ಕರ್ನಾಟಕ

karnataka

By

Published : Oct 28, 2021, 10:32 PM IST

ETV Bharat / state

ಟಿಕೆಟ್ ಇಲ್ಲದೇ ಪರದಾಡುತ್ತಿದ್ದ 1300 ಭಕ್ತರು: ತಿರುಪತಿ ತಿಮ್ಮಪ್ಪನ ದರ್ಶನ ವ್ಯವಸ್ಥೆ ಮಾಡಿದ ಎಸ್.ಆರ್.ವಿಶ್ವನಾಥ್

ಎಸ್.ಆರ್.ವಿಶ್ವನಾಥ್​ ಅವರು ತಿರುಪತಿಯಲ್ಲಿ ಟಿಕೆಟ್ ಇಲ್ಲದೇ ಪರದಾಡುತ್ತಿದ್ದ ಸುಮಾರು 1300 ತುಮಕೂರಿನ ಭಕ್ತರಿಗೆ ಟಿಕೆಟ್​ ವ್ಯವಸ್ಥೆ ಕಲ್ಪಿಸಿ ಸಹಾಯ ಮಾಡಿದ್ದಾರೆ.

SR Vishwanath helped 1300 tirupati thimmappa devotees
ತಿರುಪತಿ ತಿಮ್ಮಪ್ಪನ ಭಕ್ತರಿಗೆ ಸಹಾಯ ಮಾಡಿದ ವಿಶ್ವನಾಥ್

ಬೆಂಗಳೂರು: ತಿರುಪತಿಯಲ್ಲಿ ತಿಮ್ಮಪ್ಪನ ದರ್ಶನಕ್ಕೆ ಟಿಕೆಟ್ ಇಲ್ಲದೇ ಪರದಾಡುತ್ತಿದ್ದ ರಾಜ್ಯದ 1300 ಕ್ಕೂ ಹೆಚ್ಚು ಭಕ್ತರಿಗೆ ತಿರುಪತಿ ದೇವಸ್ಥಾನಂ ಟ್ರಸ್ಟ್​ ಸದಸ್ಯ, ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಸಕಾಲದಲ್ಲಿ ಟಿಕೆಟ್ ವ್ಯವಸ್ಥೆ ಕಲ್ಪಿಸಿ ದೇವರ ದರ್ಶನ ಮಾಡಿಸಿ ಸಹಾಯ ಮಾಡಿದ್ದಾರೆ.

ತುಮಕೂರು ಜಿಲ್ಲೆಯ ಕುಣಿಗಲ್ಲಿನ 1300 ಕ್ಕೂ ಹೆಚ್ಚು ಭಕ್ತರು ಪ್ರತಿವರ್ಷದಂತೆ ಈ ವರ್ಷವೂ ತಿರುಮಲಕ್ಕೆ ಕಳೆದ ವಾರ ಪಾದಯಾತ್ರೆ ಮೂಲಕ ಮಂಗಳವಾರ ರಾತ್ರಿ ತಿರುಪತಿಯನ್ನು ತಲುಪಿದ್ದರು. ಆದರೆ, ಮುಂಗಡವಾಗಿ ಟಿಕೆಟ್ ಪಡೆಯದಿದ್ದರಿಂದ ಅಲ್ಲಿಂದ ತಿರುಮಲ ಬೆಟ್ಟಕ್ಕೆ ಹತ್ತಲು ಅವರಿಗೆ ಭದ್ರತಾ ಸಿಬ್ಬಂದಿ ಅನುಮತಿ ನಿರಾಕರಿಸಿದ್ದರು.

ಆ ವೇಳೆ, ಪಾದಯಾತ್ರೆ ನೇತೃತ್ವ ವಹಿಸಿದ್ದ ಮುಖಂಡರು ಎಸ್.ಆರ್.ವಿಶ್ವನಾಥ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ತಮ್ಮ ಆತಂಕವನ್ನು ತೋಡಿಕೊಂಡಿದ್ದರು. ಕೂಡಲೇ ವಿಶ್ವನಾಥ್ ಟಿಟಿಡಿ ಮುಖ್ಯಸ್ಥರು, ಅಧಿಕಾರಿಗಳು ಹಾಗೂ ತಿರುಮಲದಲ್ಲಿರುವ ತಮ್ಮ ಆಪ್ತ ಸಹಾಯಕರಿಗೆ ಕರೆ ಮಾಡಿ ಪಾದಯಾತ್ರೆ ಮೂಲಕ ಬಂದಿರುವ ಭಕ್ತಾಧಿಗಳಿಗೆ ಯಾವುದೇ ತೊಂದರೆ ಆಗದಂತೆ ವ್ಯವಸ್ಥೆ ಕೈಗೊಳ್ಳಬೇಕು ಎಂದು ಸೂಚನೆ ನೀಡಿದ್ದರು.

ಬಳಿಕ ಅಲ್ಲಿದ್ದ ಸುಮಾರು1300 ಭಕ್ತರಿಗೂ ತಿರುಮಲ ಬೆಟ್ಟಕ್ಕೆ ಮತ್ತು ದರ್ಶನಕ್ಕೆ ಅವಕಾಶ ಕಲ್ಪಿಸುವ ಟಿಕೆಟ್ ವ್ಯವಸ್ಥೆ ಮಾಡುವಂತೆ ಟಿಟಿಡಿ ನಿರ್ದೇಶನ ನೀಡಿದೆ. ವಿಶ್ವನಾಥ್ ಸೂಚನೆಯಿಂದಾಗಿ ತಿರುಮಲ ದೇವಸ್ಥಾನಂ ಅಧಿಕಾರಿಗಳು ಮಂಗಳವಾರ ರಾತ್ರಿಯೇ 800 ಭಕ್ತರಿಗೆ ಟಿಕೆಟ್ ವ್ಯವಸ್ಥೆ ಕಲ್ಪಿಸಿದರೆ, ಉಳಿದ 500 ಭಕ್ತರಿಗೆ ಬುಧವಾರ ಬೆಳಗ್ಗೆ ಟಿಕೆಟ್ ಕಲ್ಪಿಸಿದರು ಎಂದು ಭಕ್ತರು ತಿಳಿಸಿದ್ದಾರೆ.

ಭಕ್ತರಿಂದ ಧನ್ಯವಾದ:

ತಾವು ಸಂಕಷ್ಟಕ್ಕೆ ಸಿಲುಕಿದ್ದ ಮಾಹಿತಿ ತಿಳಿದು ಕೂಡಲೇ ತಮಗೆ ದೇವರ ದರ್ಶನಕ್ಕೆ ವ್ಯವಸ್ಥೆ ಮಾಡಿದ ಎಸ್.ಆರ್.ವಿಶ್ವನಾಥ್ ಅವರಿಗೆ ಭಕ್ತರು ಧನ್ಯವಾದಗಳನ್ನು ಅರ್ಪಿಸಿದ್ದಾರೆ.

ವಿಶ್ವನಾಥ್ ಸಲಹೆ:

ಈ ಬಗ್ಗೆ ಪ್ರತಿಕ್ರಿಯಿಸಿರುವ ವಿಶ್ವನಾಥ್, ಕೊರೊನಾ ಹಿನ್ನೆಲೆಯಲ್ಲಿ ಸೀಮಿತ ಸಂಖ್ಯೆಯ ಭಕ್ತರಿಗೆ ಟಿಕೆಟ್ ವಿತರಿಸಲಾಗುತ್ತದೆ. ಮುಂಗಡವಾಗಿ ಟಿಕೆಟ್ ಮತ್ತು ವಾಸ್ತವ್ಯದ ವ್ಯವಸ್ಥೆ ಮಾಡಿಕೊಂಡ ನಂತರವಷ್ಟೇ ತಿರುಮಲಕ್ಕೆ ತೆರಳಬೇಕು. ಹೀಗೆ ಮೊದಲೇ ಎಲ್ಲ ವ್ಯವಸ್ಥೆಗಳನ್ನು ಮಾಡಿಕೊಂಡರೆ ಭಕ್ತರಿಗೆ ಯಾವುದೇ ರೀತಿಯ ತೊಂದರೆ ಉಂಟಾಗುವುದಿಲ್ಲ ಎಂದು ಸಲಹೆ ನೀಡಿದ್ದಾರೆ.

ಇದನ್ನು ಓದಿ: ಕೋವಿಡ್ ವೈರಸ್ ಹೊಸ ತಳಿ AY 4.0 ಆತಂಕ ಸದ್ಯಕ್ಕಿಲ್ಲ: ಹಾಗಂತ ಮೈ ಮರೆಯುವಂತಿಲ್ಲ..!

ABOUT THE AUTHOR

...view details