ಬೆಂಗಳೂರು: ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿಯಾದ ನಂತರ ಜಂಟಿ ಹೋರಾಟ ಮಾಡುತ್ತಿರುವ ಮಾಜಿ ಸಿಎಂಗಳಾದ ಹೆಚ್. ಡಿ. ಕುಮಾರಸ್ವಾಮಿ ಹಾಗೂ ಬಿ ಎಸ್ ಯಡಿಯೂರಪ್ಪ ತಪ್ಪು ತಿಳಿದುಕೊಂಡಿದ್ದಾರೆ. ಕಾವೇರಿ ಹೋರಾಟವನ್ನು ತಂದು, ನಾವು ಎಷ್ಟೋ ಗೆಲುವು ಸಾಧಿಸಬಹುದು ಎಂದುಕೊಂಡಿದ್ದಾರೆ. ಆದ್ರೆ ಅದು ಸಾಧ್ಯವಿಲ್ಲ. ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಮತಗಳು ಬಿಜೆಪಿಗೆ ಅಥವಾ ಬಿಜೆಪಿ ಮತಗಳು ಜೆಡಿಎಸ್ಗೆ ಬರುವುದಿಲ್ಲ. ಇವರ ಮೈತ್ರಿಯಿಂದ ಕಾಂಗ್ರೆಸ್ಗೆ ಅನುಕೂಲವಾಗಲಿದೆ ಎಂದು ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯ ಹೆಚ್ ವಿಶ್ವನಾಥ್ ಹೇಳಿದ್ದಾರೆ.
ನಗರದ ಖಾಸಗಿ ಹೋಟೆಲ್ನಲ್ಲಿ ಇಂದು ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ದೇಶದ ಜನತೆಗೆ ಕಾವೇರಿ ಸಮಸ್ಯೆ ಅರ್ಥ ಆಗಿದೆ. ಯಾವ ಪುರುಷಾರ್ಥಕ್ಕಾಗಿ ಬಂದ್ ಮಾಡಬೇಕು. ಕರ್ನಾಟಕ ಬಂದ್ ಅನವಶ್ಯಕ. ಲೋಕಸಭೆ ಚುನಾವಣೆ ದೃಷ್ಟಿಯಿಂದ ಮೈತ್ರಿ ಪ್ರತಿಭಟನೆ ನಡೆಯುತ್ತಿದೆ. ಕುಮಾರಸ್ವಾಮಿ, ಯಡಿಯೂರಪ್ಪನವರು ಮುಖ್ಯಮಂತ್ರಿಗಳಾಗಿದ್ದಾಗ ನೀರು ಬಿಟ್ಟಿಲ್ವೇ? ಬಿಜೆಪಿಯ 25 ಸಂಸದರಿದ್ದಾರೆ. ನಿಮಗೆ ಚುನಾವಣೆ ಮುಖ್ಯವೇ ಹೊರತು ನೀರು ಮುಖ್ಯ ಅಲ್ಲ. ಪ್ರಧಾನಿ ಮಧ್ಯಸ್ಥಿಕೆಯಲ್ಲಿ ಕುಳಿತು ಬಗೆಹರಿಸಬೇಕು ಎಂದು ಸಲಹೆ ನೀಡಿದರು.
ಪ್ರಧಾನಿ ಮಧ್ಯಸ್ಥಿಕೆ ವಹಿಸಬೇಕು ಎಂಬ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಹೇಳಿಕೆಯನ್ನು ಸ್ವಾಗತಿಸುತ್ತೇನೆ. ಪ್ರತಿಭಟನೆ ಮಾಡಲಿ, ಬಿಜೆಪಿ ಜೆಡಿಎಸ್ ದ್ವಂದ್ವ ನೀತಿ ಅನುಸರಿಸುತ್ತಿದೆ. ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರಿಗೋಸ್ಕರ ನೀರು ಬಿಟ್ಟಿಲ್ಲ. ಕಾವೇರಿ ಸಮಿತಿ ಆದೇಶದಂತೆ ನೀರು ಬಿಡಲಾಗುತ್ತಿದೆ. ಯಾರ ಕಾಲದಲ್ಲಿ ನಿರ್ವಹಣಾ ಮಂಡಳಿ ಮಾಡಿದರೆಂದು ಜನರಿಗೆ ಗೊತ್ತು. ಪಕ್ಷ ಹೊರತುಪಡಿಸಿ ಮಾತನಾಡಬೆಕು. ನೀರು ಪಕ್ಷಗಳದ್ದಲ್ಲ, ಜನರದ್ದು. ಕಾವೇರಿ ವಿಚಾರದಲ್ಲಿ ರಾಜಕೀಯ ಬೇಡ. ಪ್ರಧಾನಮಂತ್ರಿಗಳು ಮಧ್ಯಸ್ಥಿಕೆ ಮಾಡಬೇಕು ಎಂದು ಹೆಚ್ ವಿಶ್ವನಾಥ್ ಆಗ್ರಹಿಸಿದರು.
ಬಿಜೆಪಿ ಸಂಸದರು ಏನು ಮಾಡುತ್ತಿದ್ದಾರೆ. ಅವರು ಧರಣಿಗೆ ಕುಳಿತುಕೊಳ್ಳಬೇಕು. ರಾಜಕೀಯ ಡ್ರಾಮಾ ಬಿಟ್ಟು ನೀರನ್ನು ಉಳಿಸಿಕೊಳ್ಳುವುದು ಹೇಗೆ ಎಂಬುದನ್ನು ತಿಳಿಯಬೇಕು. ಎರಡೂ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಕುಳಿತು ಪರಿಹಾರ ಕಂಡುಕೊಳ್ಳಬೇಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.