ಬಳ್ಳಾರಿ :ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ 973 ಕೊರೊನಾ ಸೋಂಕಿತರು ಪತ್ತೆಯಾಗಿದ್ದು, 26 ಜನ ಮೃತಪಟ್ಟಿದ್ದಾರೆ.
63,388 ಕ್ಕೆ ಸೋಂಕಿತರ ಸಂಖ್ಯೆ ಏರಿಕೆಯಾಗಿದ್ದರೇ, ಮೃತರ ಸಂಖ್ಯೆ 934ಕ್ಕೆ ಏರಿದೆ. 459 ಜನರು ಡಿಸ್ಟಾರ್ಜ್ ಸೇರಿ ಒಟ್ಟು 47,607 ಕೊರೊನಾದಿಂದ ಗುಣಮುಖರಾಗಿದ್ದಾರೆ. ಇನ್ನು, 14,847 ಸಕ್ರಿಯ ಪ್ರಕರಣಗಳಿವೆ.
ಸಚಿವರ ಮನವಿ:ಗಣಿನಾಡು ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಇಂದಿನಿಂದ ಕಠಿಣ ಲಾಕ್ ಡೌನ್ ಜಾರಿಯಾಗಲಿದ್ದು, ಬೆಳಿಗ್ಗೆ 10 ಗಂಟೆಯ ನಂತರ ಓಡಾಟ ನಡೆಸಂಗಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ ತಿಳಿಸಿದ್ದಾರೆ.
ಬಳ್ಳಾರಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಿನ್ನೆ ಸಂಜೆ ಮಾತನಾಡಿದ ಸಚಿವ ಆನಂದಸಿಂಗ್, ದಿನದಿಂದ ದಿನಕ್ಕೆ ಈ ಕೊರೊನಾ ಎರಡನೇ ಅಲೆ ಉಭಯ ಜಿಲ್ಲೆಗಳಲ್ಲಿ ಹೆಚ್ಚಾಗುತ್ತಿರುವ ಹಿನ್ನೆಲೆ ಕಠಿಣ ಲಾಕ್ಡೌನ್ ಮಾಡುವ ಅನಿವಾರ್ಯತೆ ಸದ್ಯದಮಟ್ಟಿಗೆ ಇದೆ. ಇದರಿಂದ ಕೆಲವರಿಗೆ ತೊಂದರೆಯಾಗಬಹುದು. ಆದರೂ ಅನಿವಾರ್ಯ ಆಗಿಬಿಟ್ಟಿದೆ ಎಂದು ಸಚಿವ ಆನಂದಸಿಂಗ್ ಹೇಳಿದರು.
ಪ್ರತಿದಿನ ಬೆಳಗ್ಗೆ 6 ರಿಂದ 10 ಗಂಟೆಯವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿದೆ. 10 ಗಂಟೆ ಬಳಿಕ ಸಾರ್ವಜನಿಕ ಸಂಚಾರವನ್ನ ಸಂಪೂರ್ಣ ನಿಷೇಧಿಸಲಾಗಿದೆ. ಕೇವಲ ಮೆಡಿಕಲ್ ಎಮರ್ಜೆನ್ಸಿ ಹೊರತು ಪಡಿಸಿ ಎಲ್ಲವನ್ನ ಬಂದ್ ಮಾಡಲು ನಿರ್ಧರಿಸಲಾಗಿದೆ.
ಉಭಯ ಜಿಲ್ಲೆಗಳಲ್ಲಿ ಮದುವೆ ಕಾರ್ಯಕ್ರಮಗಳನ್ನ ಸಂಪೂರ್ಣವಾಗಿ ಬ್ಯಾನ್ ಮಾಡಲಾಗಿದೆ. ಅಂತಾ ರಾಜ್ಯಗಳಿಂದ ಬರುವ ಗೂಡ್ಸ್ ವಾಹನಗಳಿಗೆ ಮಾತ್ರ ಅನುಮತಿ ನೀಡಲಾಗಿದೆ ಎಂದು ತಿಳಿಸಿದರು.
ಇಡೀ ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆಯ ಹೆಚ್ಚಳದಲ್ಲಿ ಬಳ್ಳಾರಿ ಮೂರನೇ ಸ್ಥಾನದಲ್ಲಿದೆ. ಸಾವಿನ ಸಂಖ್ಯೆಯಲ್ಲೂ ಎರಡನೇ ಸ್ಥಾನದಲ್ಲಿದೆ. ಹೀಗಾಗಿ, ಕೆಲ ಕಠಿಣ ನಿರ್ಧಾರ ಅನಿವಾರ್ಯತೆ ಆಗಿದೆ. ಇಡೀ ರಾಜ್ಯಕ್ಕೆ ಇರುವ ನಿಯಮಗಳೇ ಬೇರೆ. ಈ ಜಿಲ್ಲೆಗೆ ವಿಧಿಸಿರುವ ನಿಯಮಗಳೇ ಬೇರೆ ಎಂದು ಸಚಿವ ಆನಂದ ಸಿಂಗ್ ಹೇಳಿದರು.