ಕರ್ನಾಟಕ

karnataka

ಮತ್ತೆ ಹ್ಯಾಟ್ರಿಕ್ ಸಾಧಿಸುವ ಹುಮ್ಮಸ್ಸಿನಲ್ಲಿ ಬಿಜೆಪಿ, ಯಲಹಂಕ ಕೋಟೆ ವಶಕ್ಕೆ ಕಾಂಗ್ರೆಸ್, ಜೆಡಿಎಸ್ ತಂತ್ರ ಫಲಿಸುವುದೇ?

ಬೆಂಗಳೂರಿನ ಪ್ರಮುಖ ಮತ ಕ್ಷೇತ್ರಗಳಲ್ಲಿ ಯಲಹಂಕ ವಿಧಾನಸಭಾ ಕ್ಷೇತ್ರ ಕೂಡ ಒಂದು. ಹಲವು ವಿದ್ಯಮಾನಗಳಿಂದ ಸದಾ ಸುದ್ದಿಯಲ್ಲಿರುವ ಈ ಕ್ಷೇತ್ರ ಸದ್ಯ ವಿಧಾನದಭಾ ಚುನಾವಣೆಯ ಭರ್ಜರಿ ತಯಾರಿಯಲ್ಲಿದೆ. ಪಕ್ಷಗಳ ಲೆಕ್ಕಾಚಾರ ಹಾಗೂ ಅಭ್ಯರ್ಥಿಗಳ ಮಾಹಿತಿ ಇಲ್ಲಿದೆ.

By

Published : Mar 13, 2023, 7:05 PM IST

Published : Mar 13, 2023, 7:05 PM IST

yelahanka assembly constituency
ಯಲಹಂಕ ವಿಧಾನಸಭಾ ಕ್ಷೇತ್ರ

ಬೆಂಗಳೂರು:ನಾಡಪ್ರಭು ಕೆಂಪೇಗೌಡರು ನಿರ್ಮಾಣ ಮಾಡಿದ ಯಲಹಂಕ ಪ್ರಮುಖ ಸ್ಥಳವಾಗಿದೆ. ಸದ್ಯ ರಾಜಕೀಯವಾಗಿ ಈ ಕ್ಷೇತ್ರ ಬಿಜೆಪಿ ವಶದಲ್ಲಿದೆ. ಪ್ರಸ್ತುತ ಶಾಸಕರಾಗಿರುವ ಎಸ್.ಆರ್. ವಿಶ್ವನಾಥ್ ಮೂರು ಬಾರಿ ಗೆಲುವು ಸಾಧಿಸುವ ಮೂಲಕ ಹ್ಯಾಟ್ರಿಕ್ ಸಾಧಿಸಿದ್ದಾರೆ. ಇದೀಗ ಮತ್ತೆ ಚುನಾವಣೆ ಬರುತ್ತಿದ್ದು, ಅಖಾಡ ರೆಡಿಯಾಗುತ್ತಿದೆ. ಸದ್ಯಕ್ಕೆ ಕಾಂಗ್ರೆಸ್ ಹಾಗೂ ಜೆಡಿಎಸ್ ಅಭ್ಯರ್ಥಿಗಳನ್ನು ಘೋಷಣೆ ಮಾಡಿಲ್ಲ. ಹಾಗಾಗಿ, ಬಿಜೆಪಿಯ ಎಸ್.ಆರ್. ವಿಶ್ವನಾಥ್ ಅವರ ಗೆಲುವಿನ ನಾಗಲೋಟಕ್ಕೆ ಬ್ರೇಕ್ ಹಾಕುವವರು ಯಾರು? ಎಂಬುದು ಇನ್ನೂ ನಿರ್ಧಾರವಾಗಿಲ್ಲ. ಆದರೆ, ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳಿಂದ ಆಕಾಂಕ್ಷಿಗಳಿಗೇನು ಕೊರತೆ ಇಲ್ಲ.

ಯಲಹಂಕ ವಿಧಾನಸಭಾ ಕ್ಷೇತ್ರ

ಬೆಂಗಳೂರು ಉತ್ತರ ತಾಲೂಕಿಗೆ ಸೇರುವ ಯಲಹಂಕ ಕೆಲ ಹಳ್ಳಿಗಳನ್ನೂ ಒಳಗೊಂಡಿದೆ. ಲೋಕಸಭೆ ಚುನಾವಣೆಯಲ್ಲಿ ಯಲಹಂಕ ಚಿಕ್ಕಬಳ್ಳಾಪುರ ಕ್ಷೇತ್ರದ ವ್ಯಾಪ್ತಿಗೆ ಒಳಪಡುತ್ತದೆ. ವಿಮಾನ ನಿಲ್ದಾಣಕ್ಕೆ ಇದೇ ಮಾರ್ಗವಾಗಿ ತೆರಳಬೇಕು. ಹಾಗಾಗಿ, ಸಂಚಾರ ದಟ್ಟಣೆ ಯಾವಾಗಲೂ ಇದ್ದೇ ಇರುತ್ತದೆ. ಇಲ್ಲಿ ಭೂಮಿಗೆ ಚಿನ್ನದ ಬೆಲೆ ಇದೆ. ಈ ಭಾಗದಲ್ಲಿ ರಿಯಲ್ ಎಸ್ಟೇಟ್ ಉದ್ಯಮ ಹೆಚ್ಚು ಸಕ್ರಿಯವಾಗಿದೆ.

ಅದರ ಜೊತೆಗೆ ಗಾರ್ಮೆಂಟ್ ಉದ್ಯಮ, ವಿದೇಶಿ ಕಂಪನಿಗಳು ಈ ಭಾಗದಲ್ಲಿ ಹೆಚ್ಚು ಇವೆ. ಯಲಹಂಕದಲ್ಲಿ ಅಟ್ಟೂರು ಲೇಔಟ್, ಸೋಮೇಶ್ವರ ವಾರ್ಡ್, ಕೆಂಪೇಗೌಡ ವಾರ್ಡ್, ಯಲಹಂಕ ಸ್ಯಾಟಲೈಟ್ ಟೌನ್ ವಾರ್ಡ್, ಚೌಡೇಶ್ವರಿ ವಾರ್ಡ್, ಕಡಬಗೆರೆ, ಕಾಚೋಹಳ್ಳಿ, ವಡೇರಹಳ್ಳಿ, ರಾಜಾನುಕುಂಟೆ, ಹೆಗ್ಗಡದೇವನಪುರ, ಹೆಸರುಘಟ್ಟ, ಕೋಗಿಲು, ವೆಂಕಟಾಲ ಗ್ರಾಮ ಸೇರಿದಂತೆ ಇನ್ನು ಹಲವು ಪ್ರದೇಶಗಳನ್ನು ಈ ಕ್ಷೇತ್ರ ಒಳಗೊಂಡಿದ್ದು, ಬಡವರು, ವ್ಯಾಪಾರಿಗಳು, ಮಧ್ಯಮ ವರ್ಗ ಹಾಗೂ ಮೇಲ್ವರ್ಗದವರು ನೆಲೆಸಿದ್ದಾರೆ.

ಹೆಚ್​​ಎಎಲ್ ಉದ್ಯೋಗಿಯಾಗಿದ್ದ ಎಸ್.ಆರ್. ವಿಶ್ವನಾಥ್ ಅವರು, ಕೆಲಸಕ್ಕೆ ರಾಜೀನಾಮೆ ನೀಡಿ ರಾಜಕೀಯಕ್ಕೆ ಎಂಟ್ರಿಕೊಟ್ಟರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿದ್ದ ಅವರು, 2008 ರಲ್ಲಿ ವಿಧಾನಸಭೆ ಚುನಾವಣೆ ಅಖಾಡಕ್ಕೆ ಇಳಿದು ಗೆದ್ದಿದ್ದರು. ನಂತರ 2013, 2018ರ ಚುನಾವಣೆಯಲ್ಲಿ ಜಯಭೇರಿ ಸಾಧಿಸುವುದರ ಜೊತೆಗೆ ಮತಗಳ ಗಳಿಕೆ ಗೆಲುವಿನ ಅಂತರ ಹೆಚ್ಚಿಸಿಕೊಂಡಿದ್ದಾರೆ. ಇದರಿಂದಾಗಿ ಬಿಜೆಪಿ ಈ ಬಾರಿಯೂ ಅವರನ್ನೇ ನೆಚ್ಚಿಕೊಂಡಿದೆ.

ಪೌಂಡೇಶನ್ ಮೂಲಕ ದುರ್ಬಲ, ಬಡ ಮಹಿಳೆಯರಿಗೆ ಗುಡಿ ಕೈಗಾರಿಕೆ ತರಬೇತಿ, ನೆರವಿನ ಮೂಲಕ ಜನಪ್ರಿಯತೆ ಹೆಚ್ಚಿಸಿಕೊಂಡಿದ್ದಾರೆ. ನಗರ ವ್ಯಾಪ್ತಿಯಲ್ಲಿ ಅಭಿವೃದ್ಧಿ ಸಮಾಧಾನಕರವಾಗಿದ್ದರೂ, 8ಕ್ಕೂ ಹೆಚ್ಚು ಗ್ರಾಮ ಪಂಚಾಯಿತಿಗಳನ್ನು ಒಳಗೊಂಡ ಗ್ರಾಮೀಣ ಪ್ರದೇಶ ನಿರೀಕ್ಷಿತ ಅಭಿವೃದ್ಧಿ ಸಾಧಿಸಿಲ್ಲವೆಂಬ ಮಾತುಗಳು ಕೇಳಿಬರುತ್ತಿವೆ. ಇದರ ಬೆನ್ನಲ್ಲೇ ವಿಶ್ವನಾಥ್ ಅವರ ವೈಫಲ್ಯಗಳನ್ನು ಪಟ್ಟಿ ಮಾಡಿಕೊಂಡು ಜನರ ಮನ ಗೆಲ್ಲಲು ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಸಜ್ಜಾಗುತ್ತಿವೆ.

ಈ ಬಾರಿಯೂ ಚುನಾವಣೆಯಲ್ಲಿ ಗೆಲುವು ಸಾಧಿಸಿ ಮತ್ತೊಂದು ಹ್ಯಾಟ್ರಿಕ್ ಬಾರಿಸುವ ಹುಮ್ಮಸ್ಸಿನಲ್ಲಿ ಎಸ್.ಆರ್. ವಿಶ್ವನಾಥ್ ಇದ್ದರೆ, ಪ್ರತಿಪಕ್ಷಗಳು ಸಮರ್ಥ ಅಭ್ಯರ್ಥಿಗಾಗಿ ಹುಡುಕಾಟ ನಡೆಸುತ್ತಿವೆ. ಸದ್ಯಕ್ಕೆ ಕಾಂಗ್ರೆಸ್ ಟಿಕೆಟ್​​ಗಾಗಿ ಕಳೆದ ಬಾರಿ ಸೋತಿದ್ದ ಎಂ.ಎನ್. ಗೋಪಾಲಕೃಷ್ಣ , ಬಿ. ಚಂದ್ರಪ್ಪ ಜೊತೆಗೆ ಡಿ.ಕೆ.ಶಿವಕುಮಾರ್ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡ ಕೇಶವರಾಜನ್ ಲಾಬಿ ನಡೆಸಿದ್ದಾರೆ. ಕಳೆದ ಬಾರಿ ಕೊನೆ ಗಳಿಗೆಯಲ್ಲಿ ಜೆಡಿಎಸ್ ಟಿಕೆಟ್ ವಂಚಿತ ನಿವೃತ್ತ ಪೊಲೀಸ್ ಅಧಿಕಾರಿ ಎನ್. ಕೃಷ್ಣಪ್ಪ, ಕಳೆದ ಬಾರಿ ಸೋತ ಎ.ಎಂ.ಹನುಮಂತೇಗೌಡ ಮತ್ತೆ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಈ ಬಾರಿ ಚುನಾವಣೆ ಕದನ ಕುತೂಲಹ ಮೂಡಿಸಿದೆ.

ಮತದಾರರೆಷ್ಟು?ಒಟ್ಟು 4,07,217 ಮತದಾರರಿದ್ದು, ಅದರಲ್ಲಿ ಪುರುಷ ಮತದಾರರು 2,08,075 ಇದ್ದಾರೆ. 1,99,066 ಮಹಿಳಾ ಮತದಾರರು ಇದ್ದಾರೆ. ತೃತೀಯ ಲಿಂಗಿಗಳು 76 ಮಂದಿ ಇದ್ದಾರೆ. ಮತಗಳ ವಿವರ ನೋಡುವುದಾದರೆ, 2008 ರಲ್ಲಿ ಬಿಜೆಪಿ 60,975 ಪಡೆದಿದ್ದರೆ, ಕಾಂಗ್ರೆಸ್ 44,593 ಪಡೆದಿತ್ತು. ಇನ್ನು ಜೆಡಿಎಸ್ 37,070 ಮತಗಳನ್ನು ಪಡೆದು ಮೂರನೇ ಸ್ಥಾನ ಪಡೆಯಿತು. 2013 ರಲ್ಲಿ ಬಿಜೆಪಿ 75,507, ಕಾಂಗ್ರೆಸ್ 52,372 ಪಡೆದು ಮೂರನೇ ಸ್ಥಾನ ಪಡೆದುಕೊಂಡಿದ್ದರೆ, ಜೆಡಿಎಸ್ 57,110 ಮತ ಪಡೆದು ಎರಡನೇ ಸ್ಥಾನಕ್ಕೇರಿತ್ತು. 2018 ರಲ್ಲಿ ಬಿಜೆಪಿ 1,20,110 ಮತ ಪಡೆದಿದ್ದರೆ, ಜೆಡಿಎಸ್ ಎರಡನೇ ಸ್ಥಾನವನ್ನು ಉಳಿಸಿಕೊಂಡು 77,607 ಮತ ಪಡೆದಿತ್ತು. ಕಾಂಗ್ರೆಸ್ 41,449 ಮತ ಪಡೆದಿತ್ತು.

ಇದನ್ನೂ ಓದಿ:ಚಾಮರಾಜಪೇಟೆ ಕ್ಷೇತ್ರದಲ್ಲಿ ಪಕ್ಷಕ್ಕಿಂತ ಜಮೀರ್ ವರ್ಚಸ್ಸೇ ಹೆಚ್ಚು: ಈ ಬಾರಿ ರಣಕಣದ ಬದಲಾದ ರಾಜಕೀಯ ಲೆಕ್ಕಾಚಾರ ಏನು?

ABOUT THE AUTHOR

...view details