 PM IST

ETV Bharat / state

ನೂತನ ಪ್ರವಾಸ ನೀತಿ ಮುಂದಿನ 20 ದಿನಗಳಲ್ಲಿ ಜಾರಿ: ಸಚಿವ ಸಿ.ಟಿ.ರವಿ

ಯಾವ್ಯಾವ ಸ್ಮಾರಕಗಳನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವಕ್ಕೆ ನೀಡಬೇಕು ಎಂಬುದಕ್ಕೆ ಸಂಬಂಧಿಸಿದಂತೆ ಗ್ಲೋಬಲ್ ಇನ್ವೆಸ್ಟರ್ ಮೀಟ್ ಮಾಡುತ್ತಿದ್ದೇವೆ. ಸ್ಮಾರಕಗಳ ನಿರ್ವಹಣೆಗೆ ದತ್ತು ಸ್ವೀಕಾರ ಯೋಜನೆ ರೂಪಿಸಲಾಗುತ್ತಿದ್ದು ಮುಂದಿನ ಕೆಲವೇ ದಿನಗಳಲ್ಲಿ ಜಾರಿಗೆ ತರಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಪ್ರವಾಸೋದ್ಯಮ ಇಲಾಖೆ ಸಚಿವ ಸಿ.ಟಿ.ರವಿ ಹೇಳಿದರು.

C.T Ravi
ಸಚಿವ ಸಿ.ಟಿ.ರವಿ

ಬಳ್ಳಾರಿ: ಯಾವ್ಯಾವ ಸ್ಮಾರಕಗಳನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವಕ್ಕೆ ನೀಡಬೇಕು ಎಂಬುದಕ್ಕೆ ಸಂಬಂಧಿಸಿದಂತೆ ಜಾಗತಿಕ ಹೂಡಿಕೆ ಸಮಾವೇಶ ಮಾಡುತ್ತಿದ್ದೇವೆ. ಸ್ಮಾರಕಗಳ ನಿರ್ವಹಣೆಗೆ ದತ್ತು ಸ್ವೀಕಾರ ಯೋಜನೆಯನ್ನೂ ರೂಪಿಸಲಾಗುತ್ತಿದ್ದು, ಮುಂದಿನ 15ರಿಂದ 20ದಿನಗಳಲ್ಲಿ ನೀತಿ ಜಾರಿಗೆ ತರಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಪ್ರವಾಸೋದ್ಯಮ ಇಲಾಖೆ ಸಚಿವ ಸಿ.ಟಿ.ರವಿ ಹೇಳಿದರು.

ಜಿಲ್ಲೆಯ ಐತಿಹಾಸಿಕ ಪ್ರಸಿದ್ಧ ಹಂಪಿಯ ಗಜಶಾಲೆ ಮಂಟಪದ ಆವರಣದಲ್ಲಿ ಆಯೋಜಿಸಲಾಗಿರುವ ವಿಜಯನಗರ ವೈಭವದ ತೋರಿಸುವ ಧ್ವನಿ ಮತ್ತು ಬೆಳಕಿನ ರೂಪಕದ ಪ್ರೀಮಿಯರ್ ಶೋ‌ ವೀಕ್ಷಣೆಗೆ ಆಗಮಿಸಿದ ಸಂದರ್ಭದಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಹಂಪಿ ಉತ್ಸವ, ಮೈಸೂರು ದಸರಾ ಸೇರಿ 5 ಉತ್ಸವಗಳು ರಾಜ್ಯಮಟ್ಟದ ಉತ್ಸವಗಳಾಗಿ ಆಚರಣೆ:

ಹಂಪಿ ಉತ್ಸವ, ಮೈಸೂರು ದಸರಾ, ಕಲ್ಯಾಣ ಕರ್ನಾಟಕ ಉತ್ಸವ, ಕಿತ್ತೂರು ಉತ್ಸವ, ಕದಂಬ ಉತ್ಸವ ಹಾಗೂ ಕರಾವಳಿ ಉತ್ಸವಗಳು ರಾಜ್ಯಮಟ್ಟದ ಉತ್ಸವಗಳನ್ನಾಗಿ ಆಚರಿಸುವಂತೆ ಸಲಹೆಗಳು ಬಂದಿದ್ದು, ಅವುಗಳನ್ನು ನ್ಯೂ ಟೂರಿಸಂ ಪಾಲಿಸಿ-2020-25ರಲ್ಲಿ ಸೇರಿಸಲಾಗುವುದು ಎಂದರು.

ಉತ್ಸವ ದಿನಾಂಕ ನಿಗದಿಗೆ ಸಂಬಂಧಿಸಿದಂತೆ ಇತಿಹಾಸ ತಜ್ಞರು, ನಿರ್ದೇಶಕರಿಗೆ ಸೂಚಿಸಿದ್ದು, ಅವರು ಅಧ್ಯಯನ ನಡೆಸಿ ದಿನಾಂಕ ನಿಗದಿಗೆ ಸಲಹೆ ನೀಡಲಿದ್ದಾರೆ. ನಂತರ ಈ ಬಗ್ಗೆ ಕ್ರಮ ವಹಿಸಲಾಗುವುದು. ನವೆಂಬರ್‌ನಲ್ಲಿ ಅತಿವೃಷ್ಟಿ ಹಾಗೂ ಇನ್ನಿತರೆ ಕಾರಣಗಳಿಂದ ಹಂಪಿ ಉತ್ಸವ ಆಚರಿಸಲು ಆಗಲಿಲ್ಲ ಎಂದು ಸ್ಪಷ್ಟನೆ ಕೊಟ್ಟರು.
ವಿಜಯನಗರ ವೈಭವ, ಸಂಸ್ಕೃತಿ, ಕಲಾ ಶ್ರೀಮಂತಿಕೆ, ತಾಂತ್ರಿಕತೆಯನ್ನು ಇಂದಿನ ಪೀಳಿಗೆಗೆ ತಿಳಿಸಿಕೊಡಬೇಕೆಂಬ ಸದುದ್ದೇಶದಿಂದ ಹಂಪಿ ಉತ್ಸವ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.

ಸಿಎಎ ಕುರಿತು ವಾಸ್ತವತೆ ತಿಳಿಸಿಕೊಡುವ ಕೆಲಸವಾಗಬೇಕಿದೆ. ಇದು ಯಾರದೋ ಪೌರತ್ವ ಕಿತ್ತುಕೊಳ್ಳುವ ಕಾಯ್ದೆಯಲ್ಲ, ಮಾನವೀಯ ನೆಲೆಗಟ್ಟಿನಲ್ಲಿ ಸಂವಿಧಾನಾತ್ಮಕವಾಗಿ ಆಶ್ರಯ ಕೋರಿ ಬಂದವರಿಗೆ ಪೌರತ್ವ ನೀಡುವ ಕಾಯ್ದೆಯಾಗಿದೆ. ಇದರಿಂದ ದೇಶದ ಮುಸ್ಲಿಂ ಬಾಂಧವರು ಭಯಪಡುವ ಅವಶ್ಯಕತೆ ಇಲ್ಲ ವಿವರಿಸಿದರು.

ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಮಾತನಾಡಿ, ಧ್ವನಿ ಮತ್ತು ಬೆಳಕು ಸಂಯೋಜಿಸಿ ರೂಪಕದ ಮುಖಾಂತರ ವಿಜಯನಗರ ವೈಭವ ತೋರಿಸುವ ಪ್ರಯತ್ನ ಮಾಡುತ್ತಿದ್ದೇವೆ. ಸುಂದರವಾದ ಬ್ಯಾಕ್‌ಡ್ರಾಪ್ ಜತೆಗೆ ಆಕರ್ಷಕ ಪ್ರದರ್ಶನ ಇದಾಗಿದೆ. ಸುಮಾರು 3-4 ಸಾವಿರ ಜನರಿಗೆ ಕಾರ್ಯಕ್ರಮ ವೀಕ್ಷಣೆಗೆ ‌ವ್ಯವಸ್ಥೆ ಕಲ್ಪಿಸಲಾಗಿದ್ದು, ಜ.10ರಿಂದ 16ರವರೆಗೆ ಸಂಜೆ 7ರಿಂದ 9:30ರವರೆಗೆ ಶೋ ನಡೆಯಲಿದೆ. ಹಾಗಾಗಿ ಕಾರ್ಯಕ್ರಮಕ್ಕೆ ಜನರು ಬರಬೇಕು ಇದೇ ವೇಳೆ ಮನವಿ ಮಾಡಿದರು.

ಡ್ಯಾನ್ಸ್ ಕೋರಿಯಾಗ್ರಾಫರ್ ಡಾ.ಶೀಲಾ ಶ್ರೀಧರ, ಶಾಸಕ‌ ಆನಂದಸಿಂಗ್, ಜಿಲ್ಲಾಮಟ್ಟದ ಅಧಿಕಾರಿಗಳು ಈ ವೇಳೆ ಇದ್ದರು.

ABOUT THE AUTHOR

...view details