ಕರ್ನಾಟಕ

karnataka

ಮುಸ್ಲಿಂ ಮತ ಬ್ಯಾಂಕ್ ವಿಭಜನೆ ತಡೆಗೆ ಕಾರ್ಯತಂತ್ರ.. ಕಾಂಗ್ರೆಸ್ ಅಲ್ಪಸಂಖ್ಯಾತ ಮುಖಂಡರ ಮಹತ್ವದ ಸಭೆ

By

Published : Dec 13, 2022, 7:52 PM IST

ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ‌ ಅಹ್ಮದ್ ನೇತೃತ್ವದಲ್ಲಿ ಮುಸ್ಲಿಂ ಸಮುದಾಯದ ಶಾಸಕರು ಹಾಗೂ ಮುಖಂಡರ ಸಭೆ ನಡೆಯಿತು.

congress minority leaders meeting
ಕಾಂಗ್ರೆಸ್ ಅಲ್ಪಸಂಖ್ಯಾತ ಮುಖಂಡರ ಸಭೆ ನಡೆಯಿತು

ಬೆಂಗಳೂರು:ಮುಂದಿನ ವಿಧಾನಸಭೆ ಚುನಾವಣೆಗೆ ಮುಸಲ್ಮಾನ ಸಮುದಾಯದ ಮತ ಬ್ಯಾಂಕ್ ಗಟ್ಟಿಗೊಳಿಸುವ ಸಲುವಾಗಿ ನಗರದಲ್ಲಿ ಕಾಂಗ್ರೆಸ್ ಮುಸ್ಲಿಂ ಸಮುದಾಯದ ಶಾಸಕರು ಹಾಗೂ ಮುಖಂಡರ ಸಭೆ ನಗರದ ಸಾಲಾರ್ ಭವನದಲ್ಲಿ ಜರುಗಿತು. ರಾಜ್ಯದ ಮುಂದಿನ ವಿಧಾನಸಭೆ ಚುನಾವಣೆಗೆ ತಂತ್ರಗಾರಿಕೆ ರೂಪಿಸುವ, ಅಲ್ಪಸಂಖ್ಯಾತ ಮುಸಲ್ಮಾನ ಸಮುದಾಯದ ಮತದಾರರನ್ನು ವಿಶ್ವಾಸಕ್ಕೆ ಪಡೆಯುವ, ಮುಸಲ್ಮಾನರು ನಿರ್ಣಾಯಕವಾಗಿರುವ ಕ್ಷೇತ್ರಗಳ ಬಗ್ಗೆ ಹೆಚ್ಚು ಗಮನಹರಿಸುವ ವಿಚಾರ ಕುರಿತು ಕಾಂಗ್ರೆಸ್ ಮುಸ್ಲಿಂ ಶಾಸಕರು, ಪ್ರಮುಖ ಮುಖಂಡರು ಸಭೆಯಲ್ಲಿ ಪಾಲ್ಗೊಂಡು ಸುದೀರ್ಘ ಚರ್ಚೆ ನಡೆಸಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ‌ ಅಹ್ಮದ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ, ಮಾಜಿ ಸಚಿವ ಜಮೀರ್ ಅಹ್ಮದ್, ಯು.ಟಿ‌ ಖಾದರ್, ಮಾಜಿ ರಾಜ್ಯಸಭಾ ಸದಸ್ಯ ರೆಹಮಾನ್ ಖಾನ್, ಶಾಸಕ ರಹೀಂ ಖಾನ್, ತನ್ವೀರ್ ಸೇಠ್, ಮಾಜಿ ಶಾಸಕ ಮೊಯ್ದಿನ್ ಬಾವಾ, ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಬ್ದುಲ್ ಜಬ್ಬಾರ್ ಸೇರಿದಂತೆ ಪ್ರಮುಖರು ಭಾಗಿಯಾಗಿದ್ದರು.

ಅಲ್ಪಸಂಖ್ಯಾತ ಮತ ವಿಭಜನೆ ಬೇಡ :ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮತಬ್ಯಾಂಕ್ ಆಗಿರುವ ಮುಸ್ಲಿಂ ಅಲ್ಪಸಂಖ್ಯಾತ ಸಮುದಾಯದ ಒಡೆಯುವ ಕಾರ್ಯವನ್ನು ಜೆಡಿಎಸ್, ಆಮ್ ಆದ್ಮಿ ಪಕ್ಷ, ಓವೈಸಿ ನೇತೃತ್ವದ ಎಐಎಂಐಎಂ, ಎಸ್ ಡಿ ಪಿ ಐ ಪಕ್ಷಗಳು ಮಾಡಲಿವೆ.

ಗುಜರಾತ್ ಎಫೆಕ್ಟ್ ಬೇಡ: ಈಗಾಗಲೇ ಗುಜರಾತ್​​​ನಲ್ಲಿ ಆಮ್ ಆದ್ಮಿ ಪಕ್ಷ ಅತ್ಯಂತ ಪ್ರಬಲವಾಗಿ ಕಾಂಗ್ರೆಸ್​ಗೆ ಪೈಪೋಟಿ ನೀಡಿ ಮತದಾರರನ್ನು ಸೆಳೆದಿದೆ. ಇನ್ನು ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ಸಿಎಂ ಇಬ್ರಾಹಿಂ ಅವರನ್ನು ಆಯ್ಕೆ ಮಾಡಿದೆ. ಎಲ್ಲ ಪಕ್ಷಗಳು ಮುಸ್ಲಿಂ ಮತದಾರರನ್ನು ತಮ್ಮಡೆಗೆ ಸೆಳೆಯುವ ಪ್ರಯತ್ನದಲ್ಲಿವೆ. ಮುಸ್ಲಿಂ ಮತ ಬ್ಯಾಂಕ್ ಒಡೆಯುವ ಮೂಲಕ ಬಿಜೆಪಿಗೆ ಗೆಲುವು ಸುಲಭವಾಗಲಿದೆ.

ಮುಸ್ಲಿಂ ಮತದಾರರ ಪ್ರಾಬಲ್ಯ ಹೆಚ್ಚಿರುವ ಕ್ಷೇತ್ರದಲ್ಲಿ ಸಹ ಗೆಲುವು ಸಿಗದೇ ಹೋಗಬಹುದು. ಇದರಿಂದ ಆಯಾ ಭಾಗದ ಕಾಂಗ್ರೆಸ್ ಮುಖಂಡರು ತಮ್ಮ ವ್ಯಾಪ್ತಿಯ ಮತದಾರರಿಗೆ ಅರಿವು ಮೂಡಿಸುವ ಕಾರ್ಯ ಮಾಡಬೇಕು. ಅವರನ್ನು ವಿಶ್ವಾಸಕ್ಕೆ ಪಡೆದು ಬೇರೆ ಪಕ್ಷಗಳತ್ತ ವಾಲದಂತೆ ನೋಡಿಕೊಳ್ಳಬೇಕು.

ಮುಸ್ಲಿಂ ಪ್ರಾಬಲ್ಯ ಇರುವ ಕ್ಷೇತ್ರದಲ್ಲಿ ಯಾರು ಜನಪ್ರಿಯ ನಾಯಕರಿದ್ದಾರೆ. ಅವರನ್ನು ಕಾಂಗ್ರೆಸ್ ಅಭ್ಯರ್ಥಿಯನ್ನಾಗಿಸುವ ಜತೆಗೆ ಅವರಿಗೆ ಪ್ರತಿಸ್ಪರ್ಧಿಯಾಗಿ ಬೇರೆ ಅಭ್ಯರ್ಥಿಗಳು ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದವರು ನಿಲ್ಲದಂತೆ ತಡೆಯುವ ಪ್ರಯತ್ನವನ್ನು ಮಾಡುವಂತೆ ಮನವೊಲಿಸುವ ಕಾರ್ಯ ಮಾಡುವಂತೆ ಮುಖಂಡರಿಗೆ ಸೂಚಿಸಲಾಯಿತು.

ರಾಜ್ಯದ ವಿವಿಧ ಭಾಗಗಳಲ್ಲಿ ಒಂದೊಂದು ಪಕ್ಷಗಳು ತಮ್ಮ ಪ್ರಾಬಲ್ಯವನ್ನು ಹೊಂದಿದ್ದು ಅಲ್ಪಸಂಖ್ಯಾತ ಮುಸಲ್ಮಾನ ಸಮುದಾಯದ ಮತವನ್ನು ಸೆಳೆಯುವ ಯತ್ನ ನಡೆಸಿವೆ. ಒಂದೊಮ್ಮೆ ಪ್ರಯತ್ನ ನಡೆಸದೇ ಮುಸ್ಲಿಂ ಮತಗಳು ವಿಭಜನೆ ಯಾದರೆ ಕಾಂಗ್ರೆಸ್ ಗೆಲ್ಲುವ ಸ್ಥಾನಗಳು ಕಡಿಮೆ ಆಗಲಿದೆ. ಹೀಗಾಗಿ ನಮ್ಮ ಮತ ಬ್ಯಾಂಕ್ ಉಳಿಸಿಕೊಳ್ಳುವ ಜತೆಗೆ ಮುಂದೆ ಮತಗಳು ಒಡೆಯದಂತೆ ಎಚ್ಚರಿಕೆ ವಹಿಸುವ ಸಂಬಂಧವಾಗಿಯೂ ಚರ್ಚೆ ನಡೆಸಿವೆ.


ಇದನ್ನೂಓದಿ:ಖರ್ಗೆ ಅಧ್ಯಕ್ಷರಾದ್ರೂ ಗಾಂಧಿ ಕುಟುಂಬದ ಮುಂದೆ ಜೀ ಹುಜೂರ್ ಸಂಸ್ಕೃತಿ ಬದಲಾಗಿಲ್ಲ: ಬಿಜೆಪಿ

ABOUT THE AUTHOR

...view details