ಬೆಂಗಳೂರು: ಬಿಬಿಎಂಪಿ ದಕ್ಷಿಣ ವಲಯ ವ್ಯಾಪ್ತಿಯಲ್ಲಿ ಖಾತಾಗೆ ಸಂಬಂಧಿಸಿದ ಅರ್ಜಿಗಳನ್ನು ತ್ವರಿತಗತಿಯಲ್ಲಿ ವಿಲೇವಾರಿ ಮಾಡುವ ಉದ್ದೇಶದಿಂದ 3 ದಿನಗಳ ಕಾಲ ಖಾತಾ ಮೇಳವನ್ನು ಆಯೋಜಿಸಿದ್ದು, ಎಲ್ಲರೂ ಅದರ ಸದುಪಯೋಗ ಪಡೆದುಕೊಳ್ಳಬೇಕೆಂದು ಹಣಕಾಸು ವಿಭಾಗದ ವಿಶೇಷ ಆಯುಕ್ತರು ಹಾಗೂ ವಲಯ ಆಯುಕ್ತರಾದ ಜಯರಾಮ್ ರಾಯಪುರ ಹೇಳಿದರು.
ತ್ವರಿತಗತಿ ವಿಲೇವಾರಿಗೆ ಖಾತಾ ಮೇಳ: ದಕ್ಷಿಣ ವಲಯ ವ್ಯಾಪ್ತಿಯ ಬಿಟಿಎಂ 2ನೇ ಹಂತದ ಬಳಿ ಬರುವ ಗ್ರೀನ್ ಸಿಟಿ ಅಪಾರ್ಟ್ಮೆಂಟ್ ನಲ್ಲಿ ಆಯೋಜಿಸಿದ್ದ ಖಾತಾ ಮೇಳಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ಪಾಲಿಕೆಯಿಂದ ಆಸ್ತಿ ತೆರಿಗೆ ಹಾಗೂ ಖಾತೆ ಮಾಡಿಕೊಡುವ ವಿಚಾರದಲ್ಲಿ ನಾಗರಿಕರಲ್ಲಿ ಅಸಮಾಧಾನಗಳಿವೆ. ಆ ಬಗ್ಗೆ ದೂರುಗಳು ಕೂಡಾ ಕೇಳಿ ಬರುತ್ತವೆ. ಈ ನಿಟ್ಟಿನಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿ ನಾಗರಿಕರಿಗೆ ಅನುಕೂಲವಾಗುವ ದೃಷ್ಟಿಯಿಂದ ಖಾತಾಗೆ ಸಂಬಂಧಿಸಿದ ಅರ್ಜಿಗಳನ್ನು ತ್ವರಿತಗತಿಯಲ್ಲಿ ವಿಲೇವಾರಿ ಮಾಡಲು ದಕ್ಷಿಣ ವಲಯ ವ್ಯಾಪ್ತಿಯಲ್ಲಿ ಶುಕ್ರವಾರದಿಂದ 3 ದಿನಗಳ ಕಾಲ ಖಾತಾ ಮೇಳ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
3 ದಿನಗಳಲ್ಲಿ ಇನ್ನುಳಿದ ಬಾಕಿ ಅರ್ಜಿಗಳ ವಿಲೇವಾರಿ: ಪಾಲಿಕೆ ವ್ಯಾಪ್ತಿಯಲ್ಲಿ ಸಕಾಲ ತಂತ್ರಾಂಶದಲ್ಲಿ ಖಾತಾಗೆ ಸಂಬಂಧಿಸಿದ ಅರ್ಜಿ ಸಲ್ಲಿಸಿದ 30 ದಿನಗಳಲ್ಲಿ ಎಲ್ಲಾ ಚಟುವಟಿಕೆಗಳು ಪೂರ್ಣಗೊಳ್ಳಬೇಕು. ಈ ನಿಟ್ಟಿನಲ್ಲಿ ದಕ್ಷಿಣ ವಲಯದಲ್ಲಿ 317 ಖಾತಾಗೆ ಸಂಬಂಧಿಸಿದ ಅರ್ಜಿಗಳು ವಿಲೇವಾರಿಗೆ ಬಾಕಿಯಿತ್ತು. ಖಾತಾ ಮೇಳ ಮಾಡುತ್ತೇವೆ ಎಂಬ ವಿಷಯ ತಿಳಿದ ಬಳಿಕ 317 ಅರ್ಜಿಗಳ ಪೈಕಿ 250 ಅರ್ಜಿಗಳು ಮಾತ್ರ ಬಾಕಿಯಿದ್ದು, ಈ 3 ದಿನಗಳಲ್ಲಿ ಇನ್ನುಳಿದ ಬಾಕಿ ಅರ್ಜಿಗಳನ್ನು ವಿಲೇವಾರಿ ಮಾಡಲು ಕಂದಾಯ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.
ಖಾತಾ ಮೇಳದಲ್ಲಿ ಆಸ್ತಿ ತೆರಿಗೆ ಪಾವತಿಸಿ: ದಕ್ಷಿಣ ವಲಯ ವ್ಯಾಪ್ತಿ ನಡೆದ ಖಾತಾ ಮೇಳದಲ್ಲಿ ಎಲ್ಲ ಪ್ರಕ್ರಿಯೆಗಳನ್ನು ತ್ವರಿತಗತಿ ಮಾಡಲಾಗುತ್ತಿದೆ. ಇದರೊಂದಿಗೆ ಖಾತಾ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಖಾತಾ ವಿಲೇವಾರಿ ಮಾಡಲಾಗುವುದು. ಆಸ್ತಿ ತೆರಿಗೆ ಪಾವತಿಸಬೇಕೆಂದುಕೊಳ್ಳುವವರಿಗೆ ಖಾತಾ ಮೇಳದಲ್ಲಿ ತೆರಿಗೆ ರಸೀದಿಯನ್ನು ಸ್ಥಳದಲ್ಲಿಯೇ ನೀಡಲಾಗುತ್ತದೆ ಎಂದು ತಿಳಿಸಿದರು.