ಕರ್ನಾಟಕ

karnataka

By ETV Bharat Karnataka Team

Published : Jan 6, 2024, 3:13 PM IST

Updated : Jan 6, 2024, 7:39 PM IST

ETV Bharat / state

ಮಲ್ಲೇಶ್ವರದ ಬ್ರಿಗೇಡ್ ಶಾಲೆಗೆ ₹ 1 ಲಕ್ಷ ವೆಚ್ಚ ವಿಧಿಸಿದ ಹೈಕೋರ್ಟ್

ಶಿಕ್ಷಣ ಸಂಸ್ಥೆಯ ನಿಯಮಗಳಿಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆಂದು ವಿದ್ಯಾರ್ಥಿನಿಗೆ ತರಗತಿ ಹಾಜರಾಗಲು ಅವಕಾಶ ನೀಡದ ಕಾರಣ ಶಾಲೆಯೊಂದಕ್ಕೆ ಹೈಕೋರ್ಟ್ ವೆಚ್ಚ ವಿಧಿಸಿದೆ.

ಮಲ್ಲೇಶ್ವರದ ಬ್ರೀಗೇಡ್ ಶಾಲೆಗೆ ವೆಚ್ಚ ವಿಧಿಸಿದ ಹೈಕೋರ್ಟ್
ಮಲ್ಲೇಶ್ವರದ ಬ್ರೀಗೇಡ್ ಶಾಲೆಗೆ ವೆಚ್ಚ ವಿಧಿಸಿದ ಹೈಕೋರ್ಟ್

ಬೆಂಗಳೂರು: ಅಧ್ಯಯನ ಮಾಡುತ್ತಿರುವ ಶಿಕ್ಷಣ ಸಂಸ್ಥೆಯ ಕೆಲ ನಿಯಮಗಳ ವಿರುದ್ಧವಾಗಿ ನಡೆದುಕೊಂಡಿದ್ದಾರೆ ಎಂದು ಆರೋಪಿಸಿ 9ನೇ ತರಗತಿಯ ವಿದ್ಯಾರ್ಥಿನಿಗೆ ತರಗತಿಗಳಿಗೆ ಹಾಜರಾಗಲು ಅವಕಾಶ ನೀಡದ ನಗರದ ಮಲ್ಲೇಶ್ವರದ ಬ್ರಿಗೇಡ್ ಶಾಲೆಗೆ ಹೈಕೋರ್ಟ್ 1 ಲಕ್ಷ ರೂ.ಗಳ ವೆಚ್ಚ ವಿಧಿಸಿದೆ.

ಈ ಸಂಬಂಧ ಮಗುವಿನ ಪೋಷಕರು ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠ ವೆಚ್ಚ ವಿಧಿಸಿದೆ. ಅಲ್ಲದೆ, ಮುಂದಿನ ಎರಡು ವಾರಗಳಲ್ಲಿ ವೆಚ್ಚದ ಮೊತ್ತವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಪಾವತಿಸಬೇಕು ಎಂದು ನಿರ್ದೇಶನ ನೀಡಿ ಅರ್ಜಿ ಇತ್ಯರ್ಥಪಡಿಸಿದೆ. ವಾದ ಪ್ರತಿವಾದ ಆಲಿಸಿದ ನ್ಯಾಯಪೀಠ, 9 ಮತ್ತು 10ನೇ ತರಗತಿಗಳು ಶಿಕ್ಷಣದ ಪ್ರಮುಖ ಘಟ್ಟಗಳಾಗಿವೆ ಎಂಬುದಾಗಿ ತಿಳಿದಿರುವ ಪೋಷಕರು ಯಾವುದೇ ತರಗತಿಯನ್ನು ತಪ್ಪಿಸಿಕೊಳ್ಳದಂತೆ ನೋಡಿಕೊಳ್ಳುತ್ತಿರುತ್ತಾರೆ.

ಆದರೆ, ಶಾಲಾ ಆಡಳಿತ ಮಂಡಳಿಯ ನಡುವಳಿಕೆ ದುರದೃಷ್ಟಕರ. ಇದರಿಂದಾಗಿ 50ಕ್ಕೂ ಹೆಚ್ಚು ವಿದ್ಯಾರ್ಥಿಗಳ ಪೋಷಕರು ಆತಂಕಕ್ಕೆ ಒಳಗಾಗಿರುತ್ತಾರೆ. ಈ ನಷ್ಟವನ್ನು ಹಣದ ಮೂಲಕ ಅಳೆಯಲು ಸಾಧ್ಯವಿಲ್ಲ. ಆದರೆ, ಅಂತಹ ವರ್ತನೆ ತೋರಿದವರನ್ನು ಹಗುರವಾಗಿ ನೋಡುವುದು ಸರಿಯಲ್ಲ. ಇಂತಹ ಶಿಕ್ಷಣ ಸಂಸ್ಥೆಗಳಿಗೆ ಎಚ್ಚರಿಕೆ ಸಂದೇಶ ರವಾನೆ ಮಾಡಬೇಕು ಎಂದು ಪೀಠ ಅಭಿಪ್ರಾಯ ಪಟ್ಟಿತು.

ಅಲ್ಲದೆ, ಪ್ರತಿವಾದಿ ಶಾಲೆ ಅರ್ಜಿದಾರರ ಮಗು ಹಾಗೂ ಇತರೆ ಮಕ್ಕಳ ಪೋಷಕರಿಂದ ಮುಚ್ಚಳಿಕೆ ಸಲ್ಲಿಸದ ಕಾರಣ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ತರಗತಿಗಳಿಂದ ವಂಚಿತರಾಗಿದ್ದಾರೆ. ಹೀಗಿರುವಾಗ ಅರ್ಜಿದಾರರ ಪರ ವಕೀಲರ ಹೇಳಿಕೆ ದಾಖಲಿಸಿಕೊಂಡು ನ್ಯಾಯಾಂಗ ನಿಂದನೆ ಅರ್ಜಿಯನ್ನು ಇತ್ಯರ್ಥ ಪಡಿಸಿದಲ್ಲಿ ನ್ಯಾಯ ಒದಗಿಸಿದಂತಾಗುವುದಿಲ್ಲ.
ಜತೆಗೆ ಭವಿಷ್ಯದಲ್ಲಿ ಪ್ರಕರಣದಲ್ಲಿ ಪ್ರತಿವಾದಿಯಾಗಿರುವ ಶಿಕ್ಷಣ ಸಂಸ್ಥೆ ಮಾತ್ರವಲ್ಲದೆ, ಇತರೆ ಯಾವುದೇ ಶಿಕ್ಷಣ ಸಂಸ್ಥೆಯು ಮಕ್ಕಳ ಭವಿಷ್ಯದೊಂದಿಗೆ ಆಟವಾಡುವುದಕ್ಕೆ ಮುಂದಾಗಬಾರದು, ಜತೆಗೆ ಮಕ್ಕಳು ಮತ್ತು ಪೋಷಕರಿಗೆ ಆತಂಕವನ್ನುಂಟು ಮಾಡಬಾರದು ಎಂದು ತಿಳಿಸಿ 1 ಲಕ್ಷ ರೂ.ಗಳ ವೆಚ್ಚ ವಿಧಿಸಿ ಆದೇಶಿಸಿದೆ. ಅಲ್ಲದೆ, ಮುಂದಿನ ಎರಡು ವಾರಗಳಲ್ಲಿ ವೆಚ್ಚದ ಮೊತ್ತವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಜಮೆ ಮಾಡಬೇಕು ಎಂದು ನಿರ್ದೇಶನ ನೀಡಿ ಅರ್ಜಿ ಇತ್ಯರ್ಥ ಪಡಿಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಪ್ರಕರಣ ಸಂಬಂಧ ವಿಚಾರಣೆ ನಡೆಸಿ ವಿದ್ಯಾರ್ಥಿನಿಗೆ ತರಗತಿಗಳ ಹಾಜರಿಗೆ ಅವಕಾಶ ನೀಡುವಂತೆ ಸೂಚನೆ ನೀಡಿದ್ದ ಆದೇಶವನ್ನು ಶಾಲಾ ಆಡಳಿತ ಮಂಡಳಿಯ ಗಮನಕ್ಕೆ ತಂದಿದ್ದರೂ, ಅರ್ಜಿದಾರರ ಮಗಳಿಗೆ ತರಗತಿಗೆ ಹಾಜರಾಗಲು ಅವಕಾಶ ನೀಡಿರಲಿಲ್ಲ ಎಂದು ತಿಳಿಸಿದರು. ಈ ಸಂಬಂಧ ನ್ಯಾಯಾಲಯ ನೀಡಿದ್ದ ಮಧ್ಯಂತರ ಆದೇಶವನ್ನು ಶಾಲಾ ಆಡಳಿತ ಮಂಡಳಿಗೆ ತಿಳಿಸಲಾಗಿದ್ದರೂ, ತರಗತಿಗಳಿಗೆ ಹಾಜರಾಗುವುದಕ್ಕೆ ಅವಕಾಶ ನೀಡಿರಲಿಲ್ಲ ಎಂದು ಪೀಠಕ್ಕೆ ತಿಳಿಸಿದರು.

ಪ್ರತಿವಾದಿ ಶಾಲೆಯ ಪರ ವಕೀಲರು, ನ್ಯಾಯಾಲಯದ ಆದೇಶ ಗಮನಕ್ಕೆ ಬಂದ ತಕ್ಷಣ ಶಾಲಾ ಆಡಳಿತ ಮಂಡಳಿ ಬಾಲಕಿಗೆ ತರಗತಿಗಳಿಗೆ ಹಾಜರಾಗಲು ಅವಕಾಶ ಕಲ್ಪಿಸಲಾಗಿದೆ. ಬೇಷರತ್ತಾಗಿ ಕ್ಷಮೆಯಾಚನೆ ಮಾಡಲಾಗಿದೆ. ಜತೆಗೆ, ಯಾವುದೇ ತೊಂದರೆ ಇಲ್ಲದಂತೆ ವಿದ್ಯಾರ್ಥಿನಿ ತರಗತಿಯಲ್ಲಿ ಮುಂದುವರೆಯಬಹುದಾಗಿದೆ ಎಂದು ವಿವರಿಸಿದರು. ಅಲ್ಲದೆ, ತರಗತಿಗೆ ಹಾಜರಾಗಲು ಅವಕಾಶ ನೀಡದ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಆದ ಶೈಕ್ಷಣಿಕ ನಷ್ಟವನ್ನು ಸರಿದೂಗಿಸಲು ಗಣನೀಯವಾಗಿ ತರಗತಿಗಳನ್ನು ನಡೆಸಲಾಗುವುದು. ಅಗತ್ಯವಿದ್ದಲ್ಲಿ ಹೆಚ್ಚುವರಿ ತರಗತಿಯನ್ನು ನಡೆಸಿ ಕಿರುಪರೀಕ್ಷೆಗಳನ್ನು ನಡೆಸಿ ಮುಖ್ಯ ಪರೀಕ್ಷೆಗೆ ಅಡ್ಡಿಯಾಗದಂತೆ ವ್ಯವಸ್ಥೆ ಮಾಡಿ ಪರಿಹಾರ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಪೀಠಕ್ಕೆ ವಿವರಿಸಿದರು.

ಪ್ರಕರಣದ ಹಿನ್ನೆಲೆ ಏನು?ಪ್ರಕರಣದಲ್ಲಿ ಅರ್ಜಿದಾರರ ಪುತ್ರಿ ಶಾಲೆಯ ನಿಯಮಗಳ ವಿರುದ್ಧ ನಡೆದುಕೊಂಡಿದ್ದಾಳೆ ಎಂಬ ಆರೋಪ ಕೇಳಿಬಂದಿತ್ತು. ಈ ಸಂಬಂಧ ಶಾಲೆಯು 10 ಸಾವಿರ ವೆಚ್ಚ ಮತ್ತು ಮುಚ್ಚಳಿಕೆ ನೀಡಬೇಕು ಎಂದು ವಿದ್ಯಾರ್ಥಿನಿಗೆ ಸೂಚನೆ ನೀಡಿತ್ತು. ವೆಚ್ಚ ಮತ್ತು ಮುಚ್ಚಳಿಕೆ ನೀಡದ ಹಿನ್ನೆಲೆಯಲ್ಲಿ ತರಗತಿಗಳ ಹಾಜರಿಗೆ ಅವಕಾಶ ನೀಡಿರಲಿಲ್ಲ. ಇದನ್ನು ಪ್ರಶ್ನಿಸಿ ವಿದ್ಯಾರ್ಥಿನಿಯ ಪೋಷಕರು ಹೈಕೋರ್ಟ್ ಮೆಟ್ಟಿಲೇರಿದ್ದರು.

ಇದನ್ನೂ ಓದಿ:ಮಾಲ್ ಆಫ್ ಏಷ್ಯಾ ಮುಂದೆ ಸಂಚಾರ ನಿಯಂತ್ರಣಕ್ಕೆ ಕ್ರಮ : ಹೈಕೋರ್ಟ್​ಗೆ ಮಾಹಿತಿ

Last Updated : Jan 6, 2024, 7:39 PM IST

ABOUT THE AUTHOR

...view details