ಕರ್ನಾಟಕ

karnataka

ಸದನದ ಒಳಗೆ ಮತ್ತು ಹೊರಗೆ ಕಾಂಗ್ರೆಸ್​ ಸರ್ಕಾರದ ವಿರುದ್ಧ ಹೋರಾಟ: ಬಿ ವೈ ವಿಜಯೇಂದ್ರ

By ETV Bharat Karnataka Team

Published : Nov 18, 2023, 7:04 AM IST

B Y Vijayendra: ಲೋಕಸಭಾ ಚುನಾವಣೆಯೇ ನಮ್ಮ ಮೊದಲ ಆದ್ಯತೆ, ಒಗ್ಗಟ್ಟಾಗಿ ಚುನಾವಣೆ ಎದುರಿಸಿ ಎಲ್ಲ ಸ್ಥಾನ ಗೆಲ್ಲುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿದ್ದಾರೆ.

R Ashok
ಬಿ ವೈ ವಿಜಯೇಂದ್ರ, ಆರ್​ ಅಶೋಕ್​

ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಬಿ ವೈ ವಿಜಯೇಂದ್ರ, ಆರ್​ ಅಶೋಕ್​

ಬೆಂಗಳೂರು : ಸದನದ ಒಳಗೆ ಮತ್ತು ಹೊರಗೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟ ಮಾಡಿ ಜನರ ಪರ ಧ್ವನಿಯಾಗಿ ನಿಲ್ಲುತ್ತೇವೆ. ಒಗ್ಗಟ್ಟಾಗಿ ಲೋಕಸಭಾ ಚುನಾವಣೆ ಎದುರಿಸಿ ಎಲ್ಲ ಸ್ಥಾನಗಳನ್ನು ಗೆಲ್ಲುತ್ತೇವೆ ಅಂತಾ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ತಿಳಿಸಿದ್ದಾರೆ.

ಶಾಸಕಾಂಗ ಪಕ್ಷದ ಸಭೆ ನಂತರ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ನಿನ್ನೆ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಸರ್ವ ಸಮ್ಮತದ ಆಯ್ಕೆ ನಡೆದಿದೆ. ಎಲ್ಲಾ ಶಾಸಕರು ಒಗ್ಗಟ್ಟಾಗಿ ಸರ್ವಾನುಮತದಿಂದ ಆರ್ ಅಶೋಕ್ ಅವರನ್ನು ಪ್ರತಿಪಕ್ಷ ನಾಯಕರನ್ನಾಗಿ ಆಯ್ಕೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ನಾನು ಮತ್ತು ಅಶೋಕ್ ಒಗ್ಗಟ್ಟಾಗಿ ಒಂದಾಗಿ ಈ ರಾಜ್ಯದಲ್ಲಿರುವ ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ, ಬಡವರ ಹಾಗೂ ರೈತ ವಿರೋಧಿ ಸರ್ಕಾರದ ವಿರುದ್ಧ ಸದನದ ಒಳಗೆ ಮತ್ತು ಹೊರಗೆ ಧ್ವನಿ ಎತ್ತುವುದರ ಮೂಲಕ ಭ್ರಷ್ಟ ಸರ್ಕಾರವನ್ನು ರಾಜ್ಯದ ಜನತೆಯ ಮುಂದೆ ಕಿವಿ ಹಿಂಡುವ ಕೆಲಸ ಮಾಡುತ್ತೇವೆ ಎಂದರು.

ಮುಂದಿನ ಲೋಕಸಭಾ ಚುನಾವಣೆಯೇ ನಮ್ಮ ಮೊದಲ ಆದ್ಯತೆ, ನಮ್ಮ ಗುರಿ ಲೋಕಸಭಾ ಚುನಾವಣೆಯಾಗಿದೆ, ಎಲ್ಲಾ 28 ಕ್ಷೇತ್ರಗಳನ್ನು ಗೆಲ್ಲುವುದರ ಮುಖಾಂತರ 100% ಸ್ಟ್ರೈಕ್ ರೇಟ್ ಪಡೆದು ಮೋದಿ ಅವರಿಗೆ ಶಕ್ತಿ ತುಂಬುವ ಕೆಲಸವನ್ನು ನಾವೆಲ್ಲರೂ ಒಟ್ಟಿಗೆ ಸೇರಿ ಮಾಡುತ್ತೇವೆ ಎನ್ನುವ ಭರವಸೆಯನ್ನು ವಿಜಯೇಂದ್ರ ನೀಡಿದರು.

ಈ ಭ್ರಷ್ಟ ಕಾಂಗ್ರೆಸ್ ಸರ್ಕಾರದ ಆಡಳಿತ ವೈಖರಿಯಿಂದ ವಿರೋಧ ಪಕ್ಷಗಳು ಮಾತ್ರವಲ್ಲ ರಾಜ್ಯದ ಜನರು ಕೂಡ ತತ್ತರಿಸಿ ಹೋಗಿದ್ದಾರೆ, ಸರ್ಕಾರಕ್ಕೆ ಶಾಪ ಹಾಕುತ್ತಿದ್ದಾರೆ. ಬಡವರ ವಿರೋಧಿ, ರೈತ ವಿರೋಧಿ ಸರ್ಕಾರವನ್ನು ಕಿತ್ತುಹಾಕಿ ತಕ್ಕ ಪಾಠ ಕಲಿಸಬೇಕಾಗುತ್ತದೆ. ಅದಕ್ಕಾಗಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲ ನೀಡಿ ಜನತೆ ಕಾಂಗ್ರೆಸ್​ಗೆ ಪಾಠ ಕಲಿಸಲಿದ್ದಾರೆ. ಬಹುದಿನಗಳಿಂದ ನಾವು ಕಾಯುತ್ತಿದ್ದ ವಿರೋಧ ಪಕ್ಷದ ನಾಯಕನ ಸ್ಥಾನ ಹಿರಿಯರಾದ ಅಶೋಕ್​ ಅವರಿಗೆ ಸರ್ವ ಸಮ್ಮತದಿಂದ ಸಿಕ್ಕಿರುವುದು ಸಂತೋಷ ತಂದಿದೆ. ಎಲ್ಲರೂ ಒಟ್ಟಾಗಿ ಕಾಂಗ್ರೆಸ್ ವಿರುದ್ಧ ಹೋರಾಟ ಮಾಡುತ್ತೇವೆ ಎಂದರು.

ಜಾತಿಯಾಧಾರಿತವಾಗಿ ಅವಕಾಶ ಸಿಕ್ಕಿಲ್ಲ :ನೂತನ ಪ್ರತಿಪಕ್ಷ ನಾಯಕ ಆರ್.ಅಶೋಕ್ ಮಾತನಾಡಿ, ನನಗೆ ಜಾತಿಯಾಧಾರಿತವಾಗಿ ಪ್ರತಿಪಕ್ಷ ಸ್ಥಾನ ಸಿಕ್ಕಿಲ್ಲ, ಜಾತಿಯ ಸೋಂಕು ಕೂಡ ನಮ್ಮ ಪಕ್ಷದಲ್ಲಿ ಇಲ್ಲ. ಎಲ್ಲರ ಅಭಿಪ್ರಾಯ ಪಡೆದೇ ನನ್ನ ಆಯ್ಕೆ ಮಾಡಲಾಗಿದೆ ಎಂದು ಸ್ಪಷ್ಟೀಕರಣ ನೀಡಿದರು.

ಬಿಜೆಪಿ ಎಂದು ಜಾತಿಯ ರಾಜಕಾರಣ ಮಾಡಿಲ್ಲ, ಜನ ನಮಗೆ ಹಿಂದುತ್ವದ ಬ್ರಾಂಡ್ ಕೊಟ್ಟಿದ್ದಾರೆ. ನಾವು ಅದನ್ನು ಸ್ವೀಕಾರ ಮಾಡಿದ್ದೇವೆ, ಜಾತಿ ಮೇಲೆ ಯಾವುದೇ ಹುದ್ದೆಯನ್ನು ನಮ್ಮ ಪಕ್ಷ ಕೊಡುವುದಿಲ್ಲ, ಅದು ಆಗದಿರುವ ವಿಚಾರವಾಗಿದೆ. ನಮ್ಮದು ದೇಶ ಮೊದಲು ಎನ್ನುವ ಉದ್ದೇಶ ಹೊಂದಿರುವ ಪಕ್ಷ, ನಮ್ಮಲ್ಲಿ ಜಾತಿಯ ಸೋಂಕು ಬರುವುದಿಲ್ಲ. ಆದರೆ ಸಾಮಾಜಿಕ ನ್ಯಾಯದ ಪಾಲನೆಯನ್ನು ಮಾಡುತ್ತೇವೆ. ಎಲ್ಲ ಶಾಸಕರ ಅಭಿಪ್ರಾಯ ತೆಗೆದುಕೊಂಡು ಸರ್ವಸಮ್ಮತವಾಗಿ ನನ್ನ ಆಯ್ಕೆ ನಡೆದಿದೆ ಎಂದರು.

ಇದನ್ನೂ ಓದಿ :ನಾನು, ವಿಜಯೇಂದ್ರ ಜೋಡೆತ್ತುಗಳೆಂತೆ ಕೆಲಸ ಮಾಡುತ್ತೇವೆ, ಲೋಕಸಭೆಯ 28 ಸ್ಥಾನಗಳನ್ನೂ ಗೆಲ್ಲುತ್ತೇವೆ: ಅಶೋಕ್ ವಿಶ್ವಾಸ

ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ನಾಯಕತ್ವದ ಮುಂದೆ ಅಶೋಕ್ ತರಗಲೆಯಂತೆ ಉದುರಿ ಹೋಗಲಿದ್ದಾರೆ ಎಂದು ಕಾಂಗ್ರೆಸ್ ಟೀಕಿಸಿದೆ. ಆದರೆ ಉದರಿ ಹೋಗಲು ನಾನು ಸಿದ್ದರಾಮಯ್ಯ ರೀತಿ ಎಲ್ಲ ಪಕ್ಷವನ್ನು ನೋಡಿಕೊಂಡು ಬಂದಿಲ್ಲ. ನನ್ನದು ಒಂದೇ ಪಕ್ಷ, ಒಂದೇ ಚಿಹ್ನೆ, ಒಂದೇ ಧ್ಯೇಯ ಮತ್ತು ಸಿದ್ಧಾಂತ. ಆದರೆ, ಸಿದ್ದರಾಮಯ್ಯನವರು ಜೆಡಿಎಸ್​ನಲ್ಲಿ ಇದ್ದಾಗ ಒಂದು ಸಿದ್ಧಾಂತ, ಕಾಂಗ್ರೆಸ್ ನಲ್ಲಿ ಇರುವಾಗ ಮತ್ತೊಂದು ಸಿದ್ಧಾಂತವಾಗಿದೆ. ಸಿದ್ದರಾಮಯ್ಯ ಎಲ್ಲವನ್ನು ಸುತ್ತಿ ಬಂದಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.

ಶಾಸಕರಾದ ರಮೇಶ್ ಜಾರಕಿಹೊಳಿ, ಬಸನಗೌಡ ಪಾಟೀಲ್ ಯತ್ನಾಳ್ ಸಭೆ ನಡೆದ ಜಾಗಕ್ಕೆ ಕೂಡ ಬಂದಿದ್ದರು, ಅವರ ಅಭಿಪ್ರಾಯವನ್ನು ತಿಳಿಸಿ ಅವರು ಹೋಗಿದ್ದಾರೆ. ನಾನು ಅವರ ಜೊತೆ ಮಾತನಾಡಿದ್ದೇನೆ. ಅವರ ಅಭಿಪ್ರಾಯ ಸೇರಿ ಎಲ್ಲರ ಅಭಿಪ್ರಾಯ ತೆಗೆದುಕೊಂಡು ನನ್ನ ಹೆಸರು ಘೋಷಣೆ ಮಾಡಲಾಗಿದೆ. ಪಕ್ಷದ ಒಳಗೆ ಪ್ರಜಾಪ್ರಭುತ್ವ ವ್ಯವಸ್ಥೆ ಇರುವಾಗ ಅಭಿಪ್ರಾಯ ಭೇದ ಸಹಜ. ಚೀನಾದಲ್ಲಿ ಅಭಿಪ್ರಾಯ ವ್ಯಕ್ತಪಡಿಸಲು ಸಾಧ್ಯವೇ, ಅದು ಪ್ರಜಾಪ್ರಭುತ್ವ ರಾಷ್ಟ್ರ ಅಲ್ಲ, ನಮ್ಮಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಇದೆ. ಹಾಗಾಗಿ, ಕೆಲವರು ಕೆಲವು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ, ಕಡೆಗೆ ಎಲ್ಲರೂ ಒಟ್ಟಾಗಿ ಹೋಗುತ್ತೇವೆ ಅಷ್ಟೇ ಎಂದು ಸಮರ್ಥಿಸಿಕೊಂಡರು.

ABOUT THE AUTHOR

...view details