ಬೆಂಗಳೂರು :ರಾಜ್ಯದಲ್ಲಿ ಕಟ್ಟಡ ನಿರ್ಮಾನ ಮಾಡುವವರಿಗೆ ಮರಳಿನ ಅಭಾವ ನೀಗಿಸಲು ಹಾಗೂ ಜನ ಸಾಮಾನ್ಯರಿಗೆ ಸುಲಭ ಮತ್ತು ಕೈಗೆಟುವ ದರದಲ್ಲಿ ಎಂ. ಸ್ಯಾಂಡ್ ಪೂರೈಸಲು ರಾಜ್ಯ ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಂಡಿದೆ. ಸರ್ಕಾರದ ನಿಯಮಗಳನ್ನು ಪರಿಪಾಲಿಸುವಂತೆ ತಮ್ಮ ಉದ್ಯಮ ವಲಯಕ್ಕೆ ಸೂಚಿಸಲಾಗಿದೆ ಎಂದು ಫೆಡರೇಷನ್ ಆಫ್ ಕರ್ನಾಟಕ ಕ್ವಾರಿ ಮತ್ತು ಸ್ಟೋನ್ ಕ್ರಷರ್ ಓನರ್ಸ್ ಅಸೊಸಿಯೇಷನ್ ಮತ್ತು ಬೆಂಗಳೂರಿನ ಫೆಡರೇಷನ್ ಆಫ್ ಕರ್ನಾಟಕ ಗ್ರಾನೈಟ್ ಮತ್ತು ಸ್ಟೋನ್ ಇಂಡಸ್ಟ್ರಿ ಹೇಳಿದೆ.
ಇಂದು ಪ್ರೆಸ್ ಕ್ಲಬ್ನಲ್ಲಿ ಜಂಟಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಫೆಡರೇಷನ್ ಆಫ್ ಕರ್ನಾಟಕ ಕ್ವಾರಿ ಮತ್ತು ಸ್ಟೋನ್ ಕ್ರಷರ್ ಓನರ್ಸ್ ಅಸೋಸಿಯೇಷನ್ ಅಧ್ಯಕ್ಷ ಡಾ. ರವೀಂದ್ರ ಶೆಟ್ಟಿ ಬಜಗೋಳಿ, ಬೆಂಗಳೂರಿನ ಫೆಡರೇಷನ್ ಆಫ್ ಕರ್ನಾಟಕ ಗ್ರಾನೈಟ್ ಮತ್ತು ಸ್ಟೋನ್ ಇಂಡಸ್ಟ್ರಿ ಅಧ್ಯಕ್ಷ ಬಿ. ಉಮಾಶಂಕರ್, ಸರ್ಕಾರದ ನಿಯಮಗಳಿಂದ ರಾಜಧನ ಸೋರಿಕೆ ತಡೆಗಟ್ಟಿ, ಕಾನೂನುಬದ್ಧ ಗಣಿಗಾರಿಕೆ ನಡೆಸಲು ಮತ್ತಷ್ಟು ಅವಕಾಶ ಕಲ್ಪಿಸಿದಂತಾಗಿದೆ ಎಂದರು.
ಡಾ. ರವೀಂದ್ರ ಶೆಟ್ಟಿ ಬಜಗೋಳಿ ಮಾತನಾಡಿ 2016 ಕ್ಕಿಂತ ಮುಂಚೆ ಗಣಿಗುತ್ತಿಗೆಗೆ ಅರ್ಜಿ ಸಲ್ಲಿಸಿ ಬಾಕಿ ಇರುವ 5,000 ದಷ್ಟು ಅರ್ಜಿಗಳಿಗೆ ಕಾನೂನು ಪ್ರಕಾರ ಗಣಿಗುತ್ತಿಗೆ ಅವಕಾಶ ಕಲ್ಪಿಸಲಾಗಿದೆ. ಜೊತೆಗೆ ಎಂ-ಸ್ಯಾಂಡ್ ಕ್ರಷರ್ ಘಟಕ ಪ್ರಾರಂಭಿಸಲು ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅನುಮೋದನೆ ಪಡೆಯಲಾಗಿದೆ. ಎಂ-ಸ್ಯಾಂಡ್ ಕ್ರಷರ್ ಘಟಕ ಹೊಂದಿರುವವರು ಸದರಿ ಕ್ರಷರ್ ಘಟಕದಿಂದ 30 ಕಿ.ಮೀ. ವ್ಯಾಪ್ತಿಯೊಳಗೆ ಎಂ- ಸ್ಯಾಂಡ್ ಉತ್ಪಾದಿಸುವುದಕ್ಕೆ ಹೊಸದಾಗಿ ಗಣಿಗುತ್ತಿಗೆ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಇದರಿಂದ ಎಂ.ಸ್ಯಾಂಡ್ ಸುಗಮವಾಗಿ ದೊರೆಯಲು ಸಹಕಾರಿಯಾಗಲಿದ್ದು, ಜೊತೆಗೆ ಸರ್ಕಾರದ ನಿರ್ಮಾಣ ಕೆಲಸಗಳು, ಜನ ಸಾಮಾನ್ಯರಿಗೆ ಮನೆ ಕಟ್ಟಿಕೊಳ್ಳಲು ಸಹ ನೆರವಾಗಲಿದೆ ಎಂದು ಹೇಳಿದರು.