ಕರ್ನಾಟಕ

karnataka

By

Published : Jun 28, 2021, 1:16 PM IST

Updated : Jun 28, 2021, 3:37 PM IST

ETV Bharat / state

ಜು.19, 22 ರಂದು SSLC ಪರೀಕ್ಷೆ: 2nd ಪಿಯು ಫಲಿತಾಂಶಕ್ಕೂ ಮುಹೂರ್ತ ಫಿಕ್ಸ್​

ಜುಲೈ 19 ಮತ್ತು 22ರಂದು ಎಸ್​ಎಸ್​ಎಲ್​ಸಿ ಪರೀಕ್ಷೆ ನಡೆಯಲಿದೆ ಹಾಗೂ ದ್ವಿತೀಯ ಪಿಯು ಫಲಿತಾಂಶವನ್ನು ಜುಲೈ 2ನೇ ವಾರದಲ್ಲಿ ಪ್ರಕಟಿಸಲಾಗುವುದು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಮಾಹಿತಿ ನೀಡಿದ್ದಾರೆ.

minister-suresh-kumar-announce-about-sslc-exams
ಎಸ್ಎಸ್ಎಲ್ಸಿ ಪರೀಕ್ಷೆ

ಬೆಂಗಳೂರು:ಪ್ರಸಕ್ತ ಶೈಕ್ಷಣಿಕ ವರ್ಷದ ಎಸ್​ಎಸ್​ಎಲ್​ಸಿ ಪರೀಕ್ಷೆಯನ್ನು ಜು.19 ಮತ್ತು ಜು.22ರಂದು ನಡೆಸಲು ತೀರ್ಮಾನಿಸಲಾಗಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ. ಇದೇ ವೇಳೆ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೂ ಸಿಹಿ ಸುದ್ದಿಯನ್ನು ಸಚಿವರು ನೀಡಿದ್ದಾರೆ.

ವಿಕಾಸಸೌಧದ ತಮ್ಮ ಕೊಠಡಿಯಲ್ಲಿ ಶಿಕ್ಷಣ ಇಲಾಖೆ ಅಧಿಕಾರಿಗಳು, ಶಿಕ್ಷಣ ತಜ್ಞರ ಜೊತೆ ಸಭೆ ನಡೆಸಿದ ಬಳಿಕ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಕೇವಲ ಎರಡು ದಿನ ಎಸ್​ಎಸ್​ಎಲ್​ಸಿ ಪರೀಕ್ಷೆ ನಡೆಯಲಿದೆ. ಜು.19ರಂದು ಸೋಮವಾರ ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ಹಾಗೂ ಜು. 22ರಂದು ಗುರುವಾರ ಭಾಷಾ ವಿಷಯಗಳ ಪರೀಕ್ಷೆ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಬಹುಆಯ್ಕೆ ಮಾದರಿಯಲ್ಲಿ(Objective type) ಪ್ರಶ್ನೆ ಪತ್ರಿಕೆಗಳು ಇರಲಿದ್ದು, ವಿದ್ಯಾರ್ಥಿಗಳಿಗೆ ಒಎಂಆರ್ ಶೀಟ್​​ ನೀಡಲಾಗುತ್ತದೆ. ಕಳೆದ ವರ್ಷದ ಪರೀಕ್ಷೆ ಹಬ್ಬದ ರೀತಿ ನಡೆದು ಭಯ ದೂರ ಮಾಡಲಾಗಿತ್ತು. ಮಕ್ಕಳ ಸುರಕ್ಷತೆಗೆ ಹೆಚ್ಚು ಒತ್ತು ನೀಡಲಾಗಿತ್ತು. ಈ ಬಾರಿಯೂ ಹಾಗೆಯೇ ಆಗಲಿದೆ. ಪರೀಕ್ಷೆಗಳು ಬೆಳಗ್ಗೆ 10.30ರಿಂದ 1.30ರವರೆಗೆ ನಡೆಯಲಿದೆ ಎಂದು ಸಚಿವರು ಮಾಹಿತಿ ನೀಡಿದರು.

8,76,581 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಭಾಗಿಯಾಗುತ್ತಿದ್ದು, 73,066 ಪರೀಕ್ಷಾ ಕೇಂದ್ರಗಳ ಕೊಠಡಿಗಳು ಇರಲಿವೆ. ಕಳೆದ ವರ್ಷ 8.46 ಲಕ್ಷ ವಿದ್ಯಾರ್ಥಿಗಳು ಇದ್ದರು ಎಂದು ಹೇಳಿದರು.

ಆರೋಗ್ಯ ಇಲಾಖೆ ವಿಸ್ತೃತವಾದ ಎಸ್ಒಪಿ ನೀಡಿದ ಹಿನ್ನೆಲೆ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ, ಖಜಾನೆ ಅಧಿಕಾರಿ, ಸಿಇಒಗಳ ಜೊತೆ ಮಾತನಾಡಿ ಸಹಕಾರ ಕೋರಲಾಗಿದೆ. ಕಳೆದ ವರ್ಷ ಆರು ದಿನ ಪರೀಕ್ಷೆ ಮಾಡಿದ್ದೆವು. ನಡೆಸಿದ ರೀತಿ‌ ಮೆಚ್ಚುಗೆ ಗಳಿಸಿದ್ದಲ್ಲದೆ, ಅವಘಡ ಉಂಟಾಗಿರಲಿಲ್ಲ. ವಿಶೇಷ ಸಂದರ್ಭದಲ್ಲಿ ಈ ಸಾರಿಯ ಪರೀಕ್ಷೆ ಮಾಡುತ್ತಿದ್ದೇವೆ. ಆತ್ಮವಿಶ್ವಾಸ, ಆತ್ಮಸ್ಥೈರ್ಯ ತುಂಬಲು ಪರೀಕ್ಷೆ‌ ನಡೆಸಲು ತೀರ್ಮಾನಿಸಿದ್ದೇವೆ ಎಂದು ವಿವರಿಸಿದರು.

ಎಸ್​ಎಸ್​ಎಲ್ಸಿ​ ಪರೀಕ್ಷೆ ಕುರಿತು ಸಚಿವ ಸುರೇಶ್​ ಕುಮಾರ್​ ಮಾಹಿತಿ

ಪರೀಕ್ಷಾ ಕೇಂದ್ರದ ಸುತ್ತ ನಿಷೇಧಾಜ್ಞೆ:

ಪರೀಕ್ಷಾ ಕೇಂದ್ರದ 200 ಮೀಟರ್ ಸುತ್ತ ನಿಷೇಧಾಜ್ಞೆ ಇರಲಿದೆ. ಎಲ್ಲರಿಗೂ ವ್ಯಾಕ್ಸಿನೇಷನ್‌ ಕಡ್ಡಾಯವಾಗಿದ್ದು, ಜು. 30ಕ್ಕೆ ಹಾಲ್ ಟಿಕೆಟ್ ನೀಡುತ್ತೇವೆ. ಮಕ್ಕಳಿಗೆ ಸರ್ಜಿಕಲ್ ಇಲ್ಲವೇ ಉತ್ತಮ ಬಟ್ಟೆಯ ಮಾಸ್ಕ್ ನೀಡಲು ಆರೋಗ್ಯ ಇಲಾಖೆ ಸೂಚಿಸಿದೆ. ರೋಗ ಸೂಚನೆ ಇದ್ದ ಮಕ್ಕಳಿಗೆ ಎನ್-95 ಮಾಸ್ಕ್ ನೀಡಲಾಗುವುದು. ಪ್ರತಿ ಕೇಂದ್ರದಲ್ಲಿ ಆರೋಗ್ಯ ತಪಾಸಣಾ ಕೇಂದ್ರವೂ ಇರಲಿದೆ.

ಪರೀಕ್ಷಾ ವೀಕ್ಷಕರಿಗೆ ಮಾಸ್ಕ್ ಕಡ್ಡಾಯ, ಫೇಸ್ ಶೀಲ್ಡ್ ಬಳಸಿದರೂ ಉತ್ತಮ. ಒಂದು ಕೊಠಡಿಯಲ್ಲಿ 12 ಮಕ್ಕಳಿಗೆ ಅವಕಾಶವಿರಲಿದೆ. ಸ್ಕೌಟ್ಸ್ ಆ್ಯಂಡ್ ಗೈಡ್​ನ ಸಹಕಾರವಿರಲಿದ್ದು, ಆಶಾ ಕಾರ್ಯಕರ್ತೆಯರು, ಅರೆ ವೈದ್ಯಕೀಯ ಸಿಬ್ಬಂದಿ ಇರುತ್ತಾರೆ. ಪೊಲೀಸ್ ಭದ್ರತೆ ಸಹ ಇರಲಿದೆ ಎಂದು ಸಚಿವರು ತಿಳಿಸಿದರು.

ಪೇಪರ್ ಲೀಕ್ ವದಂತಿ ಹಬ್ಬಿಸುವವರ ವಿರುದ್ಧ ಸೂಕ್ತ ಕ್ರಮ ಹಾಗೂ ಮುಂಚಿತವಾಗಿ ಎಚ್ಚರಿಕೆ ನೀಡಲು ಸ್ಥಳೀಯ ಆಡಳಿತಕ್ಕೆ ಸೂಚಿಸಲಾಗಿದೆ. ಪರೀಕ್ಷೆ ಸರಳವಾಗಿರಲಿದ್ದು, ಪಾವಿತ್ರ್ಯತೆಯೂ ಮುಖ್ಯ ಎಂದು ತಿಳಿಸಲಾಗಿದೆ.

ಎಲ್ಲಾ ಸಿಬ್ಬಂದಿ ಬೆಳಗ್ಗೆ 8.30ಕ್ಕೆ ಇರಲು ಸೂಚಿಸಲಾಗಿದೆ. ಆಕಸ್ಮಾತ್ ಯಾವುದೇ ಶಿಕ್ಷಕರಲ್ಲಿ ರೋಗ ಲಕ್ಷಣ ಕಂಡುಬಂದರೆ ಅವರನ್ನು ವಾಪಸ್ ಕಳಿಸಿ, ಪರ್ಯಾಯ ವ್ಯವಸ್ಥೆಗೆ ಸೂಚಿಸಲಾಗಿದೆ. ಬರುವಾಗ, ತೆರಳುವಾಗ ಮಕ್ಕಳಿಗೆ ಸ್ಯಾನಿಟೈಸ್​​ ಮಾಡಿಸುತ್ತೇವೆ. ಸಾಮಾಜಿಕ ಅಂತರಕ್ಕೂ ಸೂಕ್ತ ಕ್ರಮಕ್ಕೆ ಸೂಚಿಸಲಾಗಿದೆ. ಪರೀಕ್ಷೆ ಬರೆಯಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಮೊದಲ ಬಾರಿ ಪರೀಕ್ಷೆ ಬರೆಯುವ ವಿದ್ಯಾರ್ಥಿ ಎಂದೇ ಪರಿಗಣಿಸಿ ನಂತರದ ಅವಕಾಶ ನೀಡುತ್ತೇವೆ ಎಂದು ಸಚಿವ ಸುರೇಶ್​ಕುಮಾರ್​ ವಿವರಿಸಿದರು.

ದ್ವಿತೀಯ ಪಿಯು ಫಲಿತಾಂಶ:

ದ್ವಿತೀಯ ಪಿಯು ಫಲಿತಾಂಶವನ್ನು ಜುಲೈ 2ನೇ ವಾರ ಘೋಷಣೆ ಮಾಡಲಾಗುವುದು. ಒಂದು ಮಾನದಂಡದ ಮೇಲೆ ಫಲಿತಾಂಶ ಇರಲಿದ್ದು, ಯಾರಿಗೂ ಅನ್ಯಾಯವಾಗದಂತೆ ನೋಡಿಕೊಳ್ಳಲಾಗವುದು. ಪರೀಕ್ಷೆ ಬರೆಯಲು ಇಚ್ಛಿಸುವವರಿಗೂ ಅವಕಾಶ ನೀಡಲಾಗುವುದು ಎಂದು ಸಚಿವರು ಅಭಯ ನೀಡಿದ್ದಾರೆ.

Last Updated : Jun 28, 2021, 3:37 PM IST

ABOUT THE AUTHOR

...view details