ಕರ್ನಾಟಕ

karnataka

By

Published : Feb 17, 2022, 8:20 PM IST

ETV Bharat / state

'ಕಲಾಪ ಹಾಳು ಮಾಡುತ್ತಿರುವವರನ್ನು ಸದನದಿಂದ ಹೊರಹಾಕಿ, ಟಿಎ, ಡಿಎ ಪಡೆಯಲು ಕಲಾಪ ನಡೆಸಬೇಕಾ?'

ರಾಜ್ಯದ ಜ್ವಲಂತ ಸಮಸ್ಯೆಗಳ ಬಗ್ಗೆ ಹಾಗೂ ರೈತರು, ಕಾರ್ಮಿಕರು ಎದುರಿಸುತ್ತಿರುವ ಸಂಕಷ್ಟಗಳ ಬಗ್ಗೆ ಚರ್ಚೆ ಮಾಡುವುದು ಬಿಟ್ಟು ಕೇಸರಿ ಬಾವುಟದ ವಿಷಯ ಇಟ್ಟುಕೊಂಡು ಎರಡು ದಿನಗಳ ಕಲಾಪ ಹಾಳು ಮಾಡಿದರು ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ. ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ex-cm-kumaraswamy-reaction-on-session-adjourned
'ಕಲಾಪ ಹಾಳು ಮಾಡುತ್ತಿರುವವರನ್ನು ಸದನದಿಂದ ಹೊರಹಾಕಿ, ಟಿಎ, ಡಿಎ ಪಡೆಯಲು ಕಲಾಪ ನಡೆಸಬೇಕಾ?'

ಬೆಂಗಳೂರು: ಜನರ ತೆರಿಗೆ ಹಣವನ್ನು ಪೋಲು ಮಾಡುತ್ತಿರುವ ಹಾಗೂ ಕಲಾಪ ಹಾಳು ಮಾಡುತ್ತಿರುವವರನ್ನು ಕೂಡಲೇ ಸದನದಿಂದ ಹೊರಹಾಕಿ ಕಲಾಪ ನಡೆಸಿ. ಒಂದು ವೇಳೆ ಕಲಾಪ ನಡೆಸುವ ಶಕ್ತಿ ಸರ್ಕಾರಕ್ಕೆ ಇಲ್ಲದಿದ್ದರೆ, ಅದನ್ನು ಅನಿರ್ದಿಷ್ಟಾವಧಿಗೆ ಮುಂದೂಡಿಕೆ ಮಾಡಿ. ಟಿಎ, ಡಿಎ ಪಡೆಯಲು ಇಂತಹ ಕಲಾಪ ಯಾಕೆ ನಡೆಸಬೇಕು? ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ. ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ವಿಧಾನಸಭೆ ಕಲಾಪವನ್ನು ಸಭಾಧ್ಯಕ್ಷರು ಮುಂದೂಡಿದ ನಂತರ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಕಲಾಪ ಹಾಳು ಮಾಡುತ್ತಿರುವ ಕಾಂಗ್ರೆಸ್ ನಾಯಕರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದ ಜ್ವಲಂತ ಸಮಸ್ಯೆಗಳ ಬಗ್ಗೆ ಹಾಗೂ ರೈತರು, ಕಾರ್ಮಿಕರು ಎದುರಿಸುತ್ತಿರುವ ಸಂಕಷ್ಟಗಳ ಬಗ್ಗೆ ಚರ್ಚೆ ಮಾಡುವುದು ಬಿಟ್ಟು ಕೇಸರಿ ಬಾವುಟದ ವಿಷಯ ಇಟ್ಟುಕೊಂಡು ಎರಡು ದಿನಗಳ ಕಲಾಪವನ್ನು ಹಾಳು ಮಾಡಿದರು. ಸಚಿವರೊಬ್ಬರ ರಾಜೀನಾಮೆ ಪಡೆಯಬೇಕು ಎಂಬುದನ್ನೇ ಪ್ರತಿಷ್ಠೆ ಮಾಡಿಕೊಂಡು ಜನರ ನಿರೀಕ್ಷೆಗಳನ್ನು ಅವಹೇಳನ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿಗಳು ಗುಡುಗಿದರು.

ಹತ್ತು ನಿಮಿಷ ಧರಣಿ ಮಾಡುವುದು, ಆಮೇಲೆ ಸದನವನ್ನು ಮುಂದಕ್ಕೆ ಹಾಕುವುದು, ಕಲಾಪ ನಡೆಸುವ ರೀತಿ ಅಲ್ಲ. ಯಾವ ಪುರುಷಾರ್ಥಕ್ಕೆ ಅಧಿವೇಶನವನ್ನು ಕರೆದಿದ್ದೀರಿ. ಸರ್ಕಾರಕ್ಕೆ ಸದನವನ್ನು ಸಕ್ರಮವಾಗಿ ನಡೆಸುವ ಶಕ್ತಿ ಮತ್ತು ಬದ್ಧತೆ ಇಲ್ಲದಿದ್ದರೆ, ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದಕ್ಕೆ ಹಾಕಿ. ಸುಖಾ ಸುಮ್ಮನೆ ದಿನಕ್ಕೆ 1.5ರಿಂದ 2 ಕೋಟಿ ರೂಪಾಯಿಯಷ್ಟು ಜನರ ತೆರಿಗೆಯನ್ನು ಯಾಕೆ ಪೋಲು ಮಾಡುತ್ತೀರಿ. ಕೇವಲ ಟಿಎ, ಡಿಎ ಪಡೆಯಲು ಕಲಾಪ ನಡೆಸಬೇಡಿ ಎಂದು ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು.

ಹಿಜಾಬ್ ಮತ್ತು ಕೇಸರಿ ಶಾಲುಗಳ ವಿವಾದದಿಂದ ಶಿಕ್ಷಣ ವ್ಯವಸ್ಥೆ ಹಾಳಾಗಿದೆ. ಅಲ್ಲೆಲ್ಲ ಸಂಘರ್ಷದ ವಾತಾವರಣ ಸೃಷ್ಟಿಯಾಗಿದೆ. ಮಕ್ಕಳು ಹೊಡೆದಾದಿಕೊಳ್ಳುವ ಸನ್ನಿವೇಶ ಉಂಟಾಗಿದೆ. ಈ ವಿಷಯವನ್ನು ಸದನದಲ್ಲಿ ಚರ್ಚೆ ನಡೆಸಬೇಕಿತ್ತು.

ಎರಡೂ ಪಕ್ಷಗಳಿಗೆ ಜನಪರ ಕಾಳಜಿ ಇಲ್ಲ:ಬೇಸಿಗೆ ಬರುವುದಕ್ಕೆ ಮುನ್ನವೇ ರಾಜ್ಯದಲ್ಲಿ ದಿನಕ್ಕೆ ಎರಡೂವರೆ ಗಂಟೆ ಕಾಲ ಲೋಡ್ ಶೆಡ್ಡಿಂಗ್ ಶುರುವಾಗಿದೆ. ವಿದ್ಯುತ್ ಕಡಿತದಿಂದ ರೈತರು ಬೆಳೆಗಳಿಗೆ ರಾತ್ರಿ ಹೊತ್ತು ನೀರು ಹರಿಸಬೇಕಾದ ಕಷ್ಟದ ಸ್ಥಿತಿ ಎದುರಾಗಿದೆ. ಆಡಳಿತಾರೂಢ ಪಕ್ಷಕ್ಕೆ ಮತ್ತು ಅಧಿಕೃತ ವಿರೋಧ ಪಕ್ಷಕ್ಕೆ ಇದರ ಬಗ್ಗೆ ಕಾಳಜಿ ಇಲ್ಲ. ಎರಡೂ ರಾಷ್ಟ್ರೀಯ ಪಕ್ಷಗಳು ಕಲಾಪವನ್ನು ಹಾಳು ಮಾಡಿ ಜನರ ನಿರೀಕ್ಷೆಗಳನ್ನು ಕಾಲ ಕಸದಂತೆ ನೋಡುತ್ತಿವೆ. ಈ ವಿಷಯಗಳನ್ನು ಪ್ರಸ್ತಾಪ ಮಾಡಲು ಉದ್ದೇಶಿಸಿದ್ದೆ. ಆದರೆ, ಅವಕಾಶ ಸಿಗಲಿಲ್ಲ ಎಂದು ಕುಮಾರಸ್ವಾಮಿ ಅವರು ಕಿಡಿಕಾರಿದರು.

ಕೇಸರಿ ಪವಿತ್ರ ವಸ್ತ್ರ:ಹಿಂದೂಗಳ ಪಾಲಿಗೆ ಕೇಸರಿ ಪವಿತ್ರ ವಸ್ತ್ರವಾಗಿದ್ದು, ಅದರ ಪಾವಿತ್ರ್ಯತೆಯನ್ನು ಯಾರು ಕೂಡ ಹಾಳು ಮಾಡಬಾರದು ಎಂದು ಮಾಜಿ ಮುಖ್ಯಮಂತ್ರಿಗಳು ಹೇಳಿದರು. ಹಿಂದೂ ಸಂಸ್ಕೃತಿ, ಪರಂಪರೆಯಲ್ಲಿ ಕೇಸರಿ ಬಣ್ಣ ಹಾಗೂ ಕೇಸರಿ ವಸ್ತ್ರಕ್ಕೆ ಪೂಜ್ಯ ಸ್ಥಾನವಿದೆ.

ನಮ್ಮ ಪೂರ್ವಿಕರ ಕಾಲದಿಂದ ಇದು ನಡೆದುಕೊಂಡು ಬಂದಿದೆ. ಸರ್ವಸಂಗ ಪರಿತ್ಯಾಗಿಗಳು, ಸಂತರು, ಧಾರ್ಮಿಕ ಕ್ಷೇತ್ರದಲ್ಲಿ ಸೇವೆ ಮಾಡುತ್ತಿರುವ ಪೂಜ್ಯರು ಕೇಸರಿ ವಸ್ತ್ರಗಳನ್ನು ಧರಿಸುತ್ತಾರೆ. ಆದರೆ ಬಿಜೆಪಿ, ಆರ್​​ಎಸ್​​ಎಸ್ ಮತ್ತದರ ಸಹ ಸಂಘಟನೆಗಳು ಕೇಸರಿ ಬಾವುಟವನ್ನು ಇಟ್ಟುಕೊಂಡೇ ಹೋರಾಟ ಮಾಡುತ್ತಿವೆ.

ಇದನ್ನೂ ಓದಿ:ಹಿಜಾಬ್​ ಪ್ರಕರಣ: ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸುವ ಬಗ್ಗೆ ಹೈಕೋರ್ಟ್​ ಹೇಳಿದ್ದೇನು?

ಭಾರತವನ್ನು ಹಿಂದೂ ರಾಷ್ಟ್ರ ಮಾಡಬೇಕು ಎನ್ನುವುದು ಆ ಸಂಘಟನೆಗಳ ಮಹದಾಸೆ. ಅವರ ಅಜೆಂಡಾ ಕೂಡ ಅದೇ. ಆ ಹಿನ್ನೆಲೆಯೊಳಗೆ ಸಚಿವ ಈಶ್ವರಪ್ಪ ಅವರು ಮುಂದೊಂದು ದಿನ ಕೆಂಪುಕೋಟೆ ಮೇಲೂ ಕೇಸರಿ ಭಾವುಟವನ್ನು ಯಾರಾದರೂ ಹಾರಿಸಬಹುದು ಎಂದು ಹೇಳಿದ್ದರು. ನಾನೇ ಹಾರಿಸುತ್ತೇನೆ ಎಂದು ಅವರೇನೂ ಹೇಳಿಲ್ಲ. ಹೀಗಿದ್ದರೂ ಕಾಂಗ್ರೆಸ್ ಪ್ರತಿಷ್ಠೆಗೆ ಬಿದ್ದು ಕಲಾಪವನ್ನು ಹಾಳು ಮಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿಗಳು ಹೇಳಿದರು.

ಎರಡೂ ರಾಷ್ಟ್ರೀಯ ಪಕ್ಷಗಳು ಜನರ ಹಿತ ಮರೆತಿವೆ:ಕರ್ನಾಟಕ ಸೇರಿದಂತೆ ದಕ್ಷಿಣದ ಎಲ್ಲ ರಾಜ್ಯಗಳಲ್ಲಿಯೂ ಧ್ವಜ ಸ್ತಂಭಗಳನ್ನು ನೆಡುವ, ಅವುಗಳಲ್ಲಿ ತಮ್ಮ ಸಂಘಟನೆಗಳ ಬಾವುಟ ಹಾರಿಸುವುದು ಇದೆ. ನಮ್ಮಲ್ಲೂ ಕನ್ನಡ ಸಂಘಟನೆಗಳು ಕನ್ನಡ ಭಾವುಟವನ್ನು ಹಾರಿಸುತ್ತವೆ. ತಮಿಳುನಾಡಿನಲ್ಲಿಯೂ ಇಂತಹ ದೃಶ್ಯಗಳನ್ನು ಕಾಣಬಹುದು.

ಖಾಲಿ ಇರುವ ಧ್ವಜ ಸ್ತಂಭಗಳಲ್ಲಿ ಕೇಸರಿ ಭಾವುಟ ಹಾರಿಸುವುದನ್ನು ನೋಡಿದ್ದೇವೆ. ಈ ವಿಷಯವನ್ನು ದೊಡ್ಡದು ಮಾಡಿ ಸದನದ ಕಲಾಪವನ್ನು ಹಾಳು ಮಾಡುವುದು ಎಷ್ಟು ಸರಿ? ಎರಡೂ ರಾಷ್ಟ್ರೀಯ ಪಕ್ಷಗಳು ಜನರ ಹಿತ ಮರೆತು ವರ್ತಿಸುತ್ತಿವೆ. ಇದನ್ನು ಜನರು ಅರ್ಥ ಮಾಡಿಕೊಳ್ಳಬೇಕು ಎಂದು ಅವರು ಹೇಳಿದರು.

ABOUT THE AUTHOR

...view details