ಕರ್ನಾಟಕ

karnataka

ETV Bharat / state

ಪರೀಕ್ಷೆ ಸಮಯ, ರಾತ್ರಿ ವೇಳೆ ಧ್ವನಿವರ್ಧಕ ಬಳಸಬೇಡಿ: ಸುರೇಶ್ ಕುಮಾರ್ ಮನವಿ

ದ್ವಿತೀಯ ಪಿಯುಸಿ ಪರೀಕ್ಷೆ ಹಿನ್ನಲೆ - ವಿದ್ಯಾರ್ಥಿಗಳಿಂದ ಪರೀಕ್ಷೆಗೆ ಸಿದ್ಧತೆ - ರಾತ್ರಿ ವೇಳೆ ಧ್ವನಿವರ್ಧಕ ಬಳಸಬೇಡಿ ಎಂದು ಮಾಜಿ ಸಚಿವ ಸುರೇಶ್​​ ಕುಮಾರ್ ಮನವಿ

By

Published : Mar 12, 2023, 9:40 PM IST

Etv former-minister-suresh-kumar-requested-not-to-use-loudspeaker-at-night
ಪರೀಕ್ಷೆ ಸಮಯ, ರಾತ್ರಿ ವೇಳೆ ಧ್ವನಿವರ್ಧಕ ಬಳಸಬೇಡಿ: ಸುರೇಶ್ ಕುಮಾರ್ ಮನವಿ

ಬೆಂಗಳೂರು :ರಾತ್ರಿ ತುಂಬಾ ಹೊತ್ತು ಧಾರ್ಮಿಕ, ರಾಜಕೀಯ ಕಾರ್ಯಕ್ರಮಗಳನ್ನು ನಡೆಸುವುದರಿಂದ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುವ ಮಕ್ಕಳಿಗೆ ತೊಂದರೆ ಆಗುತ್ತಿದೆ. ತುಂಬಾ ಹೆಚ್ಚಿನ ಮಟ್ಟದ ಧ್ವನಿವರ್ಧಕ ಉಪಯೋಗದಿಂದಲೂ ಪರೀಕ್ಷೆಗೆ ಓದಿಕೊಳ್ಳುವ ಮಕ್ಕಳು ಬಹಳ ಕಿರಿಕಿರಿ ಅನುಭವಿಸುತ್ತಿದ್ದಾರೆ. ಹಾಗಾಗಿ ರಾತ್ರಿ ವೇಳೆ ಧ್ವನಿವರ್ಧಕ ಬಳಕೆ ನಿಯಂತ್ರಿಸಿ, ಮಕ್ಕಳು ಪರೀಕ್ಷೆಗೆ ಸಿದ್ದತೆ ನಡೆಸಲು ಸಹಕರಿಸಿ ಎಂದು ಮಾಜಿ ಸಚಿವ ಸುರೇಶ್ ಕುಮಾರ್ ಮನವಿ ಮಾಡಿದ್ದಾರೆ.

ಇದು ರಾಜ್ಯದ ವಿವಿಧ ತರಗತಿಗಳ ವಿದ್ಯಾರ್ಥಿಗಳಿಗೆ ಪರೀಕ್ಷಾ ಸಮಯ. ಇದೀಗ ಪಿಯುಸಿ ಪರೀಕ್ಷೆ ನಡೆಯುತ್ತಿದೆ. ಸಿಬಿಎಸ್‌ಇ ಪದ್ಧತಿಯ ತರಗತಿಗಳ ಪರೀಕ್ಷೆಗಳು ನಡೆಯುತ್ತಿವೆ. ಇನ್ನು ಕೆಲವೇ ದಿನಗಳಲ್ಲಿ ಎಸ್ಎಸ್ಎಲ್​ಸಿ ಪರೀಕ್ಷೆ ಪ್ರಾರಂಭವಾಗುತ್ತದೆ. ಎಲ್ಲಾ ಮಕ್ಕಳು ಅವರವರದೇ ಆದ ಆತಂಕದಿಂದ ಇರುತ್ತಾರೆ. ಪರೀಕ್ಷೆಗಳಿಗೆ ಸಂಬಂಧಿಸಿದ ಸಿದ್ಧತೆಯನ್ನು ಬಹಳ ಗಂಭೀರವಾಗಿ ಮಾಡಿಕೊಳ್ಳುತ್ತಿರುತ್ತಾರೆ. ಅವರ ಕನಸುಗಳನ್ನು ನನಸು ಮಾಡಲು ಏನೆಲ್ಲಾ ಪ್ರಯತ್ನಗಳು ಬೇಕೋ ಅದನ್ನು ಮಾಡುತ್ತಾರೆ. ಹೀಗಿರುವಾಗ ನಮ್ಮೆಲ್ಲರ ಸಹಾನುಭೂತಿ, ಸಹಕಾರ ಈ ನಮ್ಮ ಮಕ್ಕಳ ಕಡೆಗೂ ಇರಬೇಕು. ಸಂಜೆಯ ಹೊತ್ತು ವಿವಿಧ ಸಾರ್ವಜನಿಕ ಕಾರ್ಯಕ್ರಮ ಮಾಡುವವರು, ಧಾರ್ಮಿಕ ಕಾರ್ಯಕ್ರಮ ನಡೆಸುವವರು, ರಾಜಕೀಯ ಕಾರ್ಯಕ್ರಮ ಯೋಜಿಸುವವರು, ಆರ್ಕೆಸ್ಟ್ರಾ ಮುಂತಾದ ಮನರಂಜನಾ ಕಾರ್ಯಕ್ರಮ ಮಾಡುವವರು, ಈ ಸಮಯದಲ್ಲಿ ಮಕ್ಕಳನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದು ಪತ್ರಿಕಾ ಹೇಳಿಕೆ ಮೂಲಕ ಮನವಿ ಮಾಡಿದ್ದಾರೆ.

ಧ್ವನಿವರ್ಧಕಗಳ ವಿಪರೀತ ಶಬ್ದದ ಕಾರಣ ಪರೀಕ್ಷೆಗೆ ತಯಾರಿ ನಡೆಸುವ ಮಕ್ಕಳ ಓದಿಗೆ ಏಕಾಗ್ರತೆಗೆ ತುಂಬಾ ತೊಂದರೆ ಉಂಟು ಮಾಡುತ್ತದೆ ಎಂಬ ವಿಚಾರ ನಮ್ಮ ಮನಸ್ಸಿನಲ್ಲಿ ಬರಬೇಕು. ಆ ಮಕ್ಕಳ ಪೋಷಕರು ಇದನ್ನು ಗಟ್ಟಿಯಾಗಿ ಹೇಳದೆ ಬಹಳ ಒದ್ದಾಡುತ್ತಿದ್ದಾರೆ. ಆದ್ದರಿಂದ ಏನೇ ಕಾರ್ಯಕ್ರಮಗಳನ್ನು ಮಾಡಿದರೂ ಸಮಾಜದ ಬಹುಮುಖ್ಯ ಭಾಗವಾದ ಈ ವಿದ್ಯಾರ್ಥಿಗಳ ಕಡೆಗೆ ನಮ್ಮ ಕಾಳಜಿ ತೋರಿಸೋಣ. ರಾತ್ರಿ ತುಂಬಾ ಹೊತ್ತು ಈ ಕಾರ್ಯಕ್ರಮಗಳನ್ನು ನಡೆಸುವುದರಿಂದ ಈ ಮಕ್ಕಳಿಗೆ ತೊಂದರೆ ಆಗುತ್ತದೆ. ತುಂಬಾ ಹೆಚ್ಚಿನ ಮಟ್ಟದ ಧ್ವನಿವರ್ಧಕ ಉಪಯೋಗದಿಂದಲೂ ಆ ಮಕ್ಕಳು ಬಹಳ ಕಿರಿಕಿರಿ ಅನುಭವಿಸುತ್ತಿದ್ದಾರೆ. ಆ ಮಕ್ಕಳ ಬಗ್ಗೆ ಕಾಳಜಿ ವಹಿಸುವುದೂ ಸಹ ದೇವರು ಮೆಚ್ಚುವ ಕಾರ್ಯ. ಪೊಲೀಸ್ ಇಲಾಖೆ ಸಹ ಈ ಕುರಿತು ಗಮನಹರಿಸಬೇಕಾದ ಅಗತ್ಯವಿದೆ ಎಂದು ಪತ್ರಿಕಾ ಹೇಳಿಕೆ ಮೂಲಕ ಮನವಿ ಮಾಡಿದ್ದಾರೆ.

ಮಾರ್ಚ್​ 9ರಿಂದ ಪ್ರಾರಂಭವಾಗಿರುವ ಪಿಯುಸಿ ಪರೀಕ್ಷೆ : ಪಿಯುಸಿ ಪರೀಕ್ಷೆಯು ಮಾರ್ಚ್ 9ರಂದು ಪ್ರಾರಂಭವಾಗಿದ್ದು ಮಾರ್ಚ್ 29ರವರೆಗೆ ನಡೆಯಲಿದೆ. ರಾಜ್ಯದ ಒಟ್ಟು 5,716 ಕಾಲೇಜುಗಳಿಂದ 7.27 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ರಾಜ್ಯಾದ್ಯಂತ 1,109 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯುತ್ತಿದೆ. ಅಲ್ಲದೆ, ಕಲಾ ವಿಭಾಗದಲ್ಲಿ 2,34,815, ವಾಣಿಜ್ಯ ವಿಭಾಗದಲ್ಲಿ 2,47,269 ಹಾಗೂ ವಿಜ್ಞಾನ ವಿಭಾಗದಲ್ಲಿ 2,44,129 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು.

ಇದನ್ನೂ ಓದಿ :ದ್ವಿತೀಯ ಪಿಯುಸಿ ಪರೀಕ್ಷೆ: ಮೊದಲ ದಿನ 23,771 ವಿದ್ಯಾರ್ಥಿಗಳು ಗೈರು.. ಇಬ್ಬರು ಡಿಬಾರ್

ABOUT THE AUTHOR

...view details