ಕರ್ನಾಟಕ

karnataka

By ETV Bharat Karnataka Team

Published : Jan 19, 2024, 8:41 AM IST

ETV Bharat / state

ಬೆಂಗಳೂರು: ಅಂತರ್‌ರಾಜ್ಯ ವಾಣಿಜ್ಯ ತೆರಿಗೆ ವಂಚಕರ ಜಾಲ, ಸೂತ್ರದಾರ ಬಲೆಗೆ

ತೆರಿಗೆ ಪಾವತಿ ತಪ್ಪಿಸಿಕೊಂಡು ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ವಂಚಿಸಿದ್ದ ಓರ್ವ ಆರೋಪಿಯನ್ನು ಎಸ್​ಸಿಟಿಡಿ ಬಂಧಿಸಿದೆ.

ರಾಜ್ಯ ವಾಣಿಜ್ಯ ತೆರಿಗೆ ಇಲಾಖೆ
ರಾಜ್ಯ ವಾಣಿಜ್ಯ ತೆರಿಗೆ ಇಲಾಖೆ

ಬೆಂಗಳೂರು:ರಾಜ್ಯ ವಾಣಿಜ್ಯ ತೆರಿಗೆ ಇಲಾಖೆ(ಎಸ್​ಸಿಟಿಡಿ) ಅಧಿಕಾರಿಗಳು ಅಂತ‌ರ್‌ರಾಜ್ಯ ವಾಣಿಜ್ಯ ತೆರಿಗೆ ವಂಚಕರ ಜಾಲವನ್ನು ಪತ್ತೆ ಹಚ್ಚಿದ್ದಾರೆ. ತೆರಿಗೆ ವಂಚಕರ ಪ್ರಮುಖ ಸೂತ್ರದಾರ ಆರೋಪಿ ಮೊಹಮ್ಮದ್ ಸಿದ್ದಿಕ್ ಎಂಬಾತನನ್ನು ಬಂಧಿಸಲಾಗಿದೆ. ಕೇರಳದ ಜಿಎಸ್‌ಟಿ ಅಧಿಕಾರಿಗಳ ಸಹಯೋಗದಿಂದ ಕೈಗೊಂಡ ಈ ಕಾರ್ಯಾಚರಣೆ ಎರಡು ದಿನ ನಡೆದಿತ್ತು.

ಈ‌ ಕುರಿತು ವಾಣಿಜ್ಯ ತೆರಿಗೆಗಳ ಆಯಕ್ತೆ ಶಿಖಾ.ಸಿ. ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ. ವಾಣಿಜ್ಯ ತೆರಿಗೆಗಳ ಜಂಟಿ ಆಯುಕ್ತರು(ಜಾಗೃತಿ) ನೇತೃತ್ವದಲ್ಲಿ ಜ.17ರಂದು ನಡೆದ ಕಾರ್ಯಾಚರಣೆಯಲ್ಲಿ ಮೊಹಮ್ಮದ್ ಸಿದ್ದಿಕ್ ಬಿನ್ ಜಾವೇದ್ ಇಕ್ಬಾಲ್ ಎಂಬಾತನನ್ನು ಬಂಧಿಸಲಾಗಿದೆ. ಈತ ನಕಲಿ ದಾಖಲೆಗಳನ್ನು ಸೃಷ್ಟಿಸಿ ಜಿಎಸ್‌ಟಿ ನೋಂದಣಿಗಳನ್ನು ಪಡೆದುಕೊಂಡು ಕೇರಳ, ತಮಿಳುನಾಡು ಹಾಗೂ ಕರ್ನಾಟಕದಲ್ಲಿ ಗುಜರಿ ವ್ಯವಹಾರ ನಡೆಸುತಿದ್ದ. ಸುಳ್ಳು ನೋಂದಣಿ ಸಂಖ್ಯೆಗಳನ್ನು ಆಧರಿಸಿ ನಕಲಿ ತೆರಿಗೆ ಬಿಲ್ಲುಗಳನ್ನು ಸೃಷ್ಟಿಸಿ ಸರ್ಕಾರಕ್ಕೆ ತೆರಿಗೆ ಪಾವತಿಸದೆ, ವಂಚನೆಯಿಂದ ಹೂಡುವಳಿ ತೆರಿಗೆ (Input Tax Credit) ಪಡೆದಿದ್ದಾನೆ. ಈ ಮೂಲಕ ಸರ್ಕಾರಕ್ಕೆ ತೆರಿಗೆ ನಷ್ಟ ಉಂಟು ಮಾಡಿರುವುದು ಬೆಳಕಿಗೆ ಬಂದಿದೆ.

ತೆರಿಗೆ ವಂಚನೆ ಜಾಲವು ಕೇರಳ ಮತ್ತು ತಮಿಳುನಾಡು ರಾಜ್ಯಗಳಿಗೆ ವಿಸ್ತರಿಸಿ ಬೋಗಸ್ ಜಿಎಸ್‌ಟಿ ನೋಂದಣಿ ಪಡೆದು, ನಕಲಿ ಬಿಲ್ಲುಗಳನ್ನು ಸೃಷ್ಟಿಸಿ, ಕರ್ನಾಟಕದಲ್ಲಿ ನೋಂದಾಯಿತಗೊಂಡಿರುವ ಬೋಗಸ್ ತೆರಿಗೆ ಪಾವತಿದಾರರಿಗೆ ನಕಲಿ ಹೂಡುವಳಿ ತೆರಿಗೆಯನ್ನು ಕಾನೂನುಬಾಹಿರವಾಗಿ ವರ್ಗಾಯಿಸಲು ಅನುವು ಮಾಡಿದೆ. ಇದರೊಂದಿಗೆ ಹುಟ್ಟುವಳಿ ತೆರಿಗೆ (Output Tax Credit) ಪಾವತಿಸುವುದನ್ನು ತಪ್ಪಿಸಿ, ಸರ್ಕಾರದ ರಾಜಸ್ವಕ್ಕೆ ಗಣನೀಯ ಪ್ರಮಾಣದಲ್ಲಿ ನಷ್ಟ ಉಂಟುಮಾಡಿದ್ದು ಕಂಡುಬಂದಿದೆ.

ಕಾರ್ಯಾಚರಣೆಯಲ್ಲಿ ಒಟ್ಟು 60 ಅಧಿಕಾರಿಗಳು ಪಾಲ್ಗೊಂಡು, ವಂಚನಾ ಜಾಲದ ವ್ಯವಸ್ಥಿತ ಕಾರ್ಯ ನಿರ್ವಹಣಾ ವ್ಯವಸ್ಥೆಯನ್ನು ಬಯಲಿಗೆಳೆದಿದ್ದಾರೆ. ಮೋಸದ ಚಟುವಟಿಕೆಗಳಲ್ಲಿ ಕೆಲ ಜಿಎಸ್‌ಟಿ ತೆರಿಗೆ ಸಲಹೆಗಾರರು/ಲೆಕ್ಕ ಪರಿಶೋಧಕರು ಕೂಡಾ ಭಾಗಿಯಾಗಿರುವುದು ಗೊತ್ತಾಗಿದೆ. ಇಲಾಖೆ ಯಶಸ್ವಿಯಾಗಿ ನಡೆಸಿದ ಕಾರ್ಯಾಚರಣೆಯಲ್ಲಿ ಕರ್ನಾಟಕ, ಕೇರಳ ಹಾಗೂ ತಮಿಳುನಾಡು ರಾಜ್ಯಗಳಲ್ಲಿ 100ಕ್ಕೂ ಅಧಿಕ ಬೋಗಸ್ ನೋಂದಣಿ ಪ್ರಕರಣಗಳನ್ನು ಪತ್ತೆ ಹಚ್ಚಿದೆ. ಈ ಪ್ರಕರಣಗಳಲ್ಲಿ 1008 ಕೋಟಿ ರೂ. ನಕಲಿ ಬಿಲ್ಲುಗಳನ್ನು ಸೃಷ್ಟಿಸಿ ಸುಮಾರು 180 ಕೋಟಿ ರೂ.ಗಳಷ್ಟು ಕಾನೂನುಬಾಹಿರ ಹೂಡುವಳಿ ತೆರಿಗೆ ಪಡೆದುಕೊಂಡು ಸರ್ಕಾರಕ್ಕೆ ತೆರಿಗೆ ನಷ್ಟ ಮಾಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ಸೇಫ್ ಲಾಕರ್​ನಲ್ಲಿ ಇರಿಸಿದ್ದ ಹಣ ಕದ್ದ ಕಚೇರಿಯ ಮಾಜಿ ನೌಕರ: ಬಂಧನ

ABOUT THE AUTHOR

...view details