ಕರ್ನಾಟಕ

karnataka

ETV Bharat / state

ಧರಂಸಿಂಗ್ ಸಂಬಂಧಿ ಸಿದ್ಧಾರ್ಥ್ ಹತ್ಯೆ ಪ್ರಕರಣ: ಹಂತಕನಿಗೆ ಸುಪಾರಿ ಕೊಟ್ಟಿದ್ದೇ ಮಲತಾಯಿ..!

ಮಾಜಿ ಸಿಎಂ ದಿವಂಗತ ಧರಂಸಿಂಗ್ ಸಂಬಂಧಿ ಸಿದ್ದಾರ್ಥ್​ ಕೊಲೆಗೆ ಆತನ ಮಲತಾಯಿಯೇ ಸುಫಾರಿ ನೀಡಿದ್ದಳು ಎಂಬ ಸ್ಫೋಟಕ ಮಾಹಿತಿಯೊಂದು ಪೊಲೀಸ್ ತನಿಖೆಯಿಂದ ಹೊರಬಿದ್ದಿದೆ.

By

Published : Feb 12, 2021, 12:01 PM IST

siddarth murder case
ದಿ.ಧರಂಸಿಂಗ್ ಸಂಬಂಧಿ ಸಿದ್ಧಾರ್ಥ್ ಹತ್ಯೆ ಪ್ರಕರಣ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಧರಂಸಿಂಗ್ ಸಂಬಂಧಿ ಸಿದ್ಧಾರ್ಥ್ ಹತ್ಯೆ ಪ್ರಕರಣ ಸಂಬಂಧ ಅರೆಸ್ಟ್​ ಆಗಿರುವ ಮಲತಾಯಿ ಇಂದು ಚೌಹಾಣ್ , ಮತ್ತು ಆತ್ಮಹತ್ಯೆಗೆ ಶರಣಾದ ಹಂತಕ ಶ್ಯಾಮ್ ಸುಂದರ್ ರೆಡ್ಡಿಯ ಫೇಸ್‌ಬುಕ್ ಪರಿಚಯ ಅಕ್ರಮ ಸಂಬಂಧಕ್ಕೆ ತಿರುಗಿ ಕೃತ್ಯ ಎಸಗಿರುವ ಸಂಗತಿ ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ.

ಗುರ್ಗಾಂವ್ ಮೂಲದ ಇಂದು ಚೌಹಾಣ್ ಪ್ರಕರಣದ ಸೂತ್ರಧಾರಿ ಎಂಬುದನ್ನು ಅಮೃತಹಳ್ಳಿ ಪೊಲೀಸರು ಪತ್ತೆಹಚ್ಚಿದ್ದಾರೆ. ಸಿದ್ಧಾರ್ಥ್ ತಂದೆ ಉದ್ಯಮಿ ದೇವೇಂದರ್ ಸಿಂಗ್‌ಗೆ ಇಬ್ಬರು ಪತ್ನಿಯರಿದ್ದು, ಸಿದ್ಧಾರ್ಥ್ ಮೊದಲ ಪತ್ನಿಯ ಪುತ್ರನಾಗಿದ್ದಾನೆ. ಇಂದು ಚೌಹಾಣ್​​ ಎರಡನೇ ಪತ್ನಿಯಾಗಿದ್ದಾಳೆ. ಇಬ್ಬರು ಮಕ್ಕಳೊಂದಿಗೆ ಇಂದು ಹೆಬ್ಬಾಳದ ಅಪಾರ್ಟ್‌ಮೆಂಟ್‌ನ ಫ್ಲಾಟ್‌ವೊಂದರಲ್ಲಿ ವಾಸಿಸುತ್ತಿದ್ದಳು. ಕಳೆದ 4 ವರ್ಷಗಳ ಹಿಂದೆ ಫೇಸ್‌ಬುಕ್‌ನಲ್ಲಿ ಇಂದುಗೆ ಶ್ಯಾಮ್‌ಸುಂದರ್ ರೆಡ್ಡಿಯ ಪರಿಚಯವಾಗಿತ್ತು. ನಂತರ ಶ್ಯಾಮ್ ಮೆಸೆಂಜರ್‌ನಲ್ಲಿ ಇಂದೂ ಜತೆ ನಿರಂತರವಾಗಿ ಚಾಟ್ ಮಾಡಲು ಆರಂಭಿಸಿದ್ದ. ಇತ್ತ ಇಂದು ಸಹ ಶ್ಯಾಮ್ ಜತೆ ಸಲುಗೆ ಬೆಳೆಸಿಕೊಂಡಿದ್ದಳು. ಇಬ್ಬರ ನಡುವಿನ ಫೇಸ್‌ಬುಕ್ ಪರಿಚಯ ಕ್ರಮೇಣ ಅಕ್ರಮ ಸಂಬಂಧಕ್ಕೆ ತಿರುಗಿತ್ತು. ಶ್ಯಾಮ್ ಆಗಾಗ ಬೆಂಗಳೂರಿಗೆ ಬಂದು ಇಂದುವನ್ನು ಭೇಟಿಯಾಗಿ ಹೋಗುತ್ತಿದ್ದ ಎನ್ನಲಾಗಿದೆ.

ಆಸ್ತಿಯ ವಿಚಾರವಾಗಿ ಪತಿ ದೇವೇಂದರ್ ಹಾಗೂ ಇಂದು ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಈ ಹಿಂದೆ ಸಿದ್ಧಾರ್ಥ್ ಬಳಿಯೂ ಆಸ್ತಿ ವಿಚಾರವಾಗಿ ಇಂದು ಜಗಳ ಮಾಡಿದ್ದಳು. ಹೇಗಾದರೂ ಮಾಡಿ ದೇವೇಂದರ್ ಆಸ್ತಿ ಪಡೆಯಲೇಬೇಕು ಎಂದು ಹೊಂಚು ಹಾಕುತ್ತಿದ್ದ ಇಂದುಗೆ ಸಿದ್ಧಾರ್ಥ್ ಅಡ್ಡಿಯಾಗಿದ್ದ. ಈತನನ್ನು ಮುಗಿಸಿದರೆ ದೇವೇಂದರ್ ಆಸ್ತಿಯೆಲ್ಲಾ ತನಗೆ ಸೇರುತ್ತದೆ ಎಂದುಕೊಂಡಿದ್ದಳು. ಈ ವಿಚಾರವನ್ನು ಶ್ಯಾಮ್ ಜತೆಗೂ ಚರ್ಚಿಸಿದ್ದಳು. ಶ್ಯಾಮ್‌ನನ್ನು ತನ್ನ ಮೋಹದ ಪಾಶಕ್ಕೆ ಸಿಲುಕಿಸಿ ಹೇಗಾದರೂ ಸಿದ್ಧಾರ್ಥ್‌ನ್ನು ಹತ್ಯೆ ಮಾಡುವಂತೆ ಸೂಚಿಸಿದ್ದಳು.

ಇಂದು ಮಾತು ಕೇಳಿ ಬೆಚ್ಚಿಬಿದ್ದ ಶ್ಯಾಮ್ ಆರಂಭದಲ್ಲಿ ಇದಕ್ಕೆ ಒಪ್ಪಿರಲಿಲ್ಲ. ನಂತರ ಇಂದೂ 4 ಲಕ್ಷ ರೂ. ಸುಪಾರಿ ಕೊಟ್ಟಿದ್ದಳು. ಬಿ.ಟೆಕ್ ಪದವೀಧರನಾಗಿ ಶ್ಯಾಮ್ ಸೂಕ್ತ ಉದ್ಯೋಗವಿಲ್ಲದೇ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದ. 4 ಲಕ್ಷ ರೂ. ಕೈ ಸೇರುತ್ತಿದ್ದಂತೆ ಹಣದ ಆಮಿಷ ಹಾಗೂ ಇಂದು ಮಾತಿನ ಮೋಡಿಗೆ ಮರುಳಾಗಿ ಕೃತ್ಯ ಎಸಗಲು ಒಪ್ಪಿಕೊಂಡಿದ್ದ. ತಿರುಪತಿಯ ಕಾರ್ಲಗುಂಟ ಮೂಲದ ಬೆಂಗಳೂರಿನಲ್ಲಿ ನೆಲೆಸಿದ್ದ ಸ್ನೇಹಿತ ವಿನೋದ್ ಬಳಿ ಕೃತ್ಯ ಎಸಗಲು ಸಹಾಯ ಕೋರಿದ್ದ. 4 ಲಕ್ಷ ರೂ. ಪೈಕಿ ಆತನಿಗೂ ಒಂದಿಷ್ಟು ಹಣ ಕೊಡುವುದಾಗಿ ಹೇಳಿದ್ದ.

ನಂತರ ವಿನೋದ್ ಮತ್ತು ಶ್ಯಾಮ್ ವ್ಯವಸ್ಥಿತವಾಗಿ ಸಿದ್ಧಾರ್ಥ್ ಹತ್ಯೆಗೆ ಸಂಚು ರೂಪಿಸಿದ್ದರು. ಜ.19ರಂದು ಸಿದ್ಧಾರ್ಥ್‌ನ್ನು ಕಾರಿನಲ್ಲಿ ಕರೆದುಕೊಂಡು ಬಂದ ಶ್ಯಾಮ್ ಸ್ನೇಹಿತ ವಿನೋದ್ ಜತೆ ಸೇರಿ ಕಾರಿನ ಸೀಟ್ ಬೆಲ್ಟ್‌ನಿಂದ ಕತ್ತು ಬಿಗಿದು ಉಸಿರುಗಟ್ಟಿಸಿ ಹತ್ಯೆ ಮಾಡಿದ್ದ. ಸಿದ್ಧಾರ್ಥ್ ಶವವನ್ನು ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಅರಣ್ಯ ಪ್ರದೇಶಕ್ಕೆ ಕಾರಿನಲ್ಲಿ ಕೊಂಡೊಯ್ದು ಹೂತು ಹಾಕಿದ್ದರು. ಇದೀಗ ಸಿದ್ಧಾರ್ಥ್‌ ನನ್ನು ಕಾರಿನಲ್ಲಿ ಶ್ಯಾಮ್ ಹೇಗೆ ಕರೆತಂದಿದ್ದಾನೆ ? ಎಂಬ ಸಂಗತಿ ಆತನನ್ನು ಬಿಟ್ಟು ಬೇರೆ ಯಾರಿಗೂ ತಿಳಿದಿಲ್ಲ. ಸದ್ಯ ಶ್ಯಾಮ್ ಆತ್ಮಹತ್ಯೆ ಮಾಡಿಕೊಂಡಿರುವ ಹಿನ್ನೆಲೆ ಪ್ರಕರಣದ ಕುರಿತು ಹೆಚ್ಚಿನ ಮಾಹಿತಿ ಕಲೆ ಹಾಕುವುದು ಪೊಲೀಸರಿಗೆ ಸವಾಲಾಗಿದೆ.

ಪ್ರಕರಣ ಹಿನ್ನೆಲೆ:
ಸಿದ್ದಾರ್ಥ್ ಸ್ಟಾರ್ಟ್‌ಅಪ್ ಕಂಪನಿ ನಡೆಸುತ್ತಿದ್ದು, ಅಮೃತಹಳ್ಳಿಯ ದಾಸರಹಳ್ಳಿಯಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ಒಂಟಿಯಾಗಿ ವಾಸವಿದ್ದರು. ಜ.19ರಂದು ಬೆಳಗ್ಗೆ 5 ಗಂಟೆಗೆ ತಂದೆ ದೇವೇಂದರ್ ಸಿಂಗ್‌ಗೆ ವಾಟ್ಸ್​ಆ್ಯಪ್​ ಮೂಲಕ ಸ್ನೇಹಿತರನ್ನು ಭೇಟಿಯಾಗಲು ಅಮೆರಿಕಕ್ಕೆ ಹೋಗುತ್ತಿರುವುದಾಗಿ ಸಂದೇಶ ಕಳಿಸಿದ್ದರು. ಆದರೆ, ಅಮೆರಿಕಾಕ್ಕೂ ಹೋಗದೆ, ಇತ್ತ ಮನೆಗೂ ವಾಪಸ್ ಆಗದೇ ಇದ್ದಾಗ ಅನುಮಾನಗೊಂಡ ದೇವೇಂದರ್ ಮಗ ನಾಪತ್ತೆಯಾಗಿರುವ ಬಗ್ಗೆ ಅಮೃತ್‌ಹಳ್ಳಿ ಠಾಣೆಗೆ ದೂರು ಕೊಟ್ಟಿದ್ದರು.

ABOUT THE AUTHOR

...view details