ಬೆಂಗಳೂರು:ಬೊಮ್ಮನಹಳ್ಳಿ ಬೆಂಗಳೂರಿನ ಮತ್ತೊಂದು ಮಹತ್ವದ ವಿಧಾನಸಭೆ ಕ್ಷೇತ್ರ. ಸದ್ಯ ಇದು ಬಿಜೆಪಿಯ ಭದ್ರಕೋಟೆ. ಕ್ಷೇತ್ರದ ಚುನಾವಣಾ ಚಿತ್ರಣ ಹೇಗಿದೆ ನೋಡೋಣ.
ಬೊಮ್ಮನಹಳ್ಳಿ ಕ್ಷೇತ್ರವು ಬೆಂಗಳೂರು ಹೊರವಲಯದ ಐಟಿ ಕಾರಿಡಾರ್ನಲ್ಲಿರುವ ಕ್ಷೇತ್ರ. ವಲಸಿಗರೇ ಹೆಚ್ಚಿರುವ ಕ್ಷೇತ್ರವಿದು. ಬೊಮ್ಮನಹಳ್ಳಿ, ಎಚ್ಎಸ್ಆರ್ ಬಡಾವಣೆ, ಜರಗನಹಳ್ಳಿ, ಪುಟ್ಟೇನಹಳ್ಳಿ, ಬಿಳೇಕಹಳ್ಳಿ, ಹೊಂಗಸಂದ್ರ, ಮಂಗಮ್ಮನಪಾಳ್ಯ, ಅರಕೆರೆ ಸೇರಿದಂತೆ 8 ಬಿಬಿಎಂಪಿ ವಾರ್ಡ್ಗಳು ಕ್ಷೇತ್ರದ ವ್ಯಾಪ್ತಿಯಲ್ಲಿವೆ. 2008ರ ಕ್ಷೇತ್ರ ಮರುವಿಂಗಡನೆಯಲ್ಲಿ ಬೊಮ್ಮನಹಳ್ಳಿ ರಚನೆಯಾಯಿತು.
ಇಲ್ಲಿ ಮೂಲ ನಿವಾಸಿಗಳಿಗಿಂತ ವಲಸಿಗರ ಸಂಖ್ಯೆಯೇ ಹೆಚ್ಚು. ಕನ್ನಡೇತರ ಸಂಖ್ಯೆ ಗಣನೀಯವಾಗಿದೆ. ಬೊಮ್ಮನಹಳ್ಳಿ ಕ್ಷೇತ್ರದಲ್ಲಿ ರೆಡ್ಡಿ, ಒಕ್ಕಲಿಗ ಸಮುದಾಯದವರೇ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಾರೆ. ಬೊಮ್ಮನಹಳ್ಳಿ ಕ್ಷೇತ್ರ ರಚನೆಯಾದಾಗಿನಿಂದ ಬಿಜೆಪಿಯೇ ಪಾರುಪತ್ಯ ಸಾಧಿಸಿದೆ. ಮೂರು ಬಾರಿ ಗೆಲುವು ಸಾಧಿಸಿರುವ ಸತೀಶ್ ರೆಡ್ಡಿ ನಾಲ್ಕನೇ ಬಾರಿ ಕ್ಷೇತ್ರದಲ್ಲಿ ಸ್ಪರ್ಧಿಸಲು ಮುಂದಾಗಿದ್ದಾರೆ.
ಕ್ಷೇತ್ರದಲ್ಲಿ ಹತ್ತು ಹಲವು ಸಮಸ್ಯೆ:ಬೊಮ್ಮನಹಳ್ಳಿಯಲ್ಲಿ ಹತ್ತು ಹಲವು ಸಮಸ್ಯೆಗಳಿವೆ. ರಸ್ತೆ, ಕಿರಿದಾದ ರಸ್ತೆ, ಕಸ, ಟ್ರಾಫಿಕ್ ಜಾಮ್ ಹಾಗೂ ನೀರಿನ ಕೊರತೆ ಬಗೆಹರಿಯದ ಸಮಸ್ಯೆಗಳಾಗಿವೆ. ಬೊಮ್ಮನಹಳ್ಳಿಯಿಂದ ಬೇಗೂರು ರಸ್ತೆವರೆಗೆ ವಿಸ್ತರಣೆ ಕಾಮಗಾರಿ ಇನ್ನೂ ಮರೀಚಿಕೆಯಾಗೇ ಉಳಿದಿದೆ. ಪ್ರತೀ ವರ್ಷ ಸುರಿಯುವ ಮಳೆ ಕ್ಷೇತ್ರದ ಬಹುತೇಕ ಕಡೆ ಅವಾಂತರ ಸೃಷ್ಟಿಸುತ್ತಿದೆ. ಅದರಲ್ಲೂ ಹೆಚ್ಎಸ್ಆರ್ ಲೇಔಟ್ನಲ್ಲಿ ಹಲವು ಮನೆಗಳು ಜಲಾವೃತವಾಗುತ್ತಿವೆ. ರಾಜಕಾಲುವೆ ಒತ್ತುವರಿ ವ್ಯಾಕವಾಗಿದೆ. ಇದಕ್ಕೆ ಕಡಿವಾಣ ಹಾಕುವಲ್ಲಿ ಹಾಲಿ ಶಾಸಕರು ವಿಫಲರಾಗಿದ್ದಾರೆ ಎಂಬ ಆರೋಪಗಳಿವೆ.
ನೀರು ಈ ಕ್ಷೇತ್ರದ ಜನರ ದೊಡ್ಡ ಸಮಸ್ಯೆ. ದುಬಾರಿ ವೆಚ್ಚ ಮಾಡಿ ನೀರಿನ ಟ್ಯಾಂಕರ್ ಮೂಲಕ ನೀರು ತರಿಸಿಕೊಳ್ಳುವುದು ಕ್ಷೇತ್ರದಲ್ಲಿ ಬಹುತೇಕ ಕಡೆ ಕಂಡು ಬರುವ ದೃಶ್ಯ. ರಸ್ತೆ ಗುಂಡಿ, ಕಸದ ಸಮಸ್ಯೆ ಈ ಕ್ಷೇತ್ರದ ಜನರನ್ನು ಕೆಂಗೆಡಿಸಿದೆ. ಅಭಿವೃದ್ಧಿ ವಿಚಾರದಲ್ಲಿ ಹಾಲಿ ಶಾಸಕ ಗಣನೀಯ ಪ್ರಗತಿ ಮಾಡಿಲ್ಲ ಎಂಬುದು ಕೆಲವರ ಅಸಮಾಧಾನ. ಎಚ್ಎಸ್ಆರ್ ಲೇಔಟ್ನ ಆಟದ ಮೈದಾನವನ್ನು ಕ್ರೀಡಾಂಗಣವಾಗಿಸಲು ಹೊರಟಾಗ ಭಾರಿ ಪ್ರಮಾಣದ ವಿರೋಧ ವ್ಯಕ್ತವಾಗಿತ್ತು. ಆಗ ಎದುರಾಗಿದ್ದ ಪ್ರತಿರೋಧದ ಕಿಡಿ ಇನ್ನೂ ಹಾಗೇ ಇದೆ.
ಕ್ಷೇತ್ರದ ಚುನಾವಣಾ ಅಖಾಡ ಹೇಗಿದೆ?:ಸತೀಶ್ ರೆಡ್ಡಿ ಕ್ಷೇತ್ರದಲ್ಲಿ ಸತತ ಮೂರನೇ ಬಾರಿ ಗೆಲುವು ಸಾಧಿಸಿದ್ದು, ಇದೀಗ ನಾಲ್ಕನೇ ಬಾರಿ ಕ್ಷೇತ್ರದಲ್ಲಿ ಕಣಕ್ಕಿಳಿಯಲು ಮುಂದಾಗಿದ್ದಾರೆ. ಈ ಬಾರಿ ಕ್ಷೇತ್ರ ಬದಲಾವಣೆಯ ಆತಂಕವೂ ಎದುರಾಗಿದೆ. ಆದರೆ ಸತೀಶ್ ರೆಡ್ಡಿ ಬೊಮ್ಮನಹಳ್ಳಿಯಲ್ಲೇ ನಿಲ್ಲಲು ನಿರ್ಧರಿಸಿದ್ದಾರೆ.