ಕರ್ನಾಟಕ

karnataka

ETV Bharat / state

ನನ್ನ ವೀಣಾ ವಾದನ ರಾಮನಿಗೆ ಸಮರ್ಪಣೆಯಾಗಲಿದೆ: ಶುಭಾ ಸಂತೋಷ್ ಸಂತಸ

ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ವೀಣಾ ವಾದನ ನುಡಿಸುವುದಕ್ಕೆ ರಾಜ್ಯದ ಶುಭಾ ಸಂತೋಷ್​ ಅವರಿಗೆ ಆಹ್ವಾನಿಸಲಾಗಿದೆ. ಈ ಬಗ್ಗೆ ಖ್ಯಾತ ವೀಣಾ ವಾದಕಿ ಸಂತಸ ಹಂಚಿಕೊಂಡಿದ್ದಾರೆ.

By ETV Bharat Karnataka Team

Published : Jan 18, 2024, 3:33 PM IST

veena shubha santosh
ವೀಣಾ ವಾದಕಿ ಶುಭಾ ಸಂತೋಷ್​

ಬೆಂಗಳೂರು:ಅಯೋಧ್ಯೆಯಲ್ಲಿ ನಡೆಯಲಿರುವ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ವೀಣಾ ವಾದನ ನುಡಿಸುವಂತೆ ಆಹ್ವಾನಿಸಿರುವುದು ನನ್ನ ಜೀವನದ ಅವಿಸ್ಮರಣೀಯ ಕ್ಷಣವಾಗಲಿದೆ. ನನ್ನ ವೀಣಾ ವಾದನ ಶ್ರೀರಾಮನಿಗೆ ಸಮರ್ಪಣೆಯಾಗಲಿದೆ ಎಂದು ವೀಣಾ ವಾದಕಿ ಶುಭಾ ಸಂತೋಷ್ ಸಂತಸ ವ್ಯಕ್ತಪಡಿಸಿದ್ದಾರೆ.

ಅಯೋಧ್ಯೆಯಲ್ಲಿ ನಡೆಯುವ ಸಂಗೀತ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಯ್ಕೆಯಾಗಿರುವ ಕುರಿತು ಮಾಹಿತಿ ನೀಡಿದ ಅವರು, ಅಯ್ಯೋಧ್ಯೆಯಲ್ಲಿ ನಡೆಯಲಿರುವ ಶ್ರೀರಾಮಮಂದಿರದ ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ ವೇಳೆ ವೀಣಾವಾದನ ನುಡಿಸಲು ಆಯ್ಕೆಯಾಗಿರುವುದಕ್ಕೆ ತುಂಬಾ ಸಂತೋಷವಾಗಿದೆ. ನನ್ನ ವೃತ್ತಿಯೇ ವೀಣಾ ವಾದನ ನುಡಿಸುವುದಾಗಿದ್ದರೂ ಬೇರೆ ಬೇರೆ ದಿನದಲ್ಲಿ ನುಡಿಸುವುದು, ಬೇರೆ ಬೇರೆ ಕಾರ್ಯಕ್ರಮಗಳಲ್ಲಿ ನುಡಿಸುವುದಕ್ಕಿಂತ ಜನವರಿ 22ರಂದು ವೀಣಾ ವಾದನ ನುಡಿಸುವುದು ವಿಭಿನ್ನವಾಗಿದೆ. ಅಂದು ರಾಮನಿಗೆ ನನ್ನ ವೀಣಾ ವಾದನ ಸಮರ್ಪಣೆ ಆಗಲಿದೆ. ಹಾಗಾಗಿ ನನಗೆ ಇದು ವಿಶೇಷ ಅನುಭವ ಆಗಲಿದೆ ಎಂದು ಖುಷಿಯನ್ನು ಹಂಚಿಕೊಂಡಿದ್ದಾರೆ.

ಕಳೆದ ಮೂರ್ನಾಲ್ಕು ವಾರಗಳ ಹಿಂದೆ ನನಗೆ ಅಯೋಧ್ಯೆ ರಾಮ ಮಂದಿರ ಟ್ರಸ್ಟ್ ಪರವಾಗಿ ಕೇಂದ್ರದಿಂದ ದೂರವಾಣಿ ಕರೆ ಬಂದಿತ್ತು. ರಾಮಲಲ್ಲಾ ಪ್ರಾಣಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ವೀಣಾ ವಾದನ ನುಡಿಸುವಂತೆ ಆಹ್ವಾನಿಸಲಾಯಿತು. ಅದು ನನ್ನ ಜೀವನದ ಅವಿಸ್ಮರಣೀಯ ಕ್ಷಣವಾಗಿದೆ. ಈ ಆಹ್ವಾನ ಸಿಕ್ಕಿದ್ದು ನನಗೆ ತುಂಬಾ ಸಂತೋಷ ತಂದಿದೆ ಎಂದರು.

ಅಯೋಧ್ಯೆಯಲ್ಲಿ ನಡೆಯಲಿರುವ ಸಂಗೀತ ಕಾರ್ಯಕ್ರಮದಲ್ಲಿ ಹಿಂದೂಸ್ತಾನಿ ಮತ್ತು ಕರ್ನಾಟಕ ಸಂಗೀತ ವಾದ್ಯ ಪ್ರಕಾರ ಎಲ್ಲವೂ ಕೂಡ ಇರಲಿವೆ. ಒಟ್ಟಾರೆಯಾಗಿ 22 ವಾದ್ಯಗಳು ಅಂದು ಪ್ರಸ್ತುತವಾಗಲಿವೆ. ಹಾಗಾಗಿ ನಾವು ಅಲ್ಲಿಗೆ ಹೋದ ನಂತರವೇ ಯಾವ ರೀತಿಯಲ್ಲಿ ವೀಣೆ ನುಡಿಸಬೇಕು ಎನ್ನುವುದನ್ನು ನಿರ್ಧರಿಸಲಾಗುತ್ತದೆ. ಅಲ್ಲಿನ ನಿರ್ದೇಶನಕ್ಕೆ ತಕ್ಕಂತೆ ನಾವು ಸಿದ್ಧತೆ ನಡೆಸಿ ವಾದ್ಯವನ್ನು ನುಡಿಸುತ್ತೇವೆ. ಸದ್ಯ ಕರ್ನಾಟಕದಿಂದ ನಾನು ಮಾತ್ರ ಆಯ್ಕೆಯಾಗಿದ್ದೇನೆ, ಒಂದು ರಾಜ್ಯದಿಂದ ಒಬ್ಬರಿಗೆ ಅವಕಾಶ ನೀಡಲಾಗಿದೆ. ಅದರಂತೆ ಕರ್ನಾಟಕದಿಂದ ನನಗೆ ಅವಕಾಶ ಸಿಕ್ಕಿರುವುದು ನನ್ನ ಭಾಗ್ಯವಾಗಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದರು.

ಅಯೋಧ್ಯೆ ಕಾರ್ಯಕ್ರಮ ಬಹಳ ವಿಶೇಷ ಕಾರ್ಯಕ್ರಮವಾಗಿರಲಿದೆ. ಅಲ್ಲಿ ಒಂದು ಕ್ಲಾಸಿಕಲ್ ಆರ್ಕೆಸ್ಟ್ರಾ ಇರಲಿದೆ. ಉತ್ತರ ಭಾರತ ಮತ್ತು ದಕ್ಷಿಣ ಭಾರತದ ಸಂಗೀತವನ್ನು ಸಮ್ಮಿಳನ ಮಾಡಿ ನಾವು ವಾದ್ಯವನ್ನ ನುಡಿಸಬೇಕಾಗಿದೆ. ಹಾಗಾಗಿ ಅಲ್ಲಿ ಹೋದ ನಂತರ ನಮಗೆ ಯಾವ ರೀತಿ ನುಡಿಸಬೇಕು ಎನ್ನುವುದು ಗೊತ್ತಾಗಲಿದೆ. ಅದರಂತೆ ನಾವು ಅಲ್ಲಿಯೇ ಪೂರ್ವ ತಯಾರಿ ಮಾಡಿಕೊಳ್ಳುತ್ತೇವೆ ಎಂದರು.

ಇದನ್ನೂ ಓದಿ: ಪ್ರಾಯಶ್ಚಿತ್ತ, ಕರ್ಮಕುಟಿ ಪೂಜೆಯೊಂದಿಗೆ ರಾಮಲಲ್ಲಾ ಪಟ್ಟಾಭಿಷೇಕದ ವಿಧಿವಿಧಾನ ಆರಂಭ

ABOUT THE AUTHOR

...view details