ಬೆಳಗಾವಿ: ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದಿರುವ ಕೃಷಿ, ಎಪಿಎಂಸಿ ಸೇರಿದಂತೆ ಇನ್ನಿತರ ಕಾಯ್ದೆಗಳನ್ನು ವಿರೋಧಿಸಿ ನಾಳೆ (ಜ.26) ಟ್ರ್ಯಾಕ್ಟರ್ ರ್ಯಾಲಿ ನಡೆಸಲಾಗುತ್ತಿದೆ ಎಂದು ಕೇಂದ್ರದ ಮಾಜಿ ಸಚಿವ ಬಾಬಾಗೌಡ ಪಾಟೀಲ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಜನರಲ್ಲಿ ಒಂದು ಆಶಾಭಾವನೆ ಇತ್ತು. ಹಳ್ಳಿಗಳು ಪಟ್ಟಣಗಳ ಹಾಗೆ ಸುಧಾರಣೆಯಾಗುವುದರ ಜತೆಗೆ ದೇಶ ರಾಮರಾಜ್ಯ ಆಗುತ್ತದೆ ಎಂಬ ನಮ್ಮ ಭ್ರಮೆ ಸುಳ್ಳಾಗಿದೆ. ಬಿಜೆಪಿ ಸರ್ಕಾರ ರೈತರನ್ನು ದಾಸರನ್ನಾಗಿ ಮಾಡಲು ಹೊರಟಿದೆ. ಸೂರ್ಯ ಚಂದ್ರ ಇರುವವರೆಗೂ ಸಾಲದ ಬಡ್ಡಿಗಾಗಿ ದುಡಿಸಿಕೊಳ್ಳಬೇಕು ಎಂಬ ಒಳಗುಟ್ಟು ಕೇಂದ್ರ ಸರ್ಕಾರಕ್ಕಿದೆ. ಆ ಕಾರಣಕ್ಕೆ ಇವರು ತಂದಿರುವ ಕಾನೂನುಗಳು ಇಡೀ ದೇಶದ ವ್ಯಾಪಾರ-ವಹಿವಾಟನ್ನು ಖಾಸಗಿ ಒಡೆತನಕ್ಕೆ ಕೊಟ್ಟು ನಮ್ಮನ್ನು ದಾಸರನ್ನಾಗಿ ಮಾಡುವ ಹುನ್ನಾರವಿದೆ ಎಂದು ಆರೋಪಿಸಿದರು.