ಕರ್ನಾಟಕ

karnataka

By ETV Bharat Karnataka Team

Published : Nov 27, 2023, 9:06 PM IST

ETV Bharat / state

ಗ್ಯಾರಂಟಿ ಯೋಜನೆಗಳು ಜನರಿಗೆ ತಲುಪಿಲ್ಲ ಎಂದು ಬಿಜೆಪಿ ಸಾಬೀತು ಪಡಿಸಿಲಿ: ಸಿದ್ದರಾಮಯ್ಯ ಸವಾಲು

ಗ್ಯಾರಂಟಿ ಯೋಜನೆಗಳು ರಾಜ್ಯದ ಎಲ್ಲ ಜನರನ್ನೂ ತಲುಪುತ್ತಿಲ್ಲ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಹೇಳಿಕೆ ನೀಡಿದ್ದಕ್ಕೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ

ಬಿಜೆಪಿ ನಾಯಕರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲ್​

ಬೆಂಗಳೂರು : ಬಿಜೆಪಿಯವರಿಗೆ ಸುಳ್ಳು ಹೇಳುವುದೇ ಬಂಡವಾಳವಾಗಿದೆ. ಸರ್ಕಾರದ ಗ್ಯಾರಂಟಿ ಯೋಜನೆಗಳು ಜನರಿಗೆ ತಲುಪಿಲ್ಲ ಎಂಬುದನ್ನು ಅವರು ಸಾಬೀತುಪಡಿಸಲಿ ಎಂದು ಬಿಜೆಪಿ ನಾಯಕರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲು​ ಹಾಕಿದ್ದಾರೆ.

ಗೃಹ ಕಚೇರಿ ಕೃಷ್ಣಾದಲ್ಲಿ ಜನಸ್ಪಂದನ ಕಾರ್ಯಕ್ರಮ ನಡೆಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳು ರಾಜ್ಯದ ಎಲ್ಲ ಜನರನ್ನೂ ತಲುಪುತ್ತಿಲ್ಲ ಎಂಬ ಪ್ರತಿಪಕ್ಷ ನಾಯಕ ಆರ್.ಅಶೋಕ್ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡುತ್ತಾ, ಕೇವಲ ಆರೋಪ ಮಾಡುವ ಉದ್ದೇಶದಿಂದ ಆರೋಪಿಸುತ್ತಿದ್ದಾರೆ. ಇದುವರೆಗೆ 1.17 ಕೋಟಿ ಮಹಿಳೆಯರು ಗೃಹಲಕ್ಷ್ಮಿ ಯೋಜನೆಯಡಿ ನೋಂದಣಿಯಾಗಿದೆ. ಇದರಲ್ಲಿ 1.14 ಲಕ್ಷ ಮಹಿಳೆಯರಿಗೆ ಸೌಲಭ್ಯ ತಲುಪಿದ್ದು, ಇನ್ನೂ 3 ಲಕ್ಷ ಮಹಿಳೆಯರಿಗೆ ಸೌಲಭ್ಯ ತಲುಪಿಸಲಾಗುವುದು ಎಂದರು.

ಡಿಸೆಂಬರ್ ಅಂತ್ಯದೊಳಗೆ ಗೃಹಲಕ್ಷ್ಮಿ ನೋಂದಾಯಿಸಿಕೊಂಡಿರುವವರಿಗೆ ಆಗಿರುವ ತಾಂತ್ರಿಕ ಸಮಸ್ಯೆಗಳನ್ನು ನೀಗಿಸಿ, ಹಣ ಒದಗಿಸಲು ಸೂಚನೆ ನೀಡಲಾಗಿದೆ. ಅನ್ನಭಾಗ್ಯ ಯೋಜನೆಯಡಿ 4.34 ಕೋಟಿ ಜನರಿಗೆ ಪ್ರತಿ ಮಾಹೆ 170 ರೂ. ನೀಡಲಾಗುತ್ತಿದೆ. ಇದುವರೆಗೂ 1.50 ಕೋಟಿ ಕುಟುಂಬಗಳಿಗೆ ಉಚಿತ ವಿದ್ಯುತ್ ನೀಡುತ್ತಿರುವುದು ಸುಳ್ಳು ಎನ್ನುವುದಾರೆ ಬಿಜೆಪಿಯವರು ಸಾಬೀತುಪಡಿಸಲಿ. ಈಗಾಗಲೇ ನಾನು ಗೃಹಲಕ್ಷ್ಮಿ ಯೋಜನೆಯಿಂದ ಹಣ ಪಡೆಯದೇ ಇರುವ ಮಹಿಳೆಯರನ್ನು ಅಂಗನವಾಡಿ ಕಾರ್ಯಕರ್ತೆಯರು ಬ್ಯಾಂಕ್​ಗಳಿಗೆ ಕರೆದುಕೊಂಡಿ ಹೋಗಿ ಆಧಾರ್​ ನಂಬರ್ ಅನ್ನು ಬ್ಯಾಂಕ್​ಗೆ ಲಿಂಕ್​ ಮಾಡಿಸಲು ಸೂಚನೆ ಕೊಟ್ಟಿದ್ದೇನೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಇವತ್ತು ಜನಸ್ಪಂದನ ಕಾರ್ಯಕ್ರಮದ ಮೂಲಕ ಎಲ್ಲರ ಅಹವಾಲುಗಳನ್ನು ಸ್ವೀಕರಿಸಿದ್ದೇನೆ. ಆಯಾಯ ಇಲಾಖೆಗಳ ಅಧಿಕಾರಿಗಳಿಗೆ ಅರ್ಜಿಗಳನ್ನು ಕಳುಹಿಸಿ 15 ದಿನಗಳ ಒಳಗೆ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಬರುತ್ತೇನೆ. ಅವರು 15 ದಿನಗಳ ಒಳಗೆ ಇತ್ಯರ್ಥ ಮಾಡಬೇಕು. ಮಾಡಿಲ್ಲ ಎಂದರೆ ಅಧಿಕಾರಿಗಳು ಸೂಕ್ತ ಕಾರಣಗಳನ್ನು ಕೊಡಬೇಕು. ಇಲ್ಲ ಅವರ ಮೇಲೆ ಶಿಸ್ತಿನ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಸಿಎಂ ಎಚ್ಚರಿಕೆ ನೀಡಿದರು.

ಬರ ಪರಿಹಾರ ಬಿಡುಗಡೆಗೆ ಕೇಂದ್ರದ ವಿಳಂಬ :ಕೇಂದ್ರ ಸರ್ಕಾರದಿಂದ ಬರ ಪರಿಹಾರ ಬಿಡುಗಡೆಯಲ್ಲಿ ವಿಳಂಬವಾಗುತ್ತಿರುವ ಬಗ್ಗೆ ಪ್ರತಿಕ್ರಿಯಿಸುತ್ತಾ, ರಾಜ್ಯದಿಂದ ಪಡೆದ ಹಣವನ್ನೇ ಕೇಂದ್ರ ಸರ್ಕಾರ ಪರಿಹಾರವಾಗಿ ನೀಡುತ್ತದೆ. ಈ ಪರಿಹಾರವನ್ನು ನೀಡಲು ಕೇಂದ್ರ ವಿಳಂಬ ನೀತಿ ತೋರುತ್ತಿದೆ. ಈ ವಿಳಂಬಕ್ಕೆ ಕಾರಣವೇನು? ಕರ್ನಾಟಕದಿಂದ ಸುಮಾರು 4 ಲಕ್ಷ ಕೋಟಿ ತೆರಿಗೆ ಹಣ ಕೇಂದ್ರಕ್ಕೆ ತಲುಪಿದರೂ, ರಾಜ್ಯಕ್ಕೆ ಪರಿಹಾರವಾಗಿ ಕೇವಲ 50 ರಿಂದ 60 ಸಾವಿರ ಕೋಟಿ ಬರುತ್ತದೆ ಎಂದು ಸಿಎಂ ಹೇಳಿದರು.

ಇದನ್ನೂ ಓದಿ :ವಿಕ್ಟೋರಿಯಾ ಆಸ್ಪತ್ರೆಯ ಅವ್ಯವಸ್ಥೆ ಮುಂದಿಟ್ಟ ಮಹಿಳೆ; ಪುತ್ರನ ಹೆಸರಿನ ಟ್ರಸ್ಟ್​ಗೆ ನಿವೇಶನ ಮಂಜೂರು ಮಾಡಿದ ಸಿಎಂ

ABOUT THE AUTHOR

...view details