ಕರ್ನಾಟಕ

karnataka

ETV Bharat / state

ಜನರಿಗಾಗಿ ಇರೋ ಫುಟ್​ಪಾತ್​ಗಳೇ ಇಲ್ಲಿ ಮಾಯ... ಬಲು ಜೋರು ವ್ಯಾಪಾರ!

ಫುಟ್​ಪಾತ್​ಗಳಿರುವುದು ಪಾದಾಚಾರಿಗಳಿಗೆ ಸುರಕ್ಷಿತವಾಗಿ ಸಂಚಾರ ಮಾಡಲೆಂದು... ಆದರೆ ಇಲ್ಲಿ ಕೆಲವು ಅಂಗಡಿಗಳು ಅದನ್ನೇ ನುಂಗಿಬಿಟ್ಟಿವೆ. ಇನ್ನು ಈ ಕುರಿತು ವಿಚಾರಿಸಿದರೆ ವ್ಯಾಪಾರಸ್ಥರು ಪ್ರಶ್ನಿಸಿದವರ ವಿರುದ್ಧವೇ ಹರಿಹಾಯುತ್ತಾರೆ. ಹಾಗಾದರೆ ಏನಿದು ಫುಟ್​ಪಾತ್​ ಬಕಾಸುರರ ಕತೆ ನೋಡೋಣ...

By

Published : Apr 22, 2019, 6:20 PM IST

ಫುಟ್​ಪಾತ್ ಆಕ್ರಮಿಸಿರುವ ಅಂಗಡಿಗಳು

ಬೆಂಗಳೂರು: ವಾಹನ ಸಂಚಾರದಿಂದ ಪಾದಾಚಾರಿಗಳಿಗೆ ತೊಂದರೆಯಾಗದಂತೆ ಪ್ರತ್ಯೇಕವಾಗಿ ನಡೆದಾಡಲೆಂದು ಪುಟ್​ಪಾತ್ ಮಾಡಿರುತ್ತಾರೆ. ಆದರೆ, ವಾರ್ಡ್ ನಂ.4ರ ವ್ಯಾಪ್ತಿಯಲ್ಲಿ ಫುಟ್​ಪಾತ್ ಆಕ್ರಮಿಸಿಕೊಂಡು ಬಿಂದಾಸ್ ಆಗಿ ಅಂಗಡಿಗಳನ್ನು ವಿಸ್ತರಿಸಿಕೊಂಡಿದ್ದಾರೆ. ಇದರಿಂದಾಗಿ ಈ ಮಾರ್ಗದಲ್ಲಿ ಸಂಚರಿಸುವ ಪಾದಾಚಾರಿಗಳು ಅಪಘಾತದ ಭಯದಲ್ಲೇ ಓಡಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಅಂಗಡಿಗಳ ಆಕ್ರಮಿತ ಫುಟ್​ಪಾತ್

ಯಲಹಂಕ ಉಪನಗರದ ಡೈರಿ ಸರ್ಕಲ್​ನಿಂದ ಬೊಮ್ಮಸಂದ್ರ ಸರ್ಕಲ್​ವರೆಗೆ ಇರುವ ಬಹುತೇಕ ಮಳಿಗೆಗಳು ಫುಟ್​​ಪಾತ್ ಮೇಲೆ ಟೀ ಅಂಗಡಿ, ಪ್ಲಾಸ್ಟಿಕ್ ಅಂಗಡಿ, ಫರ್ನಿಚರ್ ಅಂಗಡಿಗಳನ್ನು ವಿಸ್ತರಿಸಿಕೊಂಡಿದ್ದಾರೆ. ಈ ಬಗ್ಗೆ ಯಲಹಂಕದ ಉಪನಗರದ ‘ಸಿಟಿಜನ್ ಪೋರಂ’ ಸಂಘದವರು ಬಿಬಿಎಂಪಿ ಅಧಿಕಾರಿಗಳ ಗಮನಕ್ಕೆ ತಂದು ಹಲವಾರು ಬಾರಿ ಮೌಖಿಕವಾಗಿ ದೂರು ನೀಡಿ ಫುಟ್​ಪಾತ್ ತೆರವುಗೊಳಿಸಿ ಪಾದಾಚಾರಿಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಮನವಿ ಮಾಡಿದ್ದಾರೆ. ಆದರೆ, ಬಿಬಿಎಂಪಿ ಅಧಿಕಾರಿಗಳು ಮಾತ್ರ ತಲೆಕೆಡಿಸಿಕೊಂಡಿಲ್ಲ.

ಅಸಹಾಯಕ ಕಾರ್ಪೋರೇಟರ್:
ಇನ್ನು ಈ ಸಮಸ್ಯೆ ಬಗ್ಗೆ ಈಟಿವಿ ಭಾರತ್, ವಾರ್ಡ್ ನಂ.4ರ ಕಾರ್ಪೋರೇಟರ್ ಎಂ.ಸತೀಶ್ ಅವರನ್ನು ಸಂಪರ್ಕಿಸಿದಾಗ ಪ್ರತಿಕ್ರಿಯಿಸಿದ ಅವರು, ಸುಮಾರು ವರ್ಷಗಳಿಂದಲೂ ಈ ಸಮಸ್ಯೆ ಇದೆ. ಫುಟ್​ಪಾತ್ ಮೇಲಿಟ್ಟಿರುವ ವಸ್ತುಗಳನ್ನು ನಾವು ವಶಪಡಿಸಿಕೊಂಡರೆ 2-3 ದಿನಗಳ ಬಳಿಕ ಮತ್ತೆ ಇಟ್ಟುಕೊಳ್ಳುತ್ತಾರೆ ಎಂಬ ಅಸಹಾಯಕತೆಯನ್ನು ತೋಡಿಕೊಂಡರು. ಅಧಿಕಾರಿಗಳಿಗೆ ತಿಳಿಸಿ ಪಾದಾಚಾರಿ ಮಾರ್ಗವನ್ನು ತೆರವುಗೊಳಿಸುತ್ತೇವೆ ಎಂದು ಹೇಳಿದರು.

ಪ್ರಶ್ನಿಸಿದವರಿಗೆ ಬೆದರಿಸುತ್ತಾರೆ:
ಯಲಹಂಕ ಉಪನಗರದಿಂದ ಬೊಮ್ಮಸಂದ್ರ ಸರ್ಕಲ್​ವರೆಗೂ ಬಹುತೇಕ ದೊಡ್ಡ ದೊಡ್ಡ ಅಂಗಡಿಗಳಿವೆ. ಇವುಗಳ ಮಾಲೀಕರು ಪ್ರಭಾವಿಗಳು ಹಾಗೂ ಬಿಬಿಎಂಪಿ ಅಧಿಕಾರಿಗಳ ಜೊತೆ ಸಂಪರ್ಕದಲ್ಲಿದ್ದಾರೆ. ಯಾರಾದರೂ ಪ್ರಶ್ನಿಸಲು ಹೋದರೆ ಪಾದಾಚಾರಿಗಳಿಗೆ ಬೆದರಿಕೆ ಹಾಕುತ್ತಾರೆಂದು ಪಾದಾಚಾರಿಗಳು ಹೇಳುತ್ತಾರೆ. ಈ ಬಗ್ಗೆ ಮಾಧ್ಯಮದವರೊಂದಿಗೂ ಮಾತನಾಡಲು ಭಯಭೀತರಾಗುತ್ತಾರೆ ಎನ್ನಲಾಗಿದೆ.

ಬೆಳಗ್ಗೆ ಹಾಗೂ ಸಂಜೆ ವೇಳೆಯಲ್ಲಿ ಈ ಮಾರ್ಗದಲ್ಲಿ ವಾಹನ ಸಂಚಾರ ಹಾಗೂ ಸಂಚಾರ ದಟ್ಟಣೆ ಹೆಚ್ಚಾಗಿರುತ್ತದೆ. ಆಗ ರಸ್ತೆಗಿಳಿಯಲು ಭಯವಾಗುತ್ತದೆ. ಹೀಗಾಗಿ, ಬಿಬಿಎಂಪಿ ಅಧಿಕಾರಿಗಳು ಕೂಡಲೇ ಇತ್ತ ಗಮನವಹಿಸಿ ಪಾದಾಚಾರಿಗಳ ಮಾರ್ಗವನ್ನು ತೆರವುಗೊಳಿಸಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಪಾದಾಚಾರಿಗಳು ಮನವಿ ಮಾಡುತ್ತಾರೆ.

ABOUT THE AUTHOR

...view details