ಕರ್ನಾಟಕ

karnataka

By

Published : Jun 3, 2020, 7:18 PM IST

ETV Bharat / state

ಬಳ್ಳಾರಿ: ಕೊರೊನಾ ಗೆದ್ದು ಬಂದ ಐದು ಮಂದಿಗೆ ಆಸ್ಪತ್ರೆಯಿಂದ ಬೀಳ್ಕೊಡುಗೆ

ಮಹಾಮಾರಿ ಕೊರೊನಾ ಸೋಂಕಿನಿಂದ ಐದು ಮಂದಿ ಗುಣಮುಖರಾಗಿದ್ದು, ಇಂದು ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸದ್ಯ 19 ಮಂದಿ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ನಿನ್ನೆ ರಾತ್ರಿ ಒಬ್ಬರಲ್ಲಿ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 52ಕ್ಕೇರಿದೆ.

5 people discharge from hospital
5 people discharge from hospital

ಬಳ್ಳಾರಿ: ಮಹಾಮಾರಿ ಕೊರೊನಾದಿಂದ 5 ಮಂದಿ ಗುಣಮುಖರಾದ ಹಿನ್ನೆಲೆ ಇಂದು ಮಧ್ಯಾಹ್ನ ಬಿಡುಗಡೆ ಮಾಡಲಾಯಿತು.

ಜಿಲ್ಲಾಸ್ಪತ್ರೆಯಲ್ಲಿ 19 ಮಂದಿ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ನಿನ್ನೆ ರಾತ್ರಿ ಒಬ್ಬರಲ್ಲಿ ಸೋಂಕು ದೃಢಪಟ್ಟಿದ್ದು, ಸದ್ಯ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 52ಕ್ಕೇರಿದೆ. ಈವರೆಗೆ ಒಬ್ಬರು ಸಾವನ್ನಪ್ಪಿದ್ದು, 32 ಮಂದಿ ಬಿಡುಗಡೆಯಾಗಿದ್ದಾರೆ.

ಗುಣಮುಖರಾದವರ ವಿವರ: 14 ವರ್ಷದ ಪಿ-1542 ಬಾಲಕ ಮೂಲತಃ ಚಾಗನೂರಿನವರು, 33 ವರ್ಷದ ಪಿ-1544 (ಪುರುಷ) ಮೂಲತಃ ನಾಗೇನಹಳ್ಳಿಯವರು. 18 ವರ್ಷ ಪಿ-1549 (ಯುವತಿ) ಮೂಲತಃ ಚಾಗನೂರಿನವರು. 31 ವರ್ಷದ ಪಿ-1546 ಮಹಿಳೆಯು ಮೂಲತಃ ರೂಪನಗುಡಿಯವರಾಗಿದ್ದು, ಇವರೆಲ್ಲರೂ ಮುಂಬೈನಿಂದ ಬಂದಿರುವ ಟ್ರಾವೆಲ್ ಹಿಸ್ಟರಿ ಹೊಂದಿದ್ದಾರೆ. 23 ವರ್ಷದ ಪಿ-2155 (ಯುವಕ) ಹಗರಿಬೊಮ್ಮನಹಳ್ಳಿ ತಾಲೂಕಿನವರಾಗಿದ್ದು, ಇವರಿಗೆ ದೆಹಲಿಯಿಂದ ಜಿಲ್ಲೆಗೆ ಬಂದಿರುವ ಟ್ರಾವೆಲ್ ಹಿಸ್ಟರಿ ಇದೆ.

ಇಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಎನ್. ಬಸರೆಡ್ಡಿ ಅವರು ಗುಣಮುಖರಾಗಿ ಮನೆಯತ್ತ ತೆರಳಲು ಸಿದ್ಧರಾಗಿ ನಿಂತಿದ್ದವರಿಗೆ ಹೂಗುಚ್ಛ, ಹಣ್ಣು-ಹಂಪಲು ನೀಡಿ ಚಪ್ಪಾಳೆ ತಟ್ಟಿ ಅಭಿನಂದಿಸಿದರು. ಕಂದಾಯ ಇಲಾಖೆ ವತಿಯಿಂದ ನೀಡಲಾಗುವ ಪಡಿತರ ಕಿಟ್ ನೀಡಲಾಯಿತು.

ಈ ವೇಳೆ ಜಿಲ್ಲಾ ಶಸ್ತ್ರಚಿಕಿತ್ಸಕ ಎನ್.ಬಸರೆಡ್ಡಿ ಮಾತನಾಡಿ, ಸೋಂಕಿತರು ಇಲ್ಲಿಗೆ ಬಂದಾಗ ಸಾಕಷ್ಟು ಭಯಭೀತರಾಗಿದ್ದರು. ಇವರಿಗೆ ಆಪ್ತ ಸಮಾಲೋಚನೆ ಮಾಡಿ ಅವರಲ್ಲಿದ್ದ ಭಯವನ್ನು ಹೋಗಲಾಡಿಸಿದೆವು. ಆತ್ಮ ಸ್ಥೈರ್ಯವನ್ನು ತುಂಬಿ ಅವರನ್ನು ಗುಣಮುಖರಾಗಲು ಬಹಳ ಶ್ರಮ ವಹಿಸಿದೆವು. ಈ 5 ಮಂದಿ ಒಂದೇ ಬಾರಿಗೆ ಗುಣಮುಖರಾಗಿರುವುದು ನಮಗೆ ತುಂಬಾ ಸಂತೋಷವಾಗಿದ್ದು, ಇನ್ನು ಉಳಿದವರನ್ನು ಆದಷ್ಟು ಬೇಗ ಗುಣಮುಖರನ್ನಾಗಿ ಮಾಡಲು ಪ್ರಯತ್ನಿಸುತ್ತೇವೆ ಎಂದು ತಿಳಿಸಿದರು.

ಗುಣಮುಖರಾಗಿ ಹೊರ ಬಂದವರಲ್ಲಿ ಕೆಲವರು ಮಾತನಾಡಿ, ಆಸ್ಪತ್ರೆಗೆ ದಾಖಲಾಗಿ ಬಂದಾಗಿನಿಂದ ಇಲ್ಲಿಯವರೆಗೆ ಆಸ್ಪತ್ರೆ ಸಿಬ್ಬಂದಿ ನಮ್ಮನ್ನು ಚೆನ್ನಾಗಿ ನೋಡಿಕೊಂಡರು. ಸಮರ್ಪಕ ಚಿಕಿತ್ಸೆ ಕೊಡುವ ಜೊತೆಗೆ ಸ್ಥೈರ್ಯ ಕಳೆದುಕೊಂಡಿದ್ದ ನಮ್ಮನ್ನು ಮಾನಸಿಕವಾಗಿಯೂ ಸಜ್ಜುಗೊಳಿಸಿದರು. ಉತ್ತಮ ಗುಣಮಟ್ಟದ ಆಹಾರ ಒದಗಿಸಿದರು. ವೈದ್ಯರು ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿಯ ಋಣವನ್ನು ನಾವೆಂದು ಮರೆಯಲ್ಲ ಎಂದು ಕೃತಜಜ್ಞತೆ ಸಲ್ಲಿಸಿದರು.

ಈ ವೇಳೆ ಕೋವಿಡ್ ನೋಡಲ್ ಅಧಿಕಾರಿ ಡಾ. ಯೋಗಾನಂದರೆಡ್ಡಿ, ಹಿರಿಯ ತಜ್ಞರಾದ ಡಾ.ಪ್ರಕಾಶ್ ಭಾಗವತಿ, ಡಾ.ಶಂಕರ ನಾಯಕ್, ಡಾ.ನಿಖಿಲ್, ಶುಶ್ರೂಷ ಅಧೀಕ್ಷಕಿ ಶಾಂತಾಬಾಯಿ, ಡಾ.ಕೊಟ್ರೇಶ್, ಡಾ. ಚಿತ್ರಶೇಖರ, ಲ್ಯಾಬ್ ಟೆಕ್ನಿಷಿಯನ್ಸ್, ಎಕ್ಸ್-ರೇ, ಡಿ-ಗ್ರೂಪ್ ಸಿಬ್ಬಂದಿ ಸೇರಿದಂತೆ ಆಸ್ಪತ್ರೆಯ ಇತರೆ ಸಿಬ್ಬಂದಿ ಇದ್ದರು.

ABOUT THE AUTHOR

...view details