ಕರ್ನಾಟಕ

karnataka

By

Published : Jun 25, 2021, 2:19 PM IST

ETV Bharat / state

'ಆ.15 ರಂದು ರಾಜೀವ್ ಗಾಂಧಿ ವಸತಿ ನಿಗಮದಿಂದ 5 ಸಾವಿರ ಮನೆ ಲೋಕಾರ್ಪಣೆ'

ಆಗಸ್ಟ್ 15 ರಂದು ರಾಜೀವ್ ಗಾಂಧಿ ವಸತಿ ನಿಗಮದಿಂದ ಐದು ಸಾವಿರ ಮನೆಗಳನ್ನು ಲೋಕಾರ್ಪಣೆ ಮಾಡಲಾಗುವುದು ಎಂದು ವಸತಿ ಸಚಿವ ವಿ. ಸೋಮಣ್ಣ ಹೇಳಿದರು.

Minister V Somanna
ಸಚಿವ ವಿ. ಸೋಮಣ್ಣ

ಬೆಂಗಳೂರು: ಕೋವಿಡ್ ಕಾರಣದಿಂದ ಮನೆ ನಿರ್ಮಾಣ ವಿಳಂಬವಾಗಿದೆ. 2022 ನವೆಂಬರ್ ಅಂತ್ಯದ ಒಳಗೆ 80 ಸಾವಿರ ಮನೆ ಹಂಚಿಕೆ ಪೂರ್ಣಗೊಳಿಸಲಾಗುವುದು ಎಂದು ವಸತಿ ಸಚಿವ ವಿ. ಸೋಮಣ್ಣ ತಿಳಿಸಿದರು. ಒಂದು ಲಕ್ಷ ಬಹುಮಹಡಿ ಮನೆಗಳ ಯೋಜನೆಯ ಅನುಷ್ಠಾನ ಕುರಿತಂತೆ ವಿಕಾಸಸೌಧದಲ್ಲಿ ಇಂದು ಅಧಿಕಾರಿಗಳ ಜೊತೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.

ಕೋವಿಡ್​​ನಿಂದ ಒಂದು ಲಕ್ಷ ಮನೆಗಳ ನಿರ್ಮಾಣ ಕಾರ್ಯ ವಿಳಂಬವಾಗಿತ್ತು. 515 ಎಕರೆ ಜಾಗ ಕಂದಾಯ ಇಲಾಖೆಯಿಂದ ಪಡೆದಿದ್ದೇವೆ. 42,361 ಸಾವಿರ ಮನೆಗಳು ನಿರ್ಮಾಣ ಹಂತದಲ್ಲಿವೆ. ಆಗಸ್ಟ್ 15 ರಂದು ರಾಜೀವ್​​ ಗಾಂಧಿ ವಸತಿ ನಿಗಮದಿಂದ 5 ಸಾವಿರ ಮನೆಗಳನ್ನು ಲೋಕಾರ್ಪಣೆ ಮಾಡುತ್ತಿದ್ದೇವೆ ಎಂದು ಹೇಳಿದರು.

ಸಚಿವ ವಿ. ಸೋಮಣ್ಣ

ಫಲಾನುಭವಿಗಳ ಆಯ್ಕೆಗೆ ಹಿಂದೆ 87 ಸಾವಿರ ಆದಾಯ ನಿಗದಿಪಡಿಸಲಾಗಿತ್ತು. 65 ಸಾವಿರ ಕುಟುಂಬಗಳಿಗೆ ಆಯ್ಕೆ ಪತ್ರ ಹಿಂದೆ ನೀಡಲಾಗಿತ್ತು. ಒಂದಿಂಚು ಜಾಗವನ್ನು ಹಿಂದಿನ ಸರ್ಕಾರ ತೆಗೆದುಕೊಂಡಿರಲಿಲ್ಲ. ಬೆಂಗಳೂರು ನಗರ ವ್ಯಾಪ್ತಿಯಲ್ಲಿ 46 ಸಾವಿರ ಮನೆ ಪ್ರಾರಂಭ ಮಾಡಿದ್ದೇವೆ. ಒಂದು ಲಕ್ಷ ಮನೆಗಳ ನಿರ್ಮಾಣ ಗುರಿ ತಲುಪಲು 2022 ನವೆಂಬರ್ ತಿಂಗಳ ಒಳಗೆ 80 ಸಾವಿರ ಮನೆಗಳನ್ನು ಬೆಂಗಳೂರು ನಗರ ಜಿಲ್ಲೆಯ ಅರ್ಹರಿಗೆ ನೀಡುವ ವಿವಿಧ ಕೆಲಸ ಪ್ರಾರಂಭವಾಗಿದೆ. ಬಿಡಿಎ ವ್ಯಾಪ್ತಿಯನ್ನು ಮೀರಿ ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿ ಮನೆಗಳ ನಿರ್ಮಾಣ ಮಾಡುತ್ತಿದ್ದೇವೆ ಎಂದು ಸಚಿವರು ತಿಳಿಸಿದರು.

ಗುತ್ತಿಗೆದಾರರ ಕಾರ್ಯವೈಖರಿ ಬಗ್ಗೆಯೂ ಗಮನ ಹರಿಸುವಂತೆ ಸೂಚನೆ ನೀಡಿದ್ದೇನೆ. ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿ ಚಿಂತನೆಗೆ, ಯಡಿಯೂರಪ್ಪ ಸರ್ಕಾರಕ್ಕೆ ಕೈ ಜೋಡಿಸುವುದು ನಮ್ಮ ಉದ್ದೇಶ. ಯಾರಿಗೆ ಅವಶ್ಯಕತೆ ಇದೆಯೋ ಅಂಥವರಿಗೆ ಹೊಸದಾಗಿ ಅರ್ಜಿ ಸಲ್ಲಿಸಲು ಅವಕಾಶ ಇದೆ ಎಂದರು.

ಅಧಿಕಾರಿಗಳಿಗೆ ಎಚ್ಚರಿಕೆ:

ಕಾಂಟ್ರಾಕ್ಟ್‌ನಲ್ಲಿರುವವರು ಟೈಂಪಾಸ್‌ಗೆ ಬಂದಿದ್ರೆ ಬೇಡ. ಒಂದು ಸಣ್ಣ ಅಪಚಾರ, ನಾಟಕ ಮಾಡಿದರೆ ಬಿಟ್ಟು ಹೋಗಬಹುದು. ಎಷ್ಟೇ ದೊಡ್ಡವನಾದ್ರೂ ಕಾಂಟ್ರಾಕ್ಟರೇ ಅವರು. ನಾನು ಬೆಂಗಳೂರಿನವನು. ನನಗೆ ಎಲ್ಲ ಗೊತ್ತಿದೆ. ಸರಿಯಾಗಿ ಕೆಲಸ ಮಾಡಿಲ್ಲ ಅಂದ್ರೆ ಜಾಗ ಬಿಡಿ ಎಂದು ಅಧಿಕಾರಿಗಳಿಗೆ ಸಚಿವ ಸೋಮಣ್ಣ ಖಡಕ್ ಎಚ್ಚರಿಕೆ ನೀಡಿದರು.

ಸರಿಯಾಗಿ ಕೆಲಸ ಮಾಡದೆ ಏನು ಮಾಡುತ್ತಿದ್ದೀರಾ?.15 ದಿನಕ್ಕೆ ಒಂದು ಬಾರಿ ಪರಿಶೀಲನೆ ಮಾಡಬೇಕು. 30 ದಿನದಲ್ಲಿ ಪರಿಶೀಲನೆ ಜತೆ ಕೆಲಸವನ್ನು ಮಾಡಬೇಕು. ನೀವು ಕೆಲಸ ಮಾಡಿ ಬಡವರಿಗೆ ಸೂರು ಕೊಡ್ತಿರಾ ಅಂದುಕೊಂಡಿದ್ದೆ. ಆದರೆ ನೀವು ಘಾತುಕತನ ಮಾಡ್ತಿದ್ದೀರಾ?. ಆಕಾಶದಿಂದ ಇಳಿದಿರುವ ತರ ಆಡುತ್ತಿದ್ದೀರಾ? ಎಂದು ಗರಂ ಆದರು.

ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಸೇರಿದಂತೆ ರಾಜೀವ್ ಗಾಂಧಿ ವಸತಿ ನಿಗಮದ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದರು.

ಇದನ್ನೂ ಓದಿ:ಶಾಲೆ ಬಂದ್​ ಪರಿಣಾಮ; ಮಕ್ಕಳಿಗೆ ಕಾಡುತ್ತಿದೆ ಡಿಪ್ರೆಶನ್, ಬೊಜ್ಜಿನ ಸಮಸ್ಯೆ

ABOUT THE AUTHOR

...view details