ಬಳ್ಳಾರಿ:ಜಿಲ್ಲೆಯಲ್ಲಿ ಒಟ್ಟು 68 ಕೊರೊನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಅದರಲ್ಲಿ 18 ಜನ ಮಾತ್ರ ಕೋವಿಡ್ -19 ಆಸ್ಪತ್ರೆಯಲ್ಲಿದ್ದಾರೆ. 49 ಜನರು ಗುಣಮುಖರಾಗಿ ತಮ್ಮ ಮನೆಗಳಿಗೆ ತೆರಳಿದ್ದಾರೆ ಎಂದು ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಹೇಳಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಇದುವರೆಗೂ ಜಿಲ್ಲೆಯಲ್ಲಿ 11,010 ಜನರ ಗಂಟಲು ದ್ರವವನ್ನು ಪರೀಕ್ಷೆ ಮಾಡಲಾಗಿದೆ. 15 ಕಂಟೈನ್ಮೆಂಟ್ ಝೋನ್ಗಳಿವೆ. ಈ ಸ್ಥಳಗಳಲ್ಲಿ ಆಶಾ ಕಾರ್ಯಕರ್ತೆಯರು, ವೈದ್ಯಕೀಯ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದು, ಕೆಲಸ ಮಾಡುವ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಸಾಮಾಜಿಕ ಅಂತರ, ಮಾಸ್ಕ್ ಕಡ್ಡಾಯ ಮಾಡಲಾಗಿದೆ.
ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಜಿಂದಾಲ್ನಲ್ಲಿ ಇದುವರೆಗೂ 11 ಕೊರೊನಾ ಪಾಸಿಟಿವ್ ಕೇಸ್ ಬಂದಿವೆ. ಮೊದಲ ಸೋಂಕಿತನ ಪ್ರಾಥಮಿಕ ಸಂಪರ್ಕದಲ್ಲಿದ್ದ 10 ಜನರಿಗೂ ಸೋಂಕು ತಗುಲಿದೆ. ಓರೆಕ್ಸ್ ಯುನಿಟ್ನಲ್ಲಿ ಮೂರು ಪಾಳಿಯಲ್ಲಿ ಕೆಲಸ ಮಾಡುವ 297 ಸಿಬ್ಬಂದಿ ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿದೆ ಎಂದರು.
ಎರಡು ದಿನಗಳ ಹಿಂದೆ ಜಿಂದಾಲ್ನ 60 ಯುನಿಟ್ನ ಅಧಿಕಾರಿಗಳೊಂದಿಗೆ ಸಭೆ ಮಾಡಿದ್ದೇವೆ. ಜಿಂದಾಲ್ ಸಂಸ್ಥೆಯಲ್ಲಿ ಕೆಲಸ ಮಾಡುವ ಅಧಿಕಾರಿಗಳು ಮತ್ತು ಸಿಬ್ಬಂದಿ ಆರೋಗ್ಯ ಸಮಸ್ಯೆಯಿಂದ ರಜೆ ತೆಗೆದುಕೊಂಡರೆ ಅವರು ಸಹ ಸ್ವಾಬ್ ಪರೀಕ್ಷೆ ಮಾಡಿಸಬೇಕು. ಸಂಸ್ಥೆಯಲ್ಲಿ ಮಾಸ್ಕ್, ಸ್ಯಾನಿಟೈಸರ್, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಮತ್ತು ಥರ್ಮಲ್ ಸ್ಕ್ರಿನಿಂಗ್ ಸಹ ಮಾಡಲಾಗುತ್ತಿದೆ ಎಂದರು.