ಬೆಂಗಳೂರು:ಕೆಂಪು ವಲಯ ಜಿಲ್ಲೆಗಳಲ್ಲಿ ಗಾರ್ಮೆಂಟ್ಸ್ ಘಟಕಗಳನ್ನು ತೆರೆಯಲು ರಾಜ್ಯ ಸರ್ಕಾರ ಇದೀಗ ಅನುಮತಿಸಿದೆ. ಈ ಸಂಬಂಧ ರಾಜ್ಯ ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್ ಆದೇಶ ಹೊರಡಿಸಿದ್ದಾರೆ.
ಕೆಂಪು ವಲಯ ಜಿಲ್ಲೆಗಳಲ್ಲೂ ಗಾರ್ಮೆಂಟ್ಸ್ ಘಟಕ ಆರಂಭಿಸಲು ಹಸಿರು ನಿಶಾನೆ - ರಾಜ್ಯ ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್ ಆದೇಶ
ಕೆಂಪು ವಲಯದಲ್ಲಿ ಗಾರ್ಮೆಂಟ್ಸ್ ತೆರೆಯುವಂತೆ ಸರ್ಕಾರ ಸೂಚಿಸಿದ್ದು ಇದರಿಂದ ಬೆಂಗಳೂರಿನಲ್ಲಿರುವ ನೂರಾರು ನೌಕರರು ನಿಟ್ಟುಸಿರು ಬಿಡುವಂತಾಗಿದೆ. ಲಾಕ್ಡೌನ್ ಹಿನ್ನೆಲೆ ಹಾಗೂ ಸುರಕ್ಷತೆ ಸಲುವಾಗಿ ಇಷ್ಟು ದಿನಗಳ ಕಾಲ ಗಾರ್ಮೆಂಟ್ಸ್ ಬಂದ್ ಮಾಡಲಾಗಿತ್ತು.

ಕಂಟೇನ್ಮೆಂಟ್ ಪ್ರದೇಶ ಹೊರಗಿರುವ ಕೆಂಪು ವಲಯಗಳಲ್ಲೂ ಗಾರ್ಮೆಂಟ್ಸ್ ಘಟಕಗಳನ್ನು ತೆರೆಯಬಹುದಾಗಿದೆ ಎಂದು ಸೂಚನೆ ನೀಡಲಾಗಿದೆ. ರಫ್ತು ಬದ್ಧತೆ ಹೊಂದಿರುವ ಉಡುಪು ಘಟಕಗಳು 33% ಕಾರ್ಮಿಕರೊಂದಿಗೆ ಕಾರ್ಯನಿರ್ವಹಿಸಲು ಅವಕಾಶ ನೀಡಲಾಗಿದೆ. ಜೊತೆಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ.
ಸಾಮಾಜಿಕ ಅಂತರ, ಸ್ಯಾನಿಟೈಸರ್ ಬಳಕೆ, ಮಾಸ್ಕ್ ಕಡ್ಡಾಯವಾಗಿದೆ. ಆ ಮೂಲಕ ಗಾರ್ಮೆಂಟ್ಸ್ ಘಟಗಳ ನೌಕರರು ನಿಟ್ಟುಸಿರು ಬಿಡುವಂತಾಗಿದೆ. ಬೆಂಗಳೂರಿನಲ್ಲಿ ನೂರಾರು ಗಾರ್ಮೆಂಟ್ಸ್ ಕಾರ್ಖಾನೆಗಳಿದ್ದು, ಇದೀಗ ಕೆಲ ನಿಬಂಧನೆಗಳೊಂದಿಗೆ ಕಾರ್ಯನಿರ್ವಹಿಸಲು ಅನುಮತಿ ನೀಡಲಾಗಿದೆ.