ಕರ್ನಾಟಕ

karnataka

ಕ್ರಿಮಿನಲ್​ಗಳೇ ಎಚ್ಚರ! ನಿಮ್ಮ ಜಾಡು ಹಿಡಿಯಲು ಎಂಟ್ರಿ ಕೊಟ್ಟಿವೆ ಬೆಲ್ಜಿಯಂ ಡಾಗ್ಸ್!

By

Published : Sep 19, 2019, 11:25 PM IST

ಜರ್ಮನ್ ಶೆಫರ್ಡ್, ಡಾಬರ್ ಮ್ಯಾನ್ ಸೇರಿದಂತೆ ವಿವಿಧ ತಳಿಗಳ ಶ್ವಾನಗಳ ಜೊತೆ ತೀಕ್ಷ್ಣ ಬುದ್ಧಿ ಹೊಂದಿರುವ ಬೆಲ್ಜಿಯಂ ಮೂಲದ ಮಾಲಿನೋಯಿಸ್​​ ಜಾತಿಯ ಶ್ವಾನಗಳನ್ನು ಬಳಸಿ ದುಷ್ಕರ್ಮಿಗಳನ್ನು ಪತ್ತೆ ಹಚ್ಚಲು ಪೊಲೀಸ್ ಇಲಾಖೆ ಮುಂದಾಗಿದೆ.

ಕ್ರಿಮಿನಲ್​ಗಳೇ ಎಚ್ಚರ: ನಿಮ್ಮ ಜಾಡನ್ನು ಹಿಡಿಯಲು ಎಂಟ್ರಿ ಕೊಟ್ಟಿವೆ ಬೆಲ್ಜಿಯಂ ಡಾಗ್ಸ್...!

ಬೆಂಗಳೂರು: ಸಿಲಿಕಾನ್​ ಸಿಟಿಯಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ, ಅವುಗಳ ಪತ್ತೆ ಕೂಡಾ ಪೊಲೀಸರಿಗೆ ಸವಾಲಾಗುತ್ತಿದೆ. ಮನುಷ್ಯನ ಜಾಣತನದಿಂದ ಅಪರಾಧ ಪ್ರಕರಣ ಪತ್ತೆ ಹಚ್ಚುವುದು ದುಸ್ಥರವಾಗಿದ್ದು, ಕೇವಲ ಮೂಗಿನ ತುದಿಯಲ್ಲೇ ಆರೋಪಿಗಳ ವಾಸನೆ ಗ್ರಹಿಸುವ ಮೂಲಕ ಕ್ರಿಮಿನಲ್​​ಗಳ ಬಣ್ಣ ಬಯಲು ಮಾಡುವ ತರಹೇವಾರಿ ಶ್ವಾನಗಳ ಬಳಕೆಗೆ ಪೊಲೀಸ್ ಇಲಾಖೆ ಮೊರೆ ಹೋಗಿದೆ.

ಇಲಾಖೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಬೆಲ್ಜಿಯಂ ಮಾಲಿನೋಯಿಸ್ ಎಂಬ ಜಾತಿಯ ಎರಡು ಶ್ವಾನಗಳು ಸೇರ್ಪಡೆಗೊಂಡಿವೆ. ಬೇರೆ ಶ್ವಾನಗಳಿಗೆ ಹೋಲಿಸಿದರೆ ಬೆಲ್ಜಿಯಂ ತಳಿಯ ಶ್ವಾನಗಳು ಅತಿ ಚುರುಕುತನ ಹೊಂದಿವೆ. ಇವುಗಳ ವಾಸನೆ ಗ್ರಹಿಸುವ ಸಾಮರ್ಥ್ಯ ಹೆಚ್ಚು. ಇದರ ತೂಕ ಕಡಿಮೆ ಇರುವುದರಿಂದ ಎತ್ತರ ಹಾಗೂ ತಗ್ಗು ಪ್ರದೇಶ ಸೇರಿದಂತೆ ಕಿರಿದಾದ ಜಾಗಗಳಲ್ಲಿ ಚುರುಕಾಗಿ ಓಡಾಡಿ ಸ್ಫೋಟಕ ಪತ್ತೆ ಮಾಡುವ ಚಾಣಾಕ್ಷತನ ಇವುಗಳಿವೆ.

ಕ್ರಿಮಿನಲ್​ಗಳೇ ಎಚ್ಚರ: ನಿಮ್ಮ ಜಾಡು ಹಿಡಿಯಲು ಎಂಟ್ರಿ ಕೊಟ್ಟಿವೆ ಬೆಲ್ಜಿಯಂ ಡಾಗ್ಸ್

ಅಪರಾಧ ಪತ್ತೆ ಹಾಗೂ ಸ್ಫೋಟಕ ವಸ್ತುಗಳ ಪತ್ತೆಗಾಗಿ ಒಂದು ಶ್ವಾನವನ್ನು ನಿಯೋಜಿಸಲಾಗುತ್ತಿದೆ. ಮತ್ತೊಂದು ಶ್ವಾನವನ್ನು ಮಾದಕ ವಸ್ತುಗಳ ಪತ್ತೆಗೆ ಬಳಸಿಕೊಳ್ಳಲಾಗುತ್ತಿದೆ. ಸಾಮಾನ್ಯವಾಗಿ ಇಂತಹ ಶ್ವಾನಗಳನ್ನು ಕೇಂದ್ರ ಅರೆಸೇನಾ ಪಡೆಗಳಾದ ಬಿಎಸ್ಎಫ್, ಸಿಆರ್​ಪಿಎಫ್, ಎಸ್ಎಸ್​ಬಿ, ಆರ್​ಪಿಎಫ್​ಗಳಲ್ಲಿ ಬಳಸಲಾಗುತ್ತಿದೆ.

ರಾಜ್ಯ ಪೊಲೀಸ್ ಶ್ವಾನದಳ ಬೆಂಗಳೂರಿನ ಆಡುಗೋಡಿಯ ಸಿಎಆರ್ ದಕ್ಷಿಣ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದೆ. ಸದ್ಯ ಶ್ವಾನದಳದಲ್ಲಿ ಜರ್ಮನ್ ಶೆಫರ್ಡ್ ಡಾಗ್ 16, ಡಾಬರ್ ಮನ್ 15, ಲ್ಯಾಬ್ರಡಾರ್ 30 ಶ್ವಾನಗಳಿದ್ದು, ಇದೀಗ ಬೆಲ್ಜಿಯಂನ ಎರಡು ಶ್ವಾನಗಳ ಸೇರ್ಪಡೆಯೊಂದಿಗೆ ಒಟ್ಟು ಪೊಲೀಸ್ ಡಾಗ್ ಸಂಖ್ಯೆ 64ಕ್ಕೆ ಏರಿದೆ. ಈ ಶ್ವಾನಗಳು ಅಪರಾಧ ಪತ್ತೆ, ಸ್ಫೋಟಕ ಪತ್ತೆ ಹಾಗೂ ಮಾದಕ ವಸ್ತುಗಳು ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿವೆ.

50 ಶ್ವಾನ ಖರೀದಿಗೆ ಪ್ರಸ್ತಾವನೆ ಸಲ್ಲಿಸಿದ ಕಮೀಷನರ್

ನಗರದಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿದ್ದು ತ್ವರಿತವಾಗಿ ಪ್ರಕರಣ ಬೇಧಿಸಲು ಹಾಗೂ ವರ್ಷದ 365 ದಿನಗಳು ಸಹ ರಾಜ್ಯಮಟ್ಟದಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಭಾಗಿಯಾಗಲು ವಿವಿಐಪಿ ಗಣ್ಯರು ಆಗಮನ ಸಾಮಾನ್ಯವಾಗಿದೆ. ಭದ್ರತೆ ತಪಾಸಣೆ ನಡೆಸಲು ಅಗತ್ಯ ಶ್ವಾನಗಳ ಕೊರತೆಯಿದೆ. ಹೀಗಾಗಿ ಇನ್ನೂ 50 ಪೊಲೀಸ್ ಡಾಗ್ಸ್ ಖರೀದಿಗೆ ಅನುಮತಿ ಕೋರಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ಎನ್.ರಾಜು ಅವರಿಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ.

ನಗರದ ಜನಸಂಖ್ಯೆ ಹಾಗೂ ವಿಸ್ತೀರ್ಣಕ್ಕೆ ಅನುಗುಣವಾಗಿ ಸಾರ್ವಜನಿಕ ಸ್ಥಳಗಳು, ಸರ್ಕಾರಿ ಕಚೇರಿಗಳು, ಕೋರ್ಟ್, ಏರ್ ಪೋರ್ಟ್, ವಿಧಾನಸೌಧ, ಸಿಎಂ ನಿವಾಸ, ಕಚೇರಿ, ಗೃಹ ಮಂತ್ರಿಗಳ ನಿವಾಸ, ಮಾಜಿ ಪ್ರಧಾನ ಮಂತ್ರಿ, ಮಾಜಿ ಮುಖ್ಯಮಂತ್ರಿಗಳು, ಪಕ್ಷದ ಕಚೇರಿಗಳು ಹಾಗೂ ರಾಯಭಾರಿ ಕಚೇರಿಗಳ ತಪಾಸಣೆಗಾಗಿ ಪೊಲೀಸ್ ಡಾಗ್ ಗಳನ್ನು ಸದಾ ಬಳಸಲಾಗುತ್ತದೆ. ಸದ್ಯ ಲಭ್ಯವಿರುವ ಶ್ವಾನಗಳು ಸಾಕಾಗುತ್ತಿಲ್ಲ. ಅಲ್ಲದೇ, ಇತ್ತೀಚಿನ ದಿನಗಳಲ್ಲಿ ನಗರದಲ್ಲಿ ಅಪರಾಧ ಪ್ರಕರಣಗಳು ಹೆಚ್ಚುತ್ತಿದ್ದು, ಪ್ರಕರಣಗಳ ಅನುಗುಣವಾಗಿ 50 ಶ್ವಾನಗಳ ಅಗತ್ಯವಿದೆ. ಹೆಚ್ಚುವರಿಯಾಗಿ 100 ಮಂದಿ ಶ್ವಾನ ತರಬೇತಿದಾರರು ನೇಮಕವಾಗಿದೆ ಎಂದು ಆಯುಕ್ತರು ಪ್ರಸ್ತಾವನೆಯಲ್ಲಿ ಉಲ್ಲೇಖಿಸಿದ್ದಾರೆ.

ABOUT THE AUTHOR

...view details