ಅಥಣಿ/ಬೆಳಗಾವಿ:ಕೃಷ್ಣಾ ನದಿ ಪ್ರವಾಹಕ್ಕೆ ಸಿಲುಕಿದ್ದ ಅಥಣಿ ತಾಲೂಕಿನ ಹಲ್ಯಾಳ ಗ್ರಾಮದ ಸಂತ್ರಸ್ತರಿಗೆ ನೀಡಲಾಗಿದ್ದ ಆಹಾರ ಪದಾರ್ಥಗಳು ಗೋದಾಮಿನಲ್ಲೇ ಇದ್ದು, ಅವು ಇಲಿ ಹೆಗ್ಗಣಗಳ ಪಾಲಾಗಿವೆ.
ನೆರೆ ಸಂತ್ರಸ್ತರಿಗೆ ತಲುಪಬೇಕಿದ್ದ ಆಹಾರ ಸಾಮಗ್ರಿ ಇಲಿ-ಹೆಗ್ಗಣಗಳ ಪಾಲು
ಅಥಣಿ ತಾಲೂಕಿನ ಹಲ್ಯಾಳ ಗ್ರಾಮದ ನೆರೆ ಸಂತ್ರಸ್ತರಿಗೆ ನೀಡಲಾಗಿದ್ದ ಆಹಾರ ಪದಾರ್ಥಗಳು ಸಂತ್ರಸ್ತರನ್ನು ತಲುಪದೇ ಗೋದಾಮಿನಲ್ಲಿ ಕೊಳೆಯುತ್ತಿವೆ.
ಸಂತ್ರಸ್ತರಿಗೆ ತಾಲೂಕು ಆಡಳಿತ ಆಹಾರ ಪದಾರ್ಥಗಳನ್ನು ಬೆರಳೆಣಿಕೆಯಷ್ಟು ಜನರಿಗೆ ನೀಡಿದ್ದು, ಆಹಾರ ಚೀಲಗಳನ್ನು ಗೋದಾಮಿನಲ್ಲಿ ತುಂಬಿದೆ. ಹೀಗಾಗಿ ಇಲಿ, ಹೆಗ್ಗಣ ಮತ್ತು ಕ್ರಿಮಿಕೀಟಗಳು ಆಹಾರ ಪದಾರ್ಥಗಳಲ್ಲಿ ಬೆರೆತು ಆಹಾರ ಸಾಮಗ್ರಿಗಳು ಸದ್ಯ ಹಾಳಾಗುತ್ತಿವೆ. ಹಲ್ಯಾಳ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಬ್ಯಾಂಕ್ಗೆ ಸಂಬಂಧಿಸಿದ ಗೋದಾಮಿನಲ್ಲಿ ಸುಮಾರು 2000 ಆಹಾರ ಸಾಮಗ್ರಿಗಳ ಕಿಟ್ ವಿತರಣೆಯಾಗದೆ ಕೊಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಗ್ರಾಮ ಪಂಚಾಯತ್ ಅಧಿಕಾರಿಗಳನ್ನು ಕೇಳಿದ್ರೆ ನಮಗೂ ಇದಕ್ಕೆ ಸಂಬಂಧ ಇಲ್ಲ ಎಂದು ಉಡಾಫೆ ಉತ್ತರ ನೀಡುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.
ಸದ್ಯ ಸಂಬಂಧಪಟ್ಟ ಅಧಿಕಾರಿಗಳು ಅಥಣಿ ತಾಲೂಕಿನ ನೆರೆ ಸಂತ್ರಸ್ತರ ಗ್ರಾಮಗಳಿಗೆ ಭೇಟಿ ನೀಡಿ ತುರ್ತಾಗಿ ಈ ಆಹಾರ ಪದಾರ್ಥಗಳನ್ನು ವಿತರಿಸದೇ ಹೋದಲ್ಲಿ, ಇವು ಕೊಳೆಯುವುದು ಖಚಿತ. ಮತ್ತು ಇದರಿಂದ ಸರ್ಕಾರದ ಬೊಕ್ಕಸಕ್ಕೂ ನಷ್ಟವಾಗಲಿದೆ.